ಪಹಲ್ಗಾಮ್ ಟೆರರ್ ಅಟ್ಯಾಕ್ಗೆ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗ್ತಿದೆ. ದೇಶದ ಬೇರೆ ಬೇರೆ ಚಿತ್ರರಂಗದ ಸೂಪರ್ ಸ್ಟಾರ್ಗಳಂತೆ ನಮ್ಮ ಸ್ಯಾಂಡಲ್ವುಡ್ ಸ್ಟಾರ್ಗಳೂ ಇದನ್ನು ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೆ, ಉಗ್ರರ ಮೇಲೆ ಸೇಡು ತೀರಿಸಿಕೊಳ್ಳಲೇಬೇಕು ಅಂತ ಪಟ್ಟು ಹಿಡಿದಿದ್ದಾರೆ. ಹಾಗಾದ್ರೆ ಯಾವ ಸ್ಟಾರ್ ಏನು ಹೇಳಿದ್ರು ಅನ್ನೋದನ್ನ ಅವ್ರ ಬಾಯಿಂದಲೇ ಕೇಳಿ.
ಪಹಲ್ಗಾಮ್ನಲ್ಲಿ ನಡೆದಿರುವ ಭಯಾನಕ ಭಯೋತ್ಪಾದಕ ದಾಳಿ ಕಂಡು ಇಡೀ ದೇಶವೇ ಕೆಂಡ ಕಾರುತ್ತಿದೆ. ಅಮಾಯಕ ಪ್ರವಾಸಿಗರ ಮೇಲೆ ನಡೆದ ಈ ನೀಚ ಕೃತ್ಯ ದೇಶವಾಸಿಗಳ ರಕ್ತ ಕುದಿಯುವಂತೆ ಮಾಡಿದೆ. ಮನುಷ್ಯರ ರೂಪದಲ್ಲಿರೋ ರಾಕ್ಷಸರ ವಿರುದ್ಧ ಸ್ಯಾಂಡಲ್ವುಡ್ ಸ್ಟಾರ್ ನಟರು ಕೂಡ ಆಕ್ರೋಶ ಹೊರ ಹಾಕಿದ್ದಾರೆ. ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರೋ ಶಿವಣ್ಣ, ಯಾಕಿಷ್ಟು ಕೋಪ ಗೊತ್ತಿಲ್ಲ. ಮಾನವೀಯತೆ ತುಂಬಾ ಮುಖ್ಯ. ಯಾಕೆ ಈ ಮಟ್ಟಕ್ಕೆ ಹೋಗ್ತಿದೆ ಗೊತ್ತಿಲ್ಲ. ಸಾವಿನ ಸುದ್ದಿ ನಿಜಕ್ಕೂ ಬೇಸರ ತಂದಿದೆ. ಉಗ್ರಗಾಮಿಗಳಿಗೆ ಶಿಕ್ಷೆ ಆಗಲೇಬೇಕು ಎಂದಿದ್ದಾರೆ.
ನಟ ಯಶ್ ಎಕ್ಸ್ನಲ್ಲಿ ಪಹಲ್ಗಾಮ್ನಲ್ಲಿ ಮುಗ್ಧ ಜನರ ಕ್ರೂರ ಹತ್ಯೆಯಿಂದ ತೀವ್ರ ದುಃಖವಾಗಿದೆ. ಮುಗ್ಧ ಜನರ ಮೇಲಿನ ದಾಳಿಯನ್ನು ಊಹಿಸಲು ಸಾಧ್ಯವಿಲ್ಲ. ಈ ಭೀಕರ ದುರಂತದಲ್ಲಿ ಸಂತ್ರಸ್ತರ ಕುಟುಂಬಗಳು ಮತ್ತು ರಾಷ್ಟ್ರದೊಂದಿಗೆ ದೃಢವಾಗಿ ನಾವೆಲ್ಲಾ ನಿಲ್ಲುತ್ತೇವೆ ಎಂದು ಬರೆದುಕೊಂಡಿದ್ದಾರೆ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೂಡ ಎಕ್ಸ್ನಲ್ಲಿ ಖಂಡನೆ ವ್ಯಕ್ತಪಡಿಸಿದ್ದಾರೆ. ಪಹಲ್ಗಾಮ್ನಲ್ಲಿ ಮುಗ್ಧ ಪ್ರವಾಸಿಗರ ಮೇಲೆ ನಡೆದ ಕ್ರೂರ ದಾಳಿ ನಿಜಕ್ಕೂ ಹೃದಯ ವಿದ್ರಾವಕ. ಇದು ಕೇವಲ ವ್ಯಕ್ತಿಗಳ ಮೇಲಿನ ದಾಳಿಯಲ್ಲ, ಬದಲಾಗಿ ನಮ್ಮ ರಾಷ್ಟ್ರದ ಸ್ಫೂರ್ತಿಯ ಮೇಲಿನ ದಾಳಿ. ಇದು ಸಂಯಮದ ಸಮಯವಲ್ಲ, ಬಲವಾದ ಮತ್ತು ಸ್ಪಷ್ಟವಾದ ಪ್ರತಿಕ್ರಿಯೆ ನೀಡಬೇಕಾದ ಸಮಯ ಎಂದು ಸುದೀಪ್ ಆಕ್ರೋಶ ಹೊರ ಹಾಕಿದ್ದಾರೆ.
ಅಂದಹಾಗೆ ಉಗ್ರರ ದಾಳಿ ಬಗ್ಗೆ ಖಾರವಾಗಿ ಗುಡುಗಿದ್ದಾರೆ ನಟ ಧ್ರುವ ಸರ್ಜಾ. ಭಾರತಾಂಬೆಯ ಕಳಶದಂತಿರೋ ಜಮ್ಮು ಮತ್ತು ಕಾಶ್ಮೀರ ಎಂದಿಗೂ ನಮ್ಮದೇ. ಟೆರರಿಸ್ಟ್ ಗಳಿಗೆ ಬಾಸ್ಟರ್ಡ್ಸ್ ಎಂದು ಬೈಯೋ ಮೂಲಕ ತರಾಟೆಗೆ ತಗೆದುಕೊಂಡ ಧ್ರುವ, ಅವರಿಗೆ ಅರ್ಥ ಆಗೋ ಭಾಷೆನಲ್ಲಿ ನಮ್ಮ ಇಂಡಿಯನ್ ಆರ್ಮಿ ಉತ್ತರ ಕೊಟ್ಟೆ ಕೊಡುತ್ತೆ ಎಂದಿದ್ದಾರೆ.
ನಟಿ ರಾಗಿಣಿ ದ್ವಿವೇದಿ ಕೂಡ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಇಂತಹ ಘಟನೆ ನಡೆದದ್ದು ದುರದೃಷ್ಟಕರ ಸಂಗತಿ. ಅಮಾಯಕ ಪ್ರವಾಸಿಗರನ್ನ ಕೊಂದಿರುವ ಘಟನೆ ತುಂಬಾ ನೋವಿನ ವಿಷಯ. ಉಗ್ರರು ಕ್ರೂರವಾಗಿ ಸಾಯಿಸಿದ್ದಾರೆ. ಅದನ್ನು ನೋಡಿದ್ರೆ ಭಯಂಕರ ಕೋಪ ಬರುತ್ತದೆ. ಭಾರತೀಯರಾದ ನಾವು ಪ್ರತಿಯೊಂದು ಧರ್ಮವನ್ನ ಸಮಾನವಾಗಿ ನೋಡುತ್ತೇವೆ. ಕಾಶ್ಮೀರದಲ್ಲಿ ಹೀಗೆ ನಡೆದಿರೋದು ಅತ್ಯಂತ ದುರದೃಷ್ಟಕರ. ಈ ಘಟನೆ ಬಗ್ಗೆ ಸ್ಟ್ರಾಂಗ್ ಆಗಿ ನಮ್ಮ ದೇಶ ಹೆಜ್ಜೆ ಇಡಬೇಕು ಅಂತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೆಲ್ಲಾ ಯಾರು ಮಾಡಿದ್ದಾರೋ ಅವರನ್ನು ಹುಡುಕಿಕೊಂಡು ಹೋಗಿ ಹೊಡೆಯಬೇಕು. ಅಲ್ಲಿ ಸಮಾಧಾನವಿಲ್ಲ. ಈ ಬಗ್ಗೆ ಸರ್ಕಾರ ಕೆಲಸ ಮಾಡುತ್ತಿದೆ. ಒಬ್ಬ ನಾಗರೀಕನಾಗಿ ಹೇಳಬೇಕು ಅಂದ್ರೆ ಉಗ್ರರ ದಾಳಿ ವಿಷ್ಯ ಕೇಳಿ ಮೈಯಲ್ಲಿ ರಕ್ತ ಕುದಿಯುತ್ತಿದೆ. ಅವರು ಸಂಹಾರ ಆಗೋವರೆಗೂ ನಮಗೆ ನೆಮ್ಮದಿಯಿಲ್ಲ. ಅಮಾಯಕರ ಜೀವ ತೆಗೆದಿದ್ದಾರೆ. ಅದಕ್ಕೆ ಉಗ್ರರ ಅಂತ್ಯ ಆಗಲೇಬೇಕು ಅಂತ ಶ್ರೀಮುರಳಿ ಆಗ್ರಹಿಸಿದ್ದಾರೆ.
ವಿವಾದಗಳಿಂದ ದೂರ ಉಳಿಯುವ ವಿನೋದ್ ರಾಜ್ ನಮ್ಮ ದೇಶ, ನೆಲ, ಜಲ, ಭಾಷೆ ಅಂತ ಬಂದಾಗ ಒಂದು ಹೆಜ್ಜೆ ಮುಂದೆ ಇರ್ತಾರೆ. ವಿಶ್ವದಲ್ಲಿ ಇರೋದು ಒಂದೇ ಹಿಂದೂಸ್ಥಾನ. ನಮ್ಮ ಹಿಂದೂಸ್ಥಾನದಲ್ಲಿ ನಮಗೇ ಸ್ಥಾನ ಇಲ್ಲ ಅನ್ನುವಂತಹ ಪರಿಸ್ಥಿತಿ ಎದುರಾಗಬಾರದು. ನಮ್ಮ ಸಂಸ್ಕೃತಿ, ಸಂಸ್ಕಾರ ಉಳಿಯಬೇಕು. ಅನುಕಂಪ, ವಾತ್ಸಲ್ಯ ಭಾರತ ಮಣ್ಣಿಗೆ ಮಾತ್ರ ಚೆನ್ನಾಗಿ ಗೊತ್ತಿದೆ. ಯುದ್ಧ ಮಾಡೋದು ಶ್ರೇಷ್ಠ ಅಲ್ಲ ಅಂತ ಅನಿಸುತ್ತದೆ ಎಂದಿದ್ದಾರೆ.
ದೊಡ್ಮನೆ ಕುಡಿ ಯುವರಾಜ್ ಕುಮಾರ್ ಮಾತಾನಾಡಿ, ಉಗ್ರರಿಗೆ ತಕ್ಕ ಶಿಕ್ಷೆ ಆಗ್ಬೇಕು. ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದಿರೋ ದಾಳಿ ಖಂಡನೀಯ. ಈ ರೀತಿ ಮುಗ್ಧ ಜನರನ್ನ ಕೊಲ್ಲೋದು ಸರಿಯಲ್ಲ. ದಾಳಿ ನಡೆಸಿದ ಉಗ್ರರಿಗೆ ತಕ್ಕ ಶಿಕ್ಷೆ ಆಗ್ಬೇಕು ಅಂತ ಆಕ್ರೋಶ ಹೊರಹಾಕಿದ್ದಾರೆ.
ಒಟ್ಟಾರೆ ಒಗ್ಗಟ್ಟಿನಿಂದ ಸ್ಯಾಂಡಲ್ವುಡ್ ಈ ಘಟನೆಯನ್ನು ಖಂಡಿಸಿದ್ದು, ಅವರ ಫ್ಯಾನ್ಸ್ಗೂ ಖುಷಿ ತಂದಿದೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್.





