ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ‘ನಂದಗೋಕುಲ’ ಧಾರಾವಾಹಿಯ ಕೇಶವ ಪಾತ್ರದ ಮೂಲಕ ಕಿರುತೆರೆ ಪ್ರೇಕ್ಷಕರ ಮನಗೆದ್ದಿದ್ದ ನಟ ಯಶ್ವಂತ್ ಕುಮಾರ್ ಎಸ್ಎಸ್ ಇದೀಗ ಸೀರಿಯಲ್ಗೆ ವಿದಾಯ ಹೇಳಿದ್ದಾರೆ. ಸುಮಾರು 350 ಸಂಚಿಕೆಗಳ ಕಾಲ ಕೇಶವನಾಗಿ ಕಾಣಿಸಿಕೊಂಡಿದ್ದ ಯಶ್ವಂತ್, ತಮ್ಮ ಕಿರುತೆರೆ ಪಯಣದ ಈ ಅಧ್ಯಾಯವನ್ನು ಮುಗಿಸಿ ಇದೀಗ ಬೆಳ್ಳಿಪರದೆಯತ್ತ ಹೆಜ್ಜೆ ಇಡುತ್ತಿದ್ದಾರೆ.
ಯಶ್ವಂತ್ ಕುಮಾರ್ ಧಾರಾವಾಹಿಯಿಂದ ಹೊರಬಂದಿರುವ ಸುದ್ದಿ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಕೇಶವ ಪಾತ್ರದ ಮೂಲಕ ಮನೆಮಾತಾಗಿದ್ದ ನಟ ದಿಢೀರ್ ಆಗಿ ಸೀರಿಯಲ್ ತೊರೆದಿರುವುದಕ್ಕೆ ನಿಖರ ಕಾರಣವೇನು ಎಂಬ ಪ್ರಶ್ನೆಯೂ ಅಭಿಮಾನಿಗಳಲ್ಲಿ ಮೂಡಿತ್ತು. ಇದೀಗ ಸ್ವತಃ ಯಶ್ವಂತ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಭಾವುಕ ಪೋಸ್ಟ್ನಲ್ಲಿ ಈ ನಿರ್ಧಾರದ ಬಗ್ಗೆ ಮಾಹಿತಿ ನೀಡಿದ್ದಾರೆ.
ತಮ್ಮ ಪೋಸ್ಟ್ನಲ್ಲಿ ‘ಕೇಶವ’ ಪಾತ್ರ ತಮ್ಮ ಹೃದಯಕ್ಕೆ ಅತ್ಯಂತ ಹತ್ತಿರವಾಗಿತ್ತು ಎಂದು ಯಶ್ವಂತ್ ಹೇಳಿದ್ದಾರೆ. ಸುಮಾರು 350 ಸಂಚಿಕೆಗಳ ಕಾಲ ಪ್ರೇಕ್ಷಕರು ಕೇಶವನನ್ನು ತಮ್ಮ ಮನೆಯ ಮಗನಂತೆ ಸ್ವೀಕರಿಸಿ ಅಪಾರ ಪ್ರೀತಿ ಹಾಗೂ ಬೆಂಬಲ ನೀಡಿದ್ದಕ್ಕಾಗಿ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
‘ನಂದಗೋಕುಲ’ ಧಾರಾವಾಹಿಯಿಂದ ಹೊರಬರುವುದು ಸುಲಭದ ನಿರ್ಧಾರವಾಗಿರಲಿಲ್ಲ ಎಂದು ಹೇಳಿರುವ ಯಶ್ವಂತ್, ಪಾತ್ರದ ಬೆಳವಣಿಗೆ, ಹಲವು ಚರ್ಚೆಗಳು ಹಾಗೂ ಕೆಲವು ವೃತ್ತಿಪರ ವಿಚಾರಗಳನ್ನು ಪರಿಗಣಿಸಿದ ಬಳಿಕ ಮುಂದಿನ ಅಧ್ಯಾಯದತ್ತ ಹೆಜ್ಜೆ ಇಡಲು ಇದು ಸೂಕ್ತ ಸಮಯ ಎಂದು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ.
ಇದೇ ವೇಳೆ ಧಾರಾವಾಹಿಯ ಸಹನಟರು, ನಿರ್ದೇಶಕರು, ಬರಹಗಾರರು, ತಂತ್ರಜ್ಞರು ಸೇರಿದಂತೆ ಇಡೀ ತಂಡಕ್ಕೆ ಅವರು ಧನ್ಯವಾದ ಅರ್ಪಿಸಿದ್ದಾರೆ. ಪ್ರೇಕ್ಷಕರು ನೀಡಿದ ಪ್ರೀತಿ, ಮೆಚ್ಚುಗೆ ಹಾಗೂ ಟೀಕೆಗಳು ತಮ್ಮ ಬೆಳವಣಿಗೆಯ ಭಾಗವಾಗಿವೆ ಎಂದು ಹೇಳಿದ್ದಾರೆ. ಕೇಶವ ಪಾತ್ರವನ್ನು ಪ್ರೀತಿಸಿ ತಮ್ಮ ಜೀವನದ ಒಂದು ಭಾಗವಾಗಿಸಿಕೊಂಡ ಅಭಿಮಾನಿಗಳಿಗೂ ವಿಶೇಷ ಧನ್ಯವಾದ ತಿಳಿಸಿದ್ದಾರೆ.
ಇದೀಗ ಯಶ್ವಂತ್ ಕುಮಾರ್ ಅವರ ಹೊಸ ಪಯಣ ಆರಂಭವಾಗಲಿದೆ. ಮುಂಬರುವ ‘ಸಮುದ್ರ ಮಂಥನ’ ಸಿನಿಮಾದ ಮೂಲಕ ಅವರು ಬೆಳ್ಳಿಪರದೆಗೆ ಎಂಟ್ರಿ ಕೊಡುತ್ತಿದ್ದಾರೆ. ಶೀಘ್ರದಲ್ಲೇ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ಭೇಟಿಯಾಗಲು ಕಾತರರಾಗಿರುವುದಾಗಿ ತಿಳಿಸಿದ್ದಾರೆ.
ಇತ್ತ ‘ನಂದಗೋಕುಲ’ ಧಾರಾವಾಹಿಯಲ್ಲಿ ಕೇಶವ ಪಾತ್ರಕ್ಕೆ ಪವನ್ ಕುಮಾರ್ ಹೊಸದಾಗಿ ಎಂಟ್ರಿ ನೀಡಿದ್ದಾರೆ. ಯಶ್ವಂತ್ ಅವರ ಜಾಗವನ್ನು ಪವನ್ ಹೇಗೆ ತುಂಬಲಿದ್ದಾರೆ ಮತ್ತು ಹೊಸ ಕೇಶವನನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸಲಿದ್ದಾರೆ ಎಂಬ ಕುತೂಹಲ ಇದೀಗ ಮೂಡಿದೆ.
“ನಿನ್ನೆಯವರೆಗೂ ನಾನು ಕೇಶವನಾಗಿದ್ದೆ, ನಾಳೆ ಪರದೆಯ ಮೇಲೆ ಇನ್ಯಾರೋ, ಆದರೆ ಕೊನೆವರೆಗೂ ನಾನು ನಿಮ್ಮ ಯಶ್ವಂತ್” ಎಂಬ ಭಾವುಕ ಸಾಲಿನೊಂದಿಗೆ ನಟ ತಮ್ಮ ಪೋಸ್ಟ್ ಮುಗಿಸಿದ್ದಾರೆ.





