ಡಾರ್ಲಿಂಗ್ ಪ್ರಭಾಸ್ ಸಿನಿಮಾಗಳಿಗಾಗಿ ಇಡೀ ವಿಶ್ವ ಸಿನಿದುನಿಯಾ ಕಾಯ್ತಿರುತ್ತೆ. ಅಂಥದ್ರಲ್ಲಿ ಬಾಹುಬಲಿ ಪ್ರಭಾಸ್ಗೆ ಆ್ಯಕ್ಟಿಂಗ್ ಬರಲ್ಲ ಅನ್ನೋ ಆರೋಪ ಕೇಳಿಬಂದಿದೆ. ಈ ಮಾತನ್ನ ಕೇಳ್ತಿದ್ದಂತೆ ಫ್ಯಾನ್ಸ್ ಸಖತ್ ಗರಂ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆರೋಪಿಸಿದ ವ್ಯಕ್ತಿ ವಿರುದ್ಧ ಕಿಡಿಕಾರಿದ್ದಾರೆ. ಇಷ್ಟಕ್ಕೂ ಯಾರು ಆತ..? ಆಗಿದ್ದೇನು ಅನ್ನೋದಕ್ಕೆ ಈ ಸ್ಟೋರಿ ನೋಡಿ.
ಪ್ರಭಾಸ್.. ಬಾಹುಬಲಿ ಸಿನಿಮಾದಿಂದ ಹುಟ್ಟಿಕೊಂಡ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್. ಹೌದು.. ಹತ್ತು ವರ್ಷಗಳ ಹಿಂದೆ ರಾಜಮೌಳಿಯ ದೃಶ್ಯಕಾವ್ಯಗಳಾದ ಬಾಹುಬಲಿ ಸಿನಿಮಾಗಳಿಂದ ವಿಶ್ವ ಸಿನಿದುನಿಯಾದಲ್ಲಿ ತನ್ನದೇ ಆದ ಛಾಪು ಮೂಡಿಸ್ತಾರೆ ಡಾರ್ಲಿಂಗ್. ಅದಾದ ಬಳಿಕ ಸಾಲು ಸಾಲು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಬಣ್ಣ ಹಚ್ಚುವ ಪ್ರಭಾಸ್ಗೆ ಸಾಹೋ, ರಾಧೆ ಶ್ಯಾಮ್ ಹಾಗೂ ಆದಿಪುರುಷ್ ಕೈ ಕೊಡುತ್ತವೆ.
ಹ್ಯಾಟ್ರಿಕ್ ಸೋಲಿನಿಂದ ಕಂಗೆಡದ ಡಾರ್ಲಿಂಗ್, ಸಲಾರ್ ಹಾಗೂ ಕಲ್ಕಿ ಸಿನಿಮಾಗಳಿಂದ ಭರ್ಜರಿ ಕಂಬ್ಯಾಕ್ ಮಾಡ್ತಾರೆ. ಇವೆರಡೂ ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಸುನಾಮಿ, ಸುಂಟರಗಾಳಿ ರೀತಿ ಪೈಸಾ ವಸೂಲ್ ಮಾಡುತ್ತವೆ. ಪ್ರಭಾಸ್ ಈಸ್ ಬ್ಯಾಕ್ ಅಂತ ಇಡೀ ಅಭಿಮಾನಿ ವೃಂದ ಸಂಭ್ರಮಿಸುತ್ತೆ.
ಮಲ್ಟಿ ಸ್ಟಾರರ್ ಸಿನಿಮಾಗಳಿಂದಲೂ ಎಲ್ಲರ ದಿಲ್ ದೋಚುತ್ತಿರುವ ಪ್ರಭಾಸ್, ಅದ್ಭುತ ಕಲಾವಿದ. ಎಲ್ಲಕ್ಕಿಂತ ಮಿಗಿಲಾಗಿ ಅತ್ಯದ್ಭುತ ವ್ಯಕ್ತಿತ್ವವುಳ್ಳ ಸ್ಟಾರ್. ಸಿನಿಮಾಗಳಲ್ಲಿನಂತೆ ನಿಜ ಜೀವನದಲ್ಲೂ ಈತ ಹೀರೋ. ಅದು ಇಡೀ ಚಿತ್ರರಂಗಕ್ಕೆ ಗೊತ್ತಿರುವ ವಿಷಯ. ಸದ್ಯ ಪ್ರಭಾಸ್ರ ಹಾರರ್ ಸಿನಿಮಾ ರಾಜಾಸಾಬ್ ರಿಲೀಸ್ಗೆ ಸಜ್ಜಾಗ್ತಿದೆ. ಇದರ ಮಧ್ಯೆ ಕಣ್ಣಪ್ಪ ಸಿನಿಮಾ ಕೂಡ ತೆರೆಗಪ್ಪಳಿಸುತ್ತಿದೆ.
ಹೌದು.. ಮಂಚು ವಿಷ್ಣು ಲೀಡ್ನಲ್ಲಿ ನಟಿಸಿ, ನಿರ್ಮಿಸಿರೋ ಫ್ಯಾಂಟಸಿ ಎಂಟರ್ಟೈನರ್ ಕಣ್ಣಪ್ಪ, ಇದೇ ಜೂನ್ 27ಕ್ಕೆ ಪ್ರೇಕ್ಷಕರ ಮುಂದೆ ಬರ್ತಿದೆ. ಸಾಕಷ್ಟು ಮಂದಿ ಬಹುಭಾಷಾ ಸೂಪರ್ ಸ್ಟಾರ್ಸ್ ತಾರಾಗಣದಲ್ಲಿದ್ದು, ರುದ್ರನ ಪಾತ್ರದಲ್ಲಿ ಪ್ರಭಾಸ್ ಮಿಂಚಲಿದ್ದಾರೆ. ಈ ಸಿನಿಮಾದ ಪ್ರಮೋಷನ್ಸ್ ಜೋರಾಗಿ ನಡೀತಿದ್ದು, ನಟ ಮಂಚು ವಿಷ್ಣು ಸಂದರ್ಶನವೊಂದರಲ್ಲಿ ಪ್ರಭಾಸ್ ಬಗ್ಗೆ ಕೇವಲವಾಗಿ ಮಾತನಾಡಿದ್ದಾರೆ.
ಪ್ರಭಾಸ್ ಒಬ್ಬ ಸಾಧಾರಣ ನಟ. ಮೋಹನ್ ಲಾಲ್ ದೊಡ್ಡ ಸೂಪರ್ ಸ್ಟಾರ್ ಅಂತ ಹೋಲಿಕೆ ಮಾಡಿ ಹಗುರವಾಗಿ ಮಾತನಾಡಿದ್ದಾರೆ. ಇದರ ಅರ್ಥ ಪ್ರಭಾಸ್ ನಟನೆ ಬಗ್ಗೆ ಕಾಮೆಂಟ್ ಮಾಡಿರೋದು ಅಂತ ಡಾರ್ಲಿಂಗ್ ಪ್ರಭಾಸ್ ಫ್ಯಾನ್ಸ್ ಮಂಚು ವಿಷ್ಣು ವಿರುದ್ಧ ರೊಚ್ಚಿಗೆದ್ದಿದ್ದಾರೆ. ಅಂದಹಾಗೆ ಕಣ್ಣಪ್ಪ ಚಿತ್ರದ ರುದ್ರ ಪಾತ್ರವನ್ನು ಪ್ರಭಾಸ್ ಒಂದು ಪೈಸೆ ಕೂಡ ರೆಮ್ಯುನರೇಷನ್ ಪಡೆಯದೆ ಮಾಡಿಕೊಟ್ಟಿದ್ದಾರೆ ಎನ್ನಲಾಗ್ತಿದೆ. ಬಹುದೊಡ್ಡ ಫ್ಯಾನ್ ಫಾಲೋಯಿಂಗ್ ಇರೋ ಪ್ರಭಾಸ್, ಫ್ರೀ ಆಗಿ ಆ್ಯಕ್ಟ್ ಮಾಡಿದ್ದಲ್ಲದೆ, ಹೀಗೆಲ್ಲಾ ಅನಿಸಿಕೊಳ್ಳಬೇಕಾ ಅಂತ ಫ್ಯಾನ್ಸ್ ಪ್ರಶ್ನಿಸುತ್ತಿದ್ದಾರೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್