ವಿವಾದಗಳ ನೆರಳಿನಲ್ಲಿ ಸಾಗುತ್ತಿರುವ ‘ದಿ ಕೇರಳ ಸ್ಟೋರಿ 2’ ಸಿನಿಮಾಗೆ ಇದೀಗ ಕಾನೂನು ಸವಾಲು ಎದುರಾಗಿದೆ. ಚಿತ್ರ ಬಿಡುಗಡೆಯನ್ನು ತಡೆಯುವಂತೆ ಕೋರಿ ಕೇರಳ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದ್ದು, ನ್ಯಾಯಾಲಯವು ಈ ಸಂಬಂಧ ಸೆನ್ಸಾರ್ ಮಂಡಳಿಗೆ ನೋಟಿಸ್ ಜಾರಿ ಮಾಡಿದೆ. ಫೆಬ್ರವರಿ 27ರಂದು ಸಿನಿಮಾ ಬಿಡುಗಡೆಗೊಳ್ಳಲು ಸಜ್ಜಾಗಿರುವ ಸಂದರ್ಭದಲ್ಲೇ ಈ ಬೆಳವಣಿಗೆ ಚಿತ್ರತಂಡಕ್ಕೆ ಸಂಕಷ್ಟವನ್ನುಂಟುಮಾಡಿದೆ.
ಕಣ್ಣೂರಿನ ಶ್ರೀದೇವ್ ಎಂಬುವರು ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ, ಈ ಚಿತ್ರದಲ್ಲಿ ಕೋಮುವಾದಕ್ಕೆ ಉತ್ತೇಜನ ನೀಡುವಂತಹ ಅಂಶಗಳಿವೆ ಎಂದು ಆರೋಪಿಸಲಾಗಿದೆ. ಚಿತ್ರದ ಟ್ರೇಲರ್ ಮತ್ತು ಪ್ರಚಾರದ ದೃಶ್ಯಗಳಲ್ಲಿ ‘ಲವ್ ಜಿಹಾದ್’ ಕುರಿತ ವಿವಾದಾತ್ಮಕ ವಿಷಯಗಳನ್ನು ಪ್ರಸ್ತಾಪಿಸಲಾಗಿದೆ. ಇದರಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಅರ್ಜಿದಾರರು ವಾದಿಸಿದ್ದಾರೆ. ಜೊತೆಗೆ, ಚಿತ್ರಕ್ಕೆ ಪ್ರಮಾಣಪತ್ರ ನೀಡಿರುವ ಕೇಂದ್ರ ಚಲನಚಿತ್ರ ಪ್ರಮಾಣಪತ್ರ ಮಂಡಳಿಯ (CBFC) ನಿರ್ಧಾರವನ್ನೂ ಪ್ರಶ್ನಿಸಲಾಗಿದೆ.
‘ದಿ ಕೇರಳ ಸ್ಟೋರಿ 2’ ಸಿನಿಮಾ, 2023ರಲ್ಲಿ ಬಿಡುಗಡೆಯಾಗಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ‘ದಿ ಕೇರಳ ಸ್ಟೋರಿ’ ಚಿತ್ರದ ಮುಂದುವರಿದ ಭಾಗವಾಗಿದೆ. ಮೊದಲ ಭಾಗವೂ ಲವ್ ಜಿಹಾದ್ ಮತ್ತು ಮತಾಂತರದ ವಿಷಯಗಳ ಹಿನ್ನೆಲೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಅದರ ಸೀಕ್ವೆಲ್ ಕೂಡ ಅದೇ ರೀತಿಯ ವಿಷಯಗಳನ್ನು ಮುಂದಿಟ್ಟುಕೊಂಡಿರುವುದು ಮತ್ತೊಮ್ಮೆ ವಿರೋಧಕ್ಕೆ ಕಾರಣವಾಗಿದೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೂಡ ಚಿತ್ರದ ವಿಷಯವಸ್ತು ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಸಮಾಜದಲ್ಲಿ ಭಿನ್ನಮತ ಸೃಷ್ಟಿಸುವ ಅಥವಾ ಧಾರ್ಮಿಕ ವೈಮನಸ್ಸಿಗೆ ಕಾರಣವಾಗುವಂತಹ ಚಿತ್ರಗಳಿಗೆ ಅವಕಾಶ ಕೊಡಬಾರದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲೇ ರಾಜ್ಯದ ಹಲವೆಡೆ ಸಾಮಾಜಿಕ ಸಂಘಟನೆಗಳು ಚಿತ್ರದ ವಿರುದ್ಧ ಪ್ರತಿಭಟನೆ ನಡೆಸಲು ಸಜ್ಜಾಗಿವೆ ಎಂಬ ಮಾಹಿತಿ ಇದೆ.
ನ್ಯಾಯಾಲಯವು ಅರ್ಜಿಯನ್ನು ಸ್ವೀಕರಿಸಿ ಸೆನ್ಸಾರ್ ಮಂಡಳಿಗೆ ನೋಟಿಸ್ ನೀಡಿದ್ದು, ಫೆಬ್ರವರಿ 24ರಂದು ಈ ಕುರಿತಂತೆ ವಿಚಾರಣೆ ನಡೆಯಲಿದೆ. ವಿಚಾರಣೆಯಲ್ಲಿ ನ್ಯಾಯಾಲಯ ಯಾವ ರೀತಿಯ ನಿರ್ದೇಶನ ನೀಡುತ್ತದೆ ಎಂಬುದರ ಮೇಲೆ ಚಿತ್ರದ ಬಿಡುಗಡೆ ಭವಿಷ್ಯ ನಿರ್ಧಾರವಾಗಲಿದೆ. ಒಂದು ವೇಳೆ ನ್ಯಾಯಾಲಯ ತಾತ್ಕಾಲಿಕ ತಡೆ ನೀಡಿದರೆ, ಫೆ.27ರ ಬಿಡುಗಡೆ ಯೋಜನೆಗೆ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಇದೆ.
ಚಿತ್ರಕ್ಕೆ ಕಾಮಾಕ್ಯ ನಾರಾಯಣ್ ಸಿಂಗ್ ನಿರ್ದೇಶನ ಮಾಡಿದ್ದು, ವಿಪುಲ್ ಅಮೃತ್ಲಾಲ್ ಶಾ ನಿರ್ಮಾಣ ಮಾಡಿದ್ದಾರೆ. ಅದಿತಿ ಭಾಟಿಯಾ, ಐಶ್ವರ್ಯಾ ಊಜಾ ಹಾಗೂ ಉಲ್ಕಾ ಗುಪ್ತಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವಿವಾದಗಳ ನಡುವೆಯೂ ಚಿತ್ರತಂಡವು ತಮ್ಮ ಸಿನಿಮಾವನ್ನು ಸಮಾಜದ ಒಂದು ವಾಸ್ತವಿಕ ಸಮಸ್ಯೆಯನ್ನು ಬೆಳಕಿಗೆ ತರುವ ಪ್ರಯತ್ನ ಎಂದು ಸಮರ್ಥಿಸಿಕೊಂಡಿದೆ.





