ಚೆನ್ನೈ: ಸೂರ್ಯ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಕರುಪ್ಪು’ ಇಂದು (ಮೇ14) ಬಿಡುಗಡೆಯಾಗಬೇಕಿತ್ತು. ಆದರೆ ಕೊನೇ ಕ್ಷಣದಲ್ಲಿ ಚಿತ್ರ ಬಿಡುಗಡೆಯನ್ನು ರದ್ದುಗೊಳಿಸಲಾಗಿದೆ. ಇದರಿಂದ ಸೂರ್ಯ ಅಭಿಮಾನಿಗಳಲ್ಲಿ ತೀವ್ರ ನಿರಾಸೆ ಹಾಗೂ ಆತಂಕ ತಲೆದೋರಿದೆ.
ಚಿತ್ರತಂಡವು ಅಭಿಮಾನಿಗಳಿಗೆ ಕ್ಷಮೆ ಕೇಳುವ ಪ್ರಕಟಣೆ ಹೊರಡಿಸಿದ್ದು, “ಆರ್ಥಿಕ ಸಮಸ್ಯೆಗಳನ್ನು ಬಗೆಹರಿಸಿ ಶೀಘ್ರದಲ್ಲೇ ಚಿತ್ರವನ್ನು ಬಿಡುಗಡೆ ಮಾಡುತ್ತೇವೆ” ಎಂದು ಭರವಸೆ ನೀಡಿದೆ.
ಆರ್ಥಿಕ ಸಂಕಷ್ಟ ಏಕೆ? ‘ಕರುಪ್ಪು’ ಚಿತ್ರದ ನಿರ್ಮಾಣ ವೆಚ್ಚ ಫೈನಾನ್ಸ್ ಬಡ್ಡಿ ಸೇರಿದಂತೆ ಸುಮಾರು ₹150 ಕೋಟಿ ತಲುಪಿದೆ. ಆದರೆ ಇದುವರೆಗೆ ಸುಮಾರು ₹124 ಕೋಟಿ ಮಾತ್ರ ರಿಕವರಿ ಆಗಿದೆ.
ಹಕ್ಕುಗಳ ವಿವರ:
- ತಮಿಳುನಾಡು ಏರಿಯಾ ಹಕ್ಕುಗಳು : ₹45 ಕೋಟಿ
- ಇತರ ರಾಜ್ಯಗಳು ಮತ್ತು ಓವರ್ಸೀಸ್ ಹಕ್ಕುಗಳು : ₹20 ಕೋಟಿ
- ಸ್ಯಾಟಲೈಟ್ ಮತ್ತು ಡಿಜಿಟಲ್ ಹಕ್ಕುಗಳು : ₹40 ಕೋಟಿ
- ಆಡಿಯೋ ಹಕ್ಕುಗಳು : ₹9 ಕೋಟಿ
ಇನ್ನೂ ಫೈನಾನ್ಸ್ ಕಂಪನಿಗಳಿಗೆ ಗಣನೀಯ ಮೊತ್ತ ಬಾಕಿ ಇದ್ದು, ಅದನ್ನು ಸೆಟಲ್ ಮಾಡದೆ ಚಿತ್ರ ಬಿಡುಗಡೆ ಮಾಡುವುದು ಕಷ್ಟವಾಗಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. ಈ ಸಮಸ್ಯೆ ಬಗೆಹರಿಸಲು ನಿರ್ಮಾಪಕರು ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ.
ಸೂರ್ಯ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಇಷ್ಟು ದಿನ ಕಾಯಿಸಿ ಕೊನೇ ಕ್ಷಣದಲ್ಲಿ ರಿಲೀಸ್ ರದ್ದು ಮಾಡುವುದು ಸರಿಯಲ್ಲ” ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ.
ಚಿತ್ರದ ನಿರ್ದೇಶಕ ಮತ್ತು ನಟ ಸೂರ್ಯ ಅವರು ಪರಿಸ್ಥಿತಿಯನ್ನು ಗಮನಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ‘ಕರುಪ್ಪು’ ಚಿತ್ರವು ಸೂರ್ಯ ಅವರ ಮತ್ತೊಂದು ಪ್ರಮುಖ ಪ್ರಯತ್ನವಾಗಿದ್ದು, ಅಭಿಮಾನಿಗಳು ದೀರ್ಘಕಾಲದಿಂದ ಕಾಯುತ್ತಿದ್ದರು.
ನಿರ್ಮಾಪಕರು ಶೀಘ್ರದಲ್ಲೇ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ಹೊಸ ರಿಲೀಸ್ ದಿನಾಂಕವನ್ನು ಘೋಷಿಸುವ ಸಾಧ್ಯತೆ ಇದೆ. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಅಭಿಮಾನಿಗಳಿಗೆ ನಿರಾಸೆಯೇ ಮುಖ್ಯವಾಗಿದೆ.
ಈ ರೀತಿಯಾಗಿ ಒಂದು ಚಿತ್ರ ತೆರೆ ಮೇಲೆ ಬರಬೇಕೆಂದರೆ ಎಷ್ಟೆಲ್ಲಾ ಅಡ್ಡಿಗಳನ್ನು ದಾಡಬೇಕು ಎನ್ನುವುದಕ್ಕೆ ಈ ಸಿನಿಮಾ ಒಂದು ಉದಾಹರಣೆಯಾಗಿದೆ. ಇದೇ ರಿತಿಯ ಹಣದ ಸಮಸ್ಯೆಗಳು ಎದುರಾಗಿ ಸಾಕಷ್ಟು ಸಿನಿಮಾ ತೆರೆ ಅಂಚಿನಿಂದ ಕಾಣೆಯಾಗಿದೆ ಹಾಗಾಗಿ ಇಂತಹ ಸಮಸ್ಯೆಗಳನ್ನು ಎದುರಿಸಿ ನಿಂತರೆ ಮಾತ್ರ ಸಿನಿಮಾಗಳು ತೆರೆ ಕಾಣುವುದಕ್ಕೆ ಸಾಧ್ಯ..




