ತಮಿಳುನಾಡಿನ ಪ್ರಸಿದ್ಧ ನಟ ಮತ್ತು ಟಿವಿಕೆ ಪಕ್ಷದ ಅಧ್ಯಕ್ಷ ದಳಪತಿ ವಿಜಯ್ ವಿರುದ್ಧ ಉತ್ತರ ಪ್ರದೇಶದ ಮೌಲಾನಾ ಶಹಾಬುದ್ದೀನ್ ರಝವಿ ಫತ್ವಾ ಹೊರಡಿಸಿದ್ದಾರೆ. “ಮುಸ್ಲಿಮರು ವಿಜಯ್ಗೆ ಬೆಂಬಲ ನೀಡಬಾರದು ಮತ್ತು ಅವರನ್ನು ಯಾವುದೇ ಕಾರ್ಯಕ್ರಮಕ್ಕೆ ಆಹ್ವಾನಿಸಬಾರದು” ಎಂದು ಈ ಫತ್ವಾದಲ್ಲಿ ಹೇಳಲಾಗಿದೆ.
ಇಫ್ತಾರ್ ಕೂಟದಿಂದ ಶುರುವಾಯ್ತು ವಿವಾದ
ದಳಪತಿ ವಿಜಯ್ ಅವರು ತಮ್ಮ ರಾಜಕೀಯ ಪಕ್ಷದ ನಿರ್ವಹಣೆಯ ಅಂಗವಾಗಿ ಇಫ್ತಾರ್ ಕೂಟವನ್ನು ಹಮ್ಮಿಕೊಂಡಿದ್ದರು. ಈ ಕೂಟಕ್ಕೆ ವಿವಿಧ ಕ್ಷೇತ್ರಗಳ ಗಣ್ಯ ವ್ಯಕ್ತಿಗಳನ್ನು ಆಹ್ವಾನಿಸಲಾಗಿತ್ತು. ಆದರೆ, ಆಹ್ವಾನಿತರ ಪಟ್ಟಿಯಲ್ಲಿ ಜೂಜುಕೋರರು ಮತ್ತು ಮದ್ಯಪಾನಿಗಳೂ ಇದ್ದಾರೆ ಎಂಬ ಆರೋಪಗಳು ಕೇಳಿಬಂದವು. ಇದರಿಂದ ಮುಸ್ಲಿಂ ಸಮುದಾಯದ ಕೆಲವು ವರ್ಗಗಳಲ್ಲಿ ಅಸಮಾಧಾನ ಉಂಟಾಯಿತು.
#WATCH | Bareilly, Uttar Pradesh | On Fatwa against TVK President Vijay, President of All India Muslim Jamaat, Maulana Shahabuddin Razvi Bareilvi says, “…He has formed a political party and maintained cordial relations with Muslims. However, he has portrayed Muslims in a… pic.twitter.com/vMHXZBjPEo
— ANI (@ANI) April 17, 2025
ಮೌಲ್ವಿಯ ಫತ್ವಾ
ಮೌಲಾನಾ ಶಹಾಬುದ್ದೀನ್ ರಝ್ವಿಯವರು ‘ಎಎನ್ಐ’ ಸುದ್ದಿಸಂಸ್ಥೆಗೆ ನೀಡಿದ ಹೇಳಿಕೆಯಲ್ಲಿ ವಿಜಯ್ ಅವರ ನಡೆ ಇಸ್ಲಾಂ ಧರ್ಮದ ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. “ವಿಜಯ್ ಅವರು ತಮ್ಮ ಸಿನಿಮಾಗಳಲ್ಲಿ ಮುಸ್ಲಿಂ ಸಮುದಾಯವನ್ನು ಭಯೋತ್ಪಾದಕರಂತೆ ಚಿತ್ರಿಸುತ್ತಾರೆ. ಇಂತಹ ವ್ಯಕ್ತಿಯು ಇಫ್ತಾರ್ ಕೂಟದ ಹೆಸರಿನಲ್ಲಿ ಮುಸ್ಲಿಂ ಸಮಾಜದ ಭಾವನೆಗಳೊಂದಿಗೆ ಆಟವಾಡುತ್ತಿದ್ದಾರೆ,” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ, ತಮಿಳುನಾಡಿನ ಸುನ್ನಿ ಮುಸ್ಲಿಂ ಸಮುದಾಯದಿಂದ ಫತ್ವಾ ನೀಡಬೇಕೆಂಬ ಒತ್ತಡ ಬಂದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದಾಗಿ ಅವರು ತಿಳಿಸಿದರು. “ಮುಸ್ಲಿಮರು ವಿಜಯ್ಗೆ ಬೆಂಬಲ ನೀಡಬಾರದು, ಅವರ ರಾಜಕೀಯ ಕಾರ್ಯಕ್ರಮಗಳಿಗೆ ಹಾಜರಾಗಬಾರದು ಎಂದು ನಾನು ಫತ್ವಾ ಹೊರಡಿಸಿದ್ದೇನೆ,” ಎಂದು ಶಹಾಬುದ್ದೀನ್ ಹೇಳಿದರು.
ವಿಜಯ್ ವಿರುದ್ಧ ಅಣ್ಣಾಮಲೈ ಆಕ್ರೋಶ
ಈ ವಿವಾದವನ್ನು ಬಿಜೆಪಿ ನಾಯಕ ಅಣ್ಣಾಮಲೈ ಕೂಡಾ ವಿಜಯ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. “ನೀವು ಸಿನಿಮಾದಲ್ಲಿ ಕುಡಿಯುತ್ತೀರಿ, ಧೂಮಪಾನ ಮಾಡುತ್ತೀರಿ. ಇಫ್ತಾರ್ ಕೂಟದ ಮಹತ್ವ ನಿಮಗೆ ಗೊತ್ತಿಲ್ಲ. ಮುಸ್ಲಿಂ ಸಂಪ್ರದಾಯವನ್ನು ಅವಮಾನ ಮಾಡುವ ಕಾರ್ಯ ಇದಾಗಿದೆ,” ಎಂದು ಅಣ್ಣಾಮಲೈ ಟೀಕಿಸಿದರು.
ವಿಜಯ್ ಅವರ ಅಭಿಮಾನಿಗಳು ಹಾಗೂ ಟಿವಿಕೆ ಪಕ್ಷದ ಕಾರ್ಯಕರ್ತರು ಈ ಆರೋಪಗಳನ್ನು ಖಂಡಿಸಿ ಪ್ರತಿಕ್ರಿಯೆ ನೀಡಿದ್ದಾರೆ. “ವಿಜಯ್ ಯಾವಾಗಲೂ ಎಲ್ಲಾ ಧರ್ಮಗಳಿಗೆ ಗೌರವ ನೀಡಿರುವ ವ್ಯಕ್ತಿ. ಇಫ್ತಾರ್ ಕೂಟವು ಸೌಹಾರ್ದ ತತ್ವದ ಭಾಗವಾಗಿತ್ತು. ಇದನ್ನು ರಾಜಕೀಯವನ್ನಾಗಿ ಮಾಡುವ ಪ್ರಯತ್ನ ಖಂಡನೀಯ,” ಎಂದು ಹೇಳಿದ್ದಾರೆ.





