ಗಾಯಕಿ ಪೃಥ್ವಿ ಭಟ್ ಹಾಗೂ ಅಭಿಷೇಕ್ ಮದುವೆ ವಿಷ್ಯ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಟಾಕ್ ಆಫ್ ದಿ ಟೌನ್ ಆಗಿದೆ. ಮಗಳನ್ನ ಹೆತ್ತು, ಹೊತ್ತು, ಸಾಕಿದಂತಹ ತಂದೆ ಇದೊಂದು ವಶೀಕರಣದಿಂದ ಆಗಿರೋ ಮದ್ವೆ ಅಂತ ಅಳಲು ತೋಡಿಕೊಂಡಿದ್ದಾರೆ. ಆ ಕಡೆ ಸಾರಿ ಅಪ್ಪ, ನಾನು ಪ್ರೀತಿಸಿ ಮದ್ವೆ ಆಗಿದ್ದೇನೆ ಅಂತಿದ್ದಾಳೆ ಮಗಳು. ಏನು ಈ ವಿವಾದ ಅಂತೀರಾ..? ಈ ಸ್ಟೋರಿ ಒಮ್ಮೆ ನೋಡ್ಕೊಂಡ್ ಬನ್ನಿ.
ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಕೃಷ್ಣ ಪ್ರಣಯ ಸಖಿ ಚಿತ್ರದಲ್ಲಿ ಕಾಡದೆಯೇ ಹೇಗಿರಲಿ ಸಾಂಗ್, ಡಾರ್ಲಿಂಗ್ ಕೃಷ್ಣ ಅಭಿನಯದ ಕೌಸಲ್ಯ ಸುಪ್ರಜಾ ರಾಮ ಚಿತ್ರದಲ್ಲಿನ ಪ್ರೀತಿಸುವೆ ಸಾಂಗ್, ಇನ್ನೆಷ್ಟು ಬೇಕೆನ್ನ ಸೇರಿದಂತೆ ನೂರಾರು ಡಿವೋಷನಲ್ ಹಾಡುಗಳನ್ನ ಹಾಡುವ ಮೂಲಕ ಈಗಷ್ಟೇ ಭರವಸೆಯ ಗಾಯಕಿಯಾಗಿ ಬದುಕು ಕಟ್ಟಿಕೊಳ್ತಿದ್ದರು ಗಾಯಕಿ ಪೃಥ್ವಿ ಭಟ್. ಸರಿಗಮಪ ಸೀಸನ್-15ರ ಕಂಟೆಸ್ಟೆಂಟ್ ಕೂಡ ಆಗಿರೋ ಪೃಥ್ವಿ ಭಟ್ ದಿಢೀರ್ ಅಂತ ಮದ್ವೆ ಆಗಿ ಬಿಟ್ಟಿದ್ದಾರೆ. ಅವ್ರ ಮದ್ವೆ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ.
ಪೃಥ್ವಿ ಭಟ್ ಮದ್ವೆ ಆಗಿರೋ ಹುಡ್ಗನ ಹೆಸರು ಅಭಿಷೇಕ್. ವಾಹಿನಿಯೊಂದರಲ್ಲಿ ಕೆಲಸ ಮಾಡುವಾಗ ಪ್ರೇಮಾಂಕುರಿಸಿ, ಪರಸ್ಪರ ಇಷ್ಟ ಪಟ್ಟು, ನಾಲ್ಕೈದು ವರ್ಷಗಳ ನಂತ್ರ ಮದ್ವೆ ಆಗಿರೋದು ಸದ್ಯದ ಸುದ್ದಿ. ಆದ್ರೆ ಈ ಸುದ್ದಿ ಪೃಥ್ವಿ ಭಟ್ ಕುಟುಂಬಕ್ಕೂ ಆಘಾತ ತಂದಿದೆ. ಕಾರಣ, ಕುಟುಂಬಸ್ಥರ ಅಪ್ಪಣೆ ಇಲ್ಲದೆ ಆಗಿರೋ ಮದ್ವೆ ಇದು. ಈ ಬಗ್ಗೆ ಪೃಥ್ವಿ ಭಟ್ ತಂದೆ ಶಿವಪ್ರಸಾದ್ ಒಂದು ಆಡಿಯೋ ರಿವೀಲ್ ಮಾಡಿದ್ದು, ಅದರ ಪ್ರಕಾರ, ಹವ್ಯಕ ಬ್ರಾಹ್ಮಣನಾಗದ ಬೇರೆ ಜಾತಿಯ ಹುಡುಗನ ಜೊತೆ ಮಗಳು ಮದ್ವೆ ಆಗಿದ್ದಾಳೆ. ಅಷ್ಟೇ ಅಲ್ಲ, ಇದು ವಶೀಕರಣದಿಂದ ಆಗಿರೋ ಮದುವೆ ಅಂತ ಆರೋಪಿಸಿದ್ದಾರೆ.
ಅಂದಹಾಗೆ ಶಿವ ಪ್ರಸಾದ್ ಆರೋಪ, ಸಂಗೀತ ಗುರುಗಳಾದ ನರಹರಿ ದೀಕ್ಷಿತ್ ಮೇಲಾಗಿದೆ. ಅವರೇ ವಶೀಕರಣ ಮಾಡಿಸಿ, ಮಗಳಿಗೆ ಮದ್ವೆ ಮಾಡಿದ್ದಾರೆ ಅಂತ ಆರೋಪಿಸಿದ್ದಾರೆ. ಆದ್ರೆ ಮದ್ವೆ ಬಳಿಕ ಸೈಲೆಂಟ್ ಆಗಿದ್ದ ಪೃಥ್ವಿ ಭಟ್, ತಂದೆಯಂತೆ ತಾನು ಕೂಡ ಒಂದು ಆಡಿಯೋ ಹರಿಬಿಟ್ಟಿದ್ದಾರೆ ಗಾಯಕಿ ಪೃಥ್ವಿ ಭಟ್. ಅದರಲ್ಲಿ ಅಪ್ಪನಿಗೆ ಕ್ಷಮೆ ಕೂಡ ಕೇಳಿದ್ದು, ನನಗೆ ವೈಯಕ್ತಿಕವಾಗಿ ನಿರ್ಬಂಧ ಹೇರಿದ್ದು ಭಯ ತಂದಿತ್ತು. ಹಾಗಾಗಿ ಮನೆ ಬಿಟ್ಟು ಬಂದು ಮದ್ವೆ ಆದೆ. ನರಹರಿ ದೀಕ್ಷಿತ್ ಅವರನ್ನ ದ್ವೇಷಿಸಬೇಡಿ, ನಮ್ಮ ವಿಚಾರ ಅವರಿಗೆ ಗೊತ್ತೇ ಇಲ್ಲ ಅಂತ ಸ್ಪಷ್ಟ ಪಡಿಸಿದ್ದಾರೆ.
ಇನ್ನು ದೊಡ್ಡ ಆರೋಪ ಹೊತ್ತಿರೋ ನರಹರಿ ದೀಕ್ಷಿತ್ ಅವರು ಇದಕ್ಕೆ ಸ್ಪಷ್ಟನೆ ಕೂಡ ನೀಡಿದ್ದು, ನನಗೆ ಪೃಥ್ವಿ ಭಟ್ ತಂದೆ-ತಾಯಿ ಹಾಗೂ ಸೋದರ ಮಾನ ಸಿಕ್ಕಾಪಟ್ಟೆ ಹಿಂಸೆ ನೀಡ್ತಿದ್ದಾರೆ. ಮಗಳ ಬೆಳವಣಿಗೆಗಾಗಿ ಅವರಿಗೆ ಮಗಳ ಪ್ರೀತಿ ಬಗ್ಗೆ ಮಾಹಿತಿ ಇದ್ದರೂ ಸುಮ್ಮನಿದ್ದು, ಈಗ ಪರಿಸ್ಥಿತಿ ಕೈ ಮೀರಿ ಹೋದ ಬಳಿಕ ಹೀಗೆ ಆರೋಪ ಹೊರಿಸುತ್ತಿದ್ದಾರೆ ಅಂತ ವಾಟ್ಸಾಪ್ ಬರಹದ ಮೂಲಕ ತನ್ನ ತಪ್ಪಿಲ್ಲ ಅಂತ ಕ್ಲ್ಯಾರಿಟಿ ಕೊಟ್ಟಿದ್ದಾರೆ.
ಅದೇನೇ ಇರಲಿ, ಈ ವರೆಗೆ ಪೃಥ್ವಿ ಭಟ್ ಅವರ ತಂದೆ ಶಿವಪ್ರಸಾದ್ ಮಗಳನ್ನ ಮದ್ವೆ ಆಗಿರೋ ಅಭಿಷೇಕ್ ಮೇಲಾಗಲಿ ಅಥ್ವಾ ಸಂಗೀತ ಗುರುಗಳಾದ ನರಹರಿ ದೀಕ್ಷಿತ್ ಮೇಲಾಗಲಿ ಯಾವುದೇ ಕಂಪ್ಲೆಂಟ್ ದಾಖಲಿಸಿಲ್ಲ. ಜಾತಿಯ ಕಾರಣಕ್ಕೆ ಈ ರೀತಿ ಆಗ್ತಿದೆ ಅನ್ನೋದಾದ್ರೆ ಇದಕ್ಕಿಂತ ದುರಂತ ಮತ್ತೊಂದಿರಲಾರದು. ಯಾಕಂದ್ರೆ ಬಯಸಿದವರ ಜೊತೆ ಸಹಬಾಳ್ವೆ ನಡೆಸೋದನ್ನ ತಡೆಯೋ ಅಧಿಕಾರ ಯಾರಿಗೂ ಇಲ್ಲ. ಮೇಜರ್ ಆಗಿರೋ ಪೃಥ್ವಿ- ಅಭಿ ಕಾನೂನಿನ ಪ್ರಕಾರ ಮದ್ವೆ ಆಗಿರೋದು ತಪ್ಪೇನಿಲ್ಲ. ಆದ್ರೆ ಅದಷ್ಟು ಬೇಗ ಕುಟುಂಬ ಇವ್ರ ವಿವಾಹವನ್ನು ಒಪ್ಪುವಂತಾಗಲಿ. ಆಕೆ ಮತ್ತೆ ಖುಷಿಯಿಂದ ಕೋಗಿಲೆಯಂತೆ ಹಾಡುವಂತಾಗಲಿ ಅನ್ನೋದು ನಮ್ಮ ಆಶಯ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





