ಬಾಲಿವುಡ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ಗೆ ಸುಧಾಮೂರ್ತಿ ಭೇಷ್ ಅಂದಿದ್ದಾರೆ. ಸಿತಾರೆ ಜಮೀನ್ ಪರ್ ನೋಡಿ ದಿಲ್ಖುಷ್ ಆಗಿರೋ ಸುಧಾಮೂರ್ತಿ ಫಸ್ಟ್ ರಿವ್ಯೂ ಕೊಟ್ಟಿದ್ದಾರೆ. ಬ್ಯಾನ್ ಆಗಬೇಕು ಎಂದಿದ್ದ ಈ ಸಿನಿಮಾ ಮೇಲೆ ಇದೀಗ ಭರವಸೆ ಹೆಚ್ಚಾಗಿದೆ. ಇಷ್ಟಕ್ಕೂ ಅಂಥದ್ದೇನಿದೆ ಚಿತ್ರದಲ್ಲಿ..? ಅವ್ರು ಕೊಟ್ಟ ರಿವ್ಯೂ ಏನು ಅಂತೀರಾ..? ನೀವೇ ನೋಡಿ.
- ಆಮೀರ್ ಹೊಸ ಕ್ರಾಂತಿ.. ಸಿತಾರೆಗೆ ಸುಧಾಮೂರ್ತಿ ರಿವ್ಯೂ
- ಸ್ಪೆಷಲ್ ಶೋ ನೋಡಿ ಹಾರ್ಟ್ ಟಚಿಂಗ್ ಎಂದ ಸುಧಮ್ಮ..!
- ಬದಲಾವಣೆ ತರುವ ಸಾಮರ್ಥ್ಯ.. ಜನರ ಕಣ್ತೆರೆಸುವ ಚಿತ್ರ..!
- ರಿಮೇಕ್ ಸಿನಿಮಾಗೆ ವ್ಹಾವ್ ಅಂತಿರೋದ್ಯಾಕೆ ಸೆಲೆಬ್ರಿಟೀಸ್ ?
ಸಿತಾರೆ ಜಮೀನ್ ಪರ್.. 2022ರಲ್ಲಿ ಲಾಲ್ ಸಿಂಗ್ ಚಡ್ಡಾ ಮೂವಿ ಬಳಿಕ ಮೂರು ವರ್ಷಗಳ ಬಿಗ್ ಗ್ಯಾಪ್ ಪಡೆದು, ಮತ್ತೆ ಆಮೀರ್ ಖಾನ್ ಭರ್ಜರಿ ಕಂಬ್ಯಾಕ್ ಮಾಡ್ತಿರೋ ಸಿನಿಮಾ. ಇದೇ ಜೂನ್ 20ಕ್ಕೆ ಸಿನಿಮಾ ತೆರೆಗಪ್ಪಳಿಸುತ್ತಿದ್ದು, ಟ್ರೈಲರ್ ಹಾಗೂ ಸ್ಯಾಂಪಲ್ಸ್ನಿಂದ ಭರವಸೆ ಮೂಡಿಸಿದೆ ಈ ವಿಭಿನ್ನ ಹಾಗೂ ವಿಶೇಷ ಪ್ರಯತ್ನ. ಇಲ್ಲಿ ಆಮೀರ್ ಖಾನ್ ನಟನೆ ಜೊತೆಗೆ ಇದರ ನಿರ್ಮಾಣ ಜವಾಬ್ದಾರಿ ಕೂಡ ಹೊತ್ತಿದ್ದಾರೆ.
ಆಪರೇಷನ್ ಸಿಂದೂರ ಹಾಗೂ ಅದಕ್ಕೂ ಮುನ್ನ ನಡೆದ ಪಹಲ್ಗಾಮ್ ಉಗ್ರರ ದಾಳಿ ವಿಚಾರ ಮೌನ ತಾಳಿದ್ದ ಆಮೀರ್ ಖಾನ್ಗೆ ಭಾರತೀಯರು ಲೆಫ್ಟು ರೈಟು ಕ್ಲಾಸ್ ತೆಗೆದುಕೊಂಡಿದ್ರು. ನಂತ್ರ ಸೋಶಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಹಾಕಿ ಸುಮ್ಮನಾದ್ರು. ಆದ ಈ ಸಿತಾರೆ ಜಮೀನ್ ಪರ್ ಚಿತ್ರಕ್ಕೆ ಬಾಯ್ಕಾಟ್ ಹಾಗೂ ಬ್ಯಾನ್ ಅಲೆ ಕೂಡ ಎದ್ದಿತ್ತು. ಆದ್ರೀಗ ಪರಿಸ್ಥಿತಿ ಹತೋಟಿಗೆ ಬಂದಂತಿದೆ. ಹಾಗಾಗಿಯೇ ಸಿನಿಮಾನ ರಿಲೀಸ್ ಮಾಡಿ ಕೋಟಿ ಕೋಟಿ ಲೂಟಿ ಮಾಡೋ ಪ್ಲಾನ್ನಲ್ಲಿದ್ದಾರೆ ಆಮೀರ್.
ಆರ್.ಎಸ್. ಪ್ರಸನ್ನ ನಿರ್ದೇಶನದ ಈ ಸಿನಿಮಾ ಬುದ್ದಿಮಾಂದ್ಯ ಮಕ್ಕಳ ಬಾಸ್ಕೆಟ್ ಬಾಲ್ ಕುರಿತ ಸ್ಫೋರ್ಟ್ಸ್ ಡ್ರಾಮಾ ಆಗಿದೆ. ಇಲ್ಲಿ ಆಮೀರ್ ಕರ್ನಾಟಕದ ಆಪೋಸಿಟ್ ಟೀಂನ ಕೋಚ್ ಆಗಿ ಕಾಣಸಿಗ್ತಾರೆ. ಈ ಎಮೋಷನಲ್ ಕಾಮಿಡಿ ಡ್ರಾಮಾ ಆಮೀರ್ರ ಈ ಹಿಂದಿನ ಬ್ಲಾಕ್ ಬಸ್ಟರ್ ಹಿಟ್ ತಾರೆ ಜಮೀನ್ ಪರ್ಗೂ ಕನೆಕ್ಟ್ ಮಾಡ್ತಿದ್ದಾರೆ ಜನ. ಟೈಟಲ್ ಹಾಗೂ ಕಥಾವಸ್ತು ಸಿಮಿಲರ್ ಇರೋದ್ರಿಂದ ಅದ್ರಂತೆ ಇದು ಕೂಡ ಬಿಗ್ ಹಿಟ್ ಆಗುವ ನಿರೀಕ್ಷೆಯಿದೆ.
ಆದ್ರೆ ಈ ಸಿನಿಮಾ ಒರಿಜಿನಲ್ ಅಲ್ಲ. ಫಾರೆಸ್ಟ್ ಗಂಪ್ ಸಿನಿಮಾನ ಕದ್ದು ಲಾಲ್ ಸಿಂಗ್ ಚಡ್ಡಾ ಮಾಡಿದ್ದ ಆಮೀರ್, ಈ ಬಾರಿ ಸ್ಪ್ಯಾನಿಶ್ನ ಚಾಂಪಿಯನ್ ಚಿತ್ರವನ್ನು ಕದ್ದು ಸಿತಾರೆ ಜಮೀನ್ ಪರ್ ಮಾಡಿದ್ದಾರೆ. ಜನ ಇದೊಂದು ರಿಮೇಕ್ ಸಿನಿಮಾ. ನೀನು ರಿಮೇಕ್ ರಾಜ ಅಂತೆಲ್ಲಾ ಆಡಿಕೊಳ್ಳಲು ಶುರುವಾದಾಗ ಅದಕ್ಕೆ ಸ್ಪಷ್ಟನೆ ಕೂಡ ನೀಡಿದ್ರು ಪರ್ಫೆಕ್ಷನಿಸ್ಟ್. ಷೇಕ್ಸ್ಪಿಯರ್ ನಾಟಕಗಳನ್ನು ಇಂದಿಗೂ ಸಿನಿಮಾಗಳಲ್ಲಿ ಬಳಸಿಕೊಳ್ತಾರೆ. ಹಾಗಂತ ಅದು ರಿಮೇಕ್ ಆಗಲ್ಲ. ಇದೂ ಕೂಡ ಸ್ಪ್ಯಾನಿಶ್ನ ಚಾಂಪಿಯನ್ ಚಿತ್ರದ ರಿಮೇಕ್ ಅಲ್ಲ. ಇದೊಂದು ವಿನೂತನ ಪ್ರಯತ್ನ ಎಂದಿದ್ದರು.
ಆದ್ರೀಗ ಜೂನ್ 20ಕ್ಕೂ ಮೊದಲೇ ಸಿನಿಮಾ ಸ್ಪೆಷಲ್ ಸ್ಕ್ರೀನಿಂಗ್ ಆಗಿದೆ. ಸುಧಾಮೂರ್ತಿ ಸೇರಿದಂತೆ ಒಂದಷ್ಟು ಮಂದಿ ಅತ್ಯಾಪ್ತರಿಗೆ ಸಿನಿಮಾ ತೋರಿಸಿರೋ ಆಮೀರ್, ಅದ್ರಿಂದ ಅವರ ಮನಸ್ಸುಗಳನ್ನ ಗೆದ್ದಿದ್ದಾರೆ. ಸುಧಾಮೂರ್ತಿ ಅವರು ಚಿತ್ರದ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿ, ಶ್ಲಾಘಿಸುತ್ತಾ ವಿಮರ್ಶೆ ನೀಡಿದ್ದಾರೆ. ಇದೊಂದು ಬದಲಾವಣೆ ತರುವ ಸಿನಿಮಾ ಆಗಲಿದ್ದು, ಜನರ ಕಣ್ತೆರೆಸಲಿದೆ ಎಂದಿದ್ದಾರೆ. ತಾತ್ವಿಕ ಪಾಠಗಳ ಜೊತೆ ಬೌದ್ದಿಕ ಅಸಾಮರ್ಥ್ಯದ ವಿಷಯದ ಬಗ್ಗೆ ಜನರನ್ನು ಸಂವೇದನಾಶೀಲರನ್ನಾಗಿ ಮಾಡಬಹುದು. ಯಾರೂ ಆ ಬುದ್ದಿಮಾಂದ್ಯರನ್ನು ಕೀಳಾಗಿ ನೋಡಬಾರದು ಅಂತ ಅಭಿಪ್ರಾಯ ಹೊರಹಾಕಿದ್ದಾರೆ.
ಸುಧಮ್ಮನ ಈ ಮಾತುಗಳಿಂದ ಪುಳಕಿತನಾಗಿರೋ ಆಮೀರ್, ಸಿನಿಮಾ ಸಾವಿರ ಕೋಟಿ ಗೆದ್ದಷ್ಟೇ ಖುಷಿಯಾಗಿದ್ದಾರೆ. ಸಿನಿಮಾ ಜೂನ್ 20ಕ್ಕೆ ಥಿಯೇಟರ್ಗೆ ಬರ್ತಿದ್ದು, ಜನರಿಗೆ ರುಚಿಸುತ್ತಾ ಇಲ್ವಾ ಅನ್ನೋದನ್ನ ನಿರೀಕ್ಷಿಸಬೇಕಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್