ಇತ್ತೀಚಿನ ದಿನಗಳಲ್ಲಿ ಲೋನ್ ಆ್ಯಪ್ಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಕೆಲವರು ಇಂತಹ ಲೋನ್ ಆ್ಯಪ್ನಿಂದ ಸಾಲ ತೆಗೆದುಕೊಂಡು ಸಂಕಷ್ಟಕ್ಕೆ ಸಿಲುಕಿರುತ್ತಾರೆ. ಅದೇ ರೀತಿ ಇದೀಗ ಲೋನ್ ಆ್ಯಪ್ ನಿಂದ ನಟಿಯೊಬ್ಬರಿಗೆ ಬೆದರಿಕೆಯ ಸಂದೇಶಗಳು ಬರುತ್ತಿದೆಯಂತೆ. ಖ್ಯಾತ ಧಾರಾವಾಹಿ ನಟಿ ಶರ್ಮಿಳಾ ಚಂದ್ರಶೇಖರ್ ಅವರಿಗೆ ಬಂದಿರುವ ಆನ್ಲೈನ್ ಬೆದರಿಕೆ ಸಂದೇಶಗಳು ಬಂದಿವೆ. ‘ಸೀತೆ’, ‘ಪತ್ತೇದಾರಿ ಪ್ರತಿಭಾ’, ‘ಅಂತರಪಟ’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿ ಹೆಸರುವಾಸಿಯಾದ ಶರ್ಮಿಳಾ, ಇದೀಗ ವೇವ್ಕ್ಯಾಶ್ ಲೋನ್ ಆಪ್ನಿಂದ ಬಂದ ತೊಂದರೆಯನ್ನು ಬಹಿರಂಗಪಡಿಸಿದ್ದಾರೆ.
ಶರ್ಮಿಳಾ ತಮ್ಮ ವಿಡಿಯೋ ಮೂಲಕ ಆಪ್ಗಳಿಂದ ಸಿಗುವ ಅನಧಿಕೃತ ಸಾಲ, ಬಡ್ಡಿದರ ಮತ್ತು ಅವೈಧ ಹಣ ಸಂಗ್ರಹದ ಬಗ್ಗೆ ಎಚ್ಚರಿಸಿದ್ದಾರೆ. ವಿಶೇಷವಾಗಿ ವೇವ್ಕ್ಯಾಶ್ ಎಂಬ ಆಪ್ನವರು ಅವರಿಗೆ ಫೋನ್ ಮಾಡಿ, “ಸಾಲ ತೀರಿಸದಿದ್ದರೆ ನಿಮ್ಮ ಫೋಟೋವನ್ನು ಅಶ್ಲೀಲವಾಗಿ ಎಡಿಟ್ ಮಾಡಿ, ಎಲ್ಲರಿಗೂ ಕಳಿಸುತ್ತೇವೆ” ಎಂದು ಧಮ್ಕಿ ಹಾಕಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಶರ್ಮಿಳಾ, “ನನ್ನ ಫೋಟೋಗಳನ್ನು ಎಡಿಟ್ ಮಾಡಿ ಅಶ್ಲೀಲವಾಗಿ ವೈರಲ್ ಮಾಡ್ತೀವಿ ಅಂತ ಹೇಳ್ತಿದ್ದಾರೆ. ಇದು ನನ್ನ ನಿಜವಾದ ಫೋಟೋ ಆಗಲ್ಲ. ನಿಮಗೆ ಇಂಥ ಯಾವುದೇ ಸಂದೇಶ ಬಂದರೆ ತಕ್ಷಣವೇ ಪೊಲೀಸರಿಗೆ ದೂರು ನೀಡಿ,” ಎಂದಿದ್ದಾರೆ.
ಶರ್ಮಿಳಾ ಚಂದ್ರಶೇಖರ್ ಅವರು ಇತ್ತೀಚೆಗೆ ‘ಅಂತರಪಟ’ ಧಾರಾವಾಹಿಯಲ್ಲಿ ‘ಅಮಲಾ’ ಎಂಬ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡು, ಪ್ರೇಕ್ಷಕರ ಗಮನ ಸೆಳೆದಿದ್ದರು. ಕನ್ನಡದೊಂದಿಗೆ ತಮಿಳು, ತೆಲುಗು ಧಾರಾವಾಹಿಗಳಲ್ಲಿಯೂ ಅಭಿನಯಿಸಿದ್ದಾರೆ.
ವರ್ಷಗಳ ಹಿಂದೆ ಉದಯ ವಾಹಿನಿಯಲ್ಲಿ ಪ್ರಸಾರವಾದ ‘ಸೀತೆ’ ಧಾರಾವಾಹಿಯ ಶೂಟಿಂಗ್ ವೇಳೆ ಶರ್ಮಿಳಾ ಅತ್ಯಂತ ಸಾತ್ವಿಕ ರೀತಿಯಲ್ಲಿ ವರ್ತಿಸಿದ್ದಾರೆ. ಧಾರಾವಾಹಿಯ ಪ್ರಭಾವದಿಂದಾಗಿ ನಾಲ್ಕು ವರ್ಷಗಳು ಜೀನ್ಸ್ ಪ್ಯಾಂಟ್, ಟೀ ಶರ್ಟ್ ಧರಿಸಿರಲಿಲ್ಲ. ಮಾಂಸಾಹಾರವನ್ನು ಸಂಪೂರ್ಣವಾಗಿ ತ್ಯಜಿಸಿದ್ದರು. ಶೂಟಿಂಗ್ ಕಾಡಿನಲ್ಲಿ ನಡೆಯುತ್ತಿದ್ದಾಗ ಚಪ್ಪಲಿ ಹಾಕದೇ ನಡೆದಿದ್ದರು. ಹಳ್ಳಿಯೊಂದರಲ್ಲಿ ಶೂಟಿಂಗ್ ಸಮಯದಲ್ಲಿ ಅಜ್ಜಿಯೋರ್ವರು ಅವರ ಕಾಲಿಗೆ ಬಿದ್ದ ಘಟನೆ ಅವರು ಎಂದಿಗೂ ಮರೆಯೋ ಸಾಧ್ಯವಿಲ್ಲವೆಂದಿದ್ದಾರೆ.
ಈ ಎಲ್ಲ ತ್ಯಾಗದ ಹಿಂದೆ ಅವರ ಕುಟುಂಬದ ಸಹಕಾರ ಕೂಡ ಮಹತ್ತರವಾಗಿದೆ. ‘ಮಗಳು ಸೀತೆ ಪಾತ್ರ ಮಾಡ್ತಿದ್ದಾಳೆ’ ಎಂಬ ಕಾರಣಕ್ಕೆ ನಾಲ್ಕು ವರ್ಷಗಳ ಕಾಲ ತಮ್ಮ ಇಚ್ಛೆ-ಬದ್ಧತೆಯೊಂದಿಗೆ ಬದುಕಿದ ಶರ್ಮಿಳಾರ ಕುಟುಂಬ, ಅವರಿಗೆ ಸದಾ ಬೆಂಬಲ ನೀಡಿದ್ದರು.
ಇಂತಹ ಆನ್ಲೈನ್ ಅಪರಾಧಗಳು ದಿನೇದಿನೇ ಹೆಚ್ಚುತ್ತಿರುವ ಸಂದರ್ಭದಲ್ಲಿಯೇ ಶರ್ಮಿಳಾರಂತಹ ವ್ಯಕ್ತಿತ್ವಗಳು ಎದುರಿಸುತ್ತಿರುವ ಅನ್ಯಾಯಗಳನ್ನು ಬಹಿರಂಗಪಡಿಸುವುದು ಬಹುಮುಖ್ಯ. “ಯಾರಾದರೂ ನಿಮಗೆ ಇಂತಹ ಸಂದೇಶ ಕಳಿಸಿದರೆ, ತಕ್ಷಣ ಪೊಲೀಸ್ ಕಮ್ಪ್ಲೇಂಟ್ ಕೊಡಿ. ಯಾರಿಗೂ OTP, ಖಾಸಗಿ ಫೋಟೋಗಳು, ಪರ್ಸನಲ್ ಮಾಹಿತಿ ನೀಡಬೇಡಿ” ಎಂಬ ಶರ್ಮಿಳಾರ ಎಚ್ಚರಿಕೆಯನ್ನು ನೀಡಿದ್ದಾರೆ.





