‘ಕಾಂತಾರ’ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಭರ್ಜರಿ ಯಶಸ್ಸು ಕಂಡ ನ್ಯಾಷನಲ್ ಅವಾರ್ಡ್ ವಿಜೇತ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರ ಮುಂದಿನ ಮಹತ್ವಾಕಾಂಕ್ಷೆಯ ಸಿನಿಮಾದ ಬಗ್ಗೆ ದೊಡ್ಡ ಅಪ್ಡೇಟ್ ಹೊರಬಿದ್ದಿದೆ. ಮರಾಠ ಸಾಮ್ರಾಜ್ಯದ ವೀರ ಯೋಧ ಛತ್ರಪತಿ ಶಿವಾಜಿ ಮಹಾರಾಜ್ ಅವರ ಜೀವನವನ್ನು ಆಧರಿಸಿರುವ ‘ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್’ ಎಂಬ ಸಿನಿಮಾ ಇದೀಗ ಎರಡು ಭಾಗಗಳ ದೃಶ್ಯ ಕಾವ್ಯವಾಗಿ ತೆರೆ ಮೇಲೆ ಕಾಣಲು ಸಿದ್ಧವಾಗುತ್ತಿದೆ.
ಈ ಹಿಂದೆ ಒಂದೇ ಭಾಗದಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆ ಚಿತ್ರತಂಡಕ್ಕೆ ಇತ್ತು. ಆದರೆ ಶಿವಾಜಿ ಮಹಾರಾಜ್ ಅವರ ಜೀವನ, ಹೋರಾಟ, ನಾಯಕತ್ವ ಮತ್ತು ಸಾಮ್ರಾಜ್ಯ ನಿರ್ಮಾಣದ ಕಥೆಯನ್ನು ಸಂಪೂರ್ಣವಾಗಿ ತೋರಿಸಲು ಎರಡು ಭಾಗಗಳಾಗಿ ಸಿನಿಮಾ ರೂಪಿಸಲು ಚಿತ್ರತಂಡ ನಿರ್ಧರಿಸಿದೆ.
ವರದಿಗಳ ಪ್ರಕಾರ, ಈ ಐತಿಹಾಸಿಕ ಚಿತ್ರಕ್ಕೆ ಸುಮಾರು 500 ಕೋಟಿ ರೂಪಾಯಿಗೂ ಅಧಿಕ ಬಜೆಟ್ ಮೀಸಲಿಡಲಾಗುತ್ತಿದೆ. ಈ ಮೂಲಕ ಭಾರತೀಯ ಚಿತ್ರರಂಗದ ಅತ್ಯಂತ ದುಬಾರಿ ಐತಿಹಾಸಿಕ ಸಿನಿಮಾಗಳ ಸಾಲಿಗೆ ಇದು ಸೇರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಚಿತ್ರದ ನಿರ್ದೇಶನವನ್ನು ಸಂದೀಪ್ ಸಿಂಗ್ ಅವರು ಮಾಡುತ್ತಿದ್ದು, ಶಿವಾಜಿ ಮಹಾರಾಜ್ ಅವರ ಜೀವನದ ಪ್ರಮುಖ ಘಟನೆಗಳನ್ನು ಅದ್ದೂರಿಯಾಗಿ ಜನರ ಮಂದೆ ತರುವ ಪ್ರಯತ್ನ ನಡೆಯುತ್ತಿದೆ. ಕೇವಲ ಮೂರು ಗಂಟೆಗಳ ಅವಧಿಯಲ್ಲಿ ಇಷ್ಟು ದೊಡ್ಡ ಇತಿಹಾಸವನ್ನು ಹೇಳುವುದು ಕಷ್ಟವಾಗಿರುವ ಕಾರಣ, ಕಥೆಯ ಆಳ ಮತ್ತು ವೈಭವವನ್ನು ಉಳಿಸಿಕೊಳ್ಳಲು ಎರಡು ಭಾಗಗಳ ಮಾದರಿ ಆಯ್ಕೆ ಮಾಡಲಾಗಿದೆ.
ಚಿತ್ರದ ಚಿತ್ರೀಕರಣಕ್ಕಾಗಿ ಮಹಾರಾಷ್ಟ್ರದ ಐತಿಹಾಸಿಕ ಹಿನ್ನೆಲೆಯ ನೈಜ ಸ್ಥಳಗಳನ್ನು ಬಳಸಲು ಚಿತ್ರತಂಡ ಯೋಜನೆ ರೂಪಿಸಿದೆ. ಇದರಿಂದ ಪ್ರೇಕ್ಷಕರಿಗೆ ಆ ಕಾಲಘಟ್ಟದ ಅನುಭವವನ್ನು ನೀಡುವ ಉದ್ದೇಶ ಹೊಂದಲಾಗಿದೆ.
ಈ ಸಿನಿಮಾದಲ್ಲಿ ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಪ್ರಮುಖ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ನಟಿ ಶೆಫಾಲಿ ಶಾ ರಾಜಮಾತೆ ಜೀಜಾಬಾಯಿ ಪಾತ್ರ ನಿರ್ವಹಿಸಲಿದ್ದಾರೆ. ಸಂಗೀತಕ್ಕೆ ಪ್ರೀತಮ್ ಹಾಗೂ ಛಾಯಾಗ್ರಹಣಕ್ಕೆ ರವಿವರ್ಮನ್ ಅವರು ಕೈಜೋಡಿಸುತ್ತಿದ್ದಾರೆ.
ಸದ್ಯ ರಿಷಬ್ ಶೆಟ್ಟಿ ಅವರು ಪ್ರಶಾಂತ್ ವರ್ಮ ನಿರ್ದೇಶನದ ‘ಜೈ ಹನುಮಾನ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಆ ಚಿತ್ರದ ಕೆಲಸಗಳು ಪೂರ್ಣಗೊಂಡ ಬಳಿಕ ‘ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್’ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಲಾಗಿದೆ.
ಭಾರತೀಯ ಸಿನಿಮಾಗಳಲ್ಲಿ ಈಗ ದೊಡ್ಡ ಕಥೆಗಳನ್ನು ಎರಡು ಭಾಗಗಳಲ್ಲಿ ಹೇಳುವ ಟ್ರೆಂಡ್ ಹೆಚ್ಚಾಗಿದ್ದು, ರಿಷಬ್ ಶೆಟ್ಟಿಯ ಈ ಐತಿಹಾಸಿಕ ಸಿನಿಮಾ ಕೂಡ ಅದೇ ಹಾದಿಯಲ್ಲಿ ಸಾಗುತ್ತಿದೆ. ಕಾಂತಾರ ಬಳಿಕ ಮತ್ತೊಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಶಭ್ ಶಟ್ಟಿ ಅವರನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.





