ಕನ್ನಡ ಚಿತ್ರರಂಗದ ಬಹುಮುಖ ನಟ ಪ್ರಮೋದ್ ಶೆಟ್ಟಿ ಅಭಿನಯದ ಹೊಸ ಸಿನಿಮಾ ಶೇಷ 2016 ಮಾರ್ಚ್ 6ರಂದು ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ಅವರು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಈಗಾಗಲೇ ಚಿತ್ರದ ಒಟಿಟಿ ಹಕ್ಕುಗಳು ಮಾರಾಟವಾಗಿರುವುದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಚಿತ್ರ ಬಿಡುಗಡೆಯ ಮುನ್ನವೇ ಪ್ರಚಾರ ಕಾರ್ಯಗಳು ಜೋರಾಗಿ ನಡೆಯುತ್ತಿದ್ದು, ಈ ವೇಳೆ ಪ್ರಮೋದ್ ಶೆಟ್ಟಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಪ್ರಚಾರ ಕಾರ್ಯಕ್ರಮದ ಸಂದರ್ಭದಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರ ಮದುವೆ ಕುರಿತ ಪ್ರಶ್ನೆ ಎದುರಾದಾಗ ಪ್ರಮೋದ್ ಶೆಟ್ಟಿ ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದ್ದಾರೆ. ಫೆಬ್ರವರಿ 26ರಂದು ನಟ ವಿಜಯ್ ದೇವರಕೊಂಡ ಅವರೊಂದಿಗೆ ರಶ್ಮಿಕಾ ಸಪ್ತಪದಿ ತುಳಿಯಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ..
“ರಶ್ಮಿಕಾ ಮದುವೆಯ ಆಮಂತ್ರಣ ಪತ್ರಿಕೆ ನಮಗಿನ್ನೂ ಬಂದಿಲ್ಲ. ಬಂದರೆ ಖಂಡಿತವಾಗಿಯೂ ಹೋಗುತ್ತೇನೆ,” ಎಂದು ಪ್ರಮೋದ್ ಶೆಟ್ಟಿ ಹೇಳಿದ್ದಾರೆ. “ಆದ್ರೆ ಅವರು ನಮ್ಮನ್ನೆಲ್ಲಾ ಮದುವೆಗೆ ಕರೆಯಲ್ಲ ಅನ್ನೋದು ಕೂಡ ಗೊತ್ತಿರುವ ವಿಚಾರವೇ. ಅದರಲ್ಲಿ ಹೊಸದೇನಿಲ್ಲ,” ಎಂದು ಹಾಸ್ಯಮಯವಾಗಿ ಟೀಕಿಸಿದ್ದಾರೆ. ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇದೇ ವೇಳೆ, ರಶ್ಮಿಕಾ ವಿಚಾರದಲ್ಲಿ ನಟ ರಕ್ಷಿತ್ ಶೆಟ್ಟಿ ಅವರಿಗೆ ಪಾಪಪ್ರಜ್ಞೆ ಕಾಡುತ್ತಿದೆಯೇ ಎಂಬ ಪ್ರಶ್ನೆಯನ್ನೂ ಕೇಳಲಾಯಿತು. ಇದಕ್ಕೆ ಪ್ರಮೋದ್ ಶೆಟ್ಟಿ ಖಡಕ್ ಉತ್ತರ ನೀಡಿದ್ದಾರೆ. “ಅದು ಯಾವ ಕಾಲದಲ್ಲೋ ಮುಗಿದು ಹೋದ ಅಧ್ಯಾಯ. ಅವನು ಏನಾದ್ರೂ ಚಿಕ್ಕ ಮಗುನಾ? ಅದನ್ನೇ ಹಿಡಿದುಕೊಂಡು ಕೊರಗುತ್ತಾ ಕೂತುಕೊಳ್ಳೋಕೆ? ಚಾಕ್ಲೆಟ್ ತಿನ್ನೋವ್ರಾ?” ಎಂದು ಪ್ರಶ್ನಿಸಿ, ಆ ವಿಚಾರ ಈಗ ಪ್ರಸ್ತುತವೇ ಅಲ್ಲ ಎಂದು ಹೇಳಿದ್ದಾರೆ.
ರಕ್ಷಿತ್ ಶೆಟ್ಟಿ ಬಗ್ಗೆ ಮಾತನಾಡಿದ ಅವರು, “ಸಿನಿಮಾ ಸಮಯದಲ್ಲಿ ಸ್ವಲ್ಪ ಕಳೆದು ಹೋಗ್ತಾನೆ. ಅವನಿಗೆ ನಮ್ಮಷ್ಟೇ ಅರ್ಜೆಂಟ್ ಅನ್ನಿಸೋದಿಲ್ಲ. ನಿಧಾನವಾಗಿ, ಆರಾಮಾಗಿ ಅವನು ಸಿನಿಮಾ ಮಾಡ್ತಾನೆ,” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನು ‘ಶೇಷ 2016’ ಚಿತ್ರದ ಬಗ್ಗೆ ಹೇಳುವುದಾದರೆ, ಮರಡಿಗುಡ್ಡ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಉಮೇಶ್ ಗೌಡ, ಮಂಜುವಾಣಿ ವಿ.ಎಸ್. ಮತ್ತು ವೀಣಾ ಎಸ್. ಅವರು ನಿರ್ಮಾಣ ಮಾಡುತ್ತಿದ್ದಾರೆ. ಪ್ರದೀಪ್ ಅರಸೀಕೆರೆ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ಅರ್ಚನಾ ಕೊಟ್ಟಿಗೆ, ಜಾನ್ ಕೈಪ್ಪಲ್ಲಿ, ಸಿದ್ಲಿಂಗು ಶ್ರೀಧರ್, ದೇವರಾಜ್, ಸಾಯಿ ಭೈರವ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿದ್ದು, ಆರ್.ಎಸ್. ಆನಂದ್ ಕುಮಾರ್ ಛಾಯಾಗ್ರಹಣ ಮಾಡಿದ್ದಾರೆ.





