ಸ್ಯಾಂಡಲ್ವುಡ್ ನಟಿ ರಮ್ಯಾ ಅವರು ಇಂದು 16ನೇ ಬೆಂಗಳೂರು ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ಗೆ ಬಂದಿದ್ದು, ಡಿಕೆಶಿಯ ನಟ್ಟು ಬೋಲ್ಟು ಹೇಳಿಕೆ ಬೆನ್ನಲ್ಲೇ ಫಿಲ್ಮ್ ಫೆಸ್ಟಿವಲ್ಗೆ ಗೆ ನಟಿ ರಮ್ಯಾ ಬಂದಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ. ನಾಲ್ಕನೇ ದಿನದ ಫಿಲ್ಮ್ ಫೆಸ್ಟಿವಲ್ ನಲ್ಲಿ ನಟಿ ರಮ್ಯಾ ಕಾಣಿಸಿಕೊಂಡಿದ್ದಾರೆ.
ಫಿಲ್ಮ್ ಪ್ಯಾನೆಲ್ ಡಿಸ್ಕಷನ್: ರಮ್ಯಾ ಅಸಮಾಧಾನ
ನಟಿ ರಮ್ಯಾ ಚಿತ್ರರಂಗದ ಪ್ಯಾನೆಲ್ ಡಿಸ್ಕಷನ್ಗಿಂತ ಅತಿಥಿ ನಟರನ್ನು ಆಹ್ವಾನಿಸುವ ವಿಷಯದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ನನ್ನನ್ನು ಕರೆಯಬೇಡಿ, ಬೇರೆ ನಟಿಯರನ್ನು ಕರೆದುಕೊಂಡು ಮಾಡಿ” ಎಂದು ಹೇಳಿದ್ದಾರೆ. ಅಲ್ಲದೇ, ಎಲ್ಲಾ ಕಡೆ ನಟಿಯರಿಗೆ ಕಡಿಮೆ ಸಂಭಾವನೆ ನೀಡಲಾಗುತ್ತದೆ. ನೀವೇನ್ ಸರ್ ಡೈಲಿ ಪೇಮೆಂಟ್ ತಗೋತಿದ್ದೀರಾ ಎಂದು ಸಾಧು ಕೋಕಿಲ ಅವರ ಕಾಲು ಎಳೆದಿದ್ದಾರೆ ನಟಿ ರಮ್ಯಾ.
ಡಿಕೆಶಿ ಕುರಿತು ನಟಿ ರಮ್ಯಾ ಹೇಳಿಕೆ
ಡಿಕೆ ಶಿವಕುಮಾರ್ ನಟ್ಟು ಬೋಲ್ಟ್ ಹೇಳಿಕೆ ಕುರಿತು ಮಾತನಾಡಿದ ನಟಿ ರಮ್ಯಾ, “ನಾನು ಡಿಕೆ ಶಿವಕುಮಾರ್ ಅವರ ಹೇಳಿಕೆಯನ್ನು ಒಮ್ಮೆ ಒಪ್ಪಿಕೊಳ್ಳುತ್ತೇನೆ, ಇನ್ನೊಂದೆಡೆ ವಿರೋಧಿಸುತ್ತೇನೆ” ಎಂದು ಹೇಳಿದರು. ಜೊತೆಗೆ “ಮೀಟೂ” ವಿಚಾರದಲ್ಲಿ ಹೆಚ್ಚಿನ ಮಂದಿ ಬೆಂಬಲ ನೀಡಿಲ್ಲ ಎಂಬ ಮಾತನ್ನು ಅವರು ಹೊರಹಾಕಿದ್ದಾರೆ. “ನಾಯಕರು ಬೇಕು ಅಂತ ಮಾತ್ರಾ ಕೇಳ್ತೀರಾ, ಆದರೆ ನಾಯಕತ್ವದ ದೊಡ್ಡ ಜವಾಬ್ದಾರಿ ನನಗೆ ಬೇಡ” ಎಂದು ನಟಿ ರಮ್ಯಾ ಹೇಳಿದ್ದಾರೆ.
ರಶ್ಮಿಕಾ ಮಂದಣ್ಣ ಪರ ಬ್ಯಾಟ್ ಬೀಸಿದ ನಟಿ ರಮ್ಯಾ!
ಇನ್ನು ಇತ್ತೀಚಿನ ದಿನಗಳಲ್ಲಿ ನಟಿ ರಶ್ಮಿಕಾ ಮಂದಣ್ಣ ಟ್ರೋಲ್ ಆಗುತ್ತಿರುವ ಬಗ್ಗೆ ಮಾತನಾಡಿದ ರಮ್ಯಾ, ಟ್ರೋಲ್ ಮಾಡೋರಿಗೆ ಪ್ರಶ್ನೆ ಮಾಡಿದ್ದಾರೆ. “ರಶ್ಮಿಕಾ ಹೈದ್ರಾಬಾದ್ ನವರಾಗಿರಬಹುದು, ಅವರ ಮನೆಯೂ ಅಲ್ಲಿಯೇ ಇರಬಹುದು ಅದಕ್ಕೆ ರಶ್ಮಿಕಾ ನಾನು ಹೃದಾರಬಾದ್ನವಳು ಎಂದಿರಬಹುದು, ಆದರೆ ಅದಕ್ಕೆ ಅವರನ್ನ ಟ್ರೋಲ್ ಮಾಡೋದು ಸರಿ ಅಲ್ಲ” ಎಂದು ಹೇಳಿದ್ದಾರೆ.
‘ಹಾಸ್ಟೆಲ್ ಗೆ ಹುಡುಗರು ಬೇಕಾಗಿದ್ದಾರೆ’ ಚಿತ್ರದ ವಿವಾದ
‘ಹಾಸ್ಟೆಲ್ ಗೆ ಹುಡುಗರು ಬೇಕಾಗಿದ್ದಾರೆ’ ಚಿತ್ರದ ವಿವಾದಕ್ಕೆ ಸಂಬಂಧಿಸಿದಂತೆ, ಕಮರ್ಷಿಯಲ್ ಕೋರ್ಟ್ ಗೂ ಕೂಡ ಇಂದು ನಟಿ ರಮ್ಯಾ ಆಗಮಿಸಿದ್ದು, ವಕೀಲರ ಸಮೇತ ಕಮರ್ಷಿಯಲ್ ಕೋರ್ಟ್ ಗೆ ದಾಖಲೆಗಳನ್ನು ಸಲ್ಲಿಸಲು ನಟಿ ರಮ್ಯಾ ಆಗಮಿಸಿದ್ದರು.
ಹಾಸ್ಟೆಲ್ ಗೆ ಹುಡುಗರು ಬೇಕಾಗಿದ್ದಾರೆ ಚಿತ್ರದಲ್ಲಿ ಅನುಮತಿ ಇಲ್ಲದೆ ಪ್ರಚಾರಕ್ಕೆ ನನ್ನ ಪೋಟೋ ಬಳಸಿದ್ದಾರೆ ಎಂದು ನಟಿ ರಮ್ಯಾ ಕೋರ್ಟ್ ಮೊರೆ ಹೋಗಿದ್ದರು. ಈ ಬಗ್ಗೆ ಹೇಳಿಕೆ ನೀಡಿದ ಅವರು ‘ಹಾಸ್ಟೆಲ್ ಹುಡುಗರು ಸಿನಿಮಾ ವಿವಾದದ ವಿಚಾರಕ್ಕೆ ಕೋರ್ಟ್ ಗೆ ಬಂದೆ, ಟ್ರಯಲ್ ನಡೀತಾ ಇದೆ, ಮಾರ್ಚ್ 19 ಕ್ಕೆ ಮತ್ತೆ ಟ್ರಯಲ್ ಇದೆ. ಈಗ ಕೋರ್ಟ್ ಗೆ ದಾಖಲೆ ಕೊಡಲು ಬಂದಿದ್ದೆ. ನನಗೆ ಸಿನಿಮಾ ತಂಡ ಏನು ಮಾತು ಕೊಟ್ಟಿದ್ರೊ ಅದನ್ನ ವಾಪಸ್ ಕೊಡಲಿ’ ಎಂದು ಹೇಳಿದ್ದಾರೆ.