ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್.
ಗಣೇಶ್ ಸಿನಿಮಾ ಅಂದ್ರೆ ಅದು ಮಧುರ ಸಂಗೀತದ ಗಣಿ. ಅಂದು ‘ಮುಂಗಾರು ಮಳೆ’ಯ ಹನಿಯಂತೆ ‘ಅನಿಸುತಿದೆ ಯಾಕೋ ಇಂದು’ ಅಂತ ಶುರುವಾದ ಆ ಮೆಲೋಡಿ ಜರ್ನಿ, ದ್ವಾಪರ ಹಾಡಿನ ಮೂಲಕ ಇಡೀ ರಾಜ್ಯವನ್ನೇ ಕುಣಿಸ್ತಿದೆ ಅಂದ್ರೆ ಅದು ಗಣೇಶ್ ಅವರ ಸಾಂಗ್ ಸೆಲೆಕ್ಷನ್ ತಾಕತ್ತು ಹಾಗೂ ಲಕ್. ಅಷ್ಟೇ ಅಲ್ಲ, ಸ್ಯಾಂಡಲ್ ವುಡ್ ದೋಸ್ತಿಗಳು ಗಣಿ ಮತ್ತು ದಿಗಂತ್ ಜುಗಲ್ಬಂಧಿಯ ಸೀಕ್ರೆಟ್ ಏನು? ದಿಗಂತ್ ಅವರು ಗಣೇಶ್ ಬಗ್ಗೆ ಬಿಚ್ಚಿಟ್ಟ ಆ ಒಂದು ಅಚ್ಚರಿಯ ಸತ್ಯವೇನು? ಹೇಳ್ತೀವಿ ಈ ಸ್ಟೋರಿ ನೋಡಿ.
- ನೇಟಿವಿಟಿ ಅಧಿಪತಿ ಗಣೇಶ್, ಮಣ್ಣಿನ ಕಥೆಗಳಿಗೆ ಮೊದಲು ಮಣೆ
- ಗಣೇಶ್ ಸಿನಿಮಾ ಸಾಂಗ್ಸ್ ಹುಡುಗರ ಫೇವರೆಟ್ ಆಂಥೆಮ್..!
- 20 ವರ್ಷದ ಸಾರ್ಥಕ ಪಯಣಕ್ಕೆ ಸ್ಟಾರ್ಸ್ ವಿಶ್..!
- ಗಣಿ-ದಿಗಂತ್ ಜುಗಲ್ಬಂಧಿ KFI ಮ್ಯಾಜಿಕ್ ಜೋಡಿ
ಗಣೇಶ್ ಸಿನಿಮಾ ಅಂದ್ರೆ ಅಲ್ಲಿ ಕೇವಲ ಕಥೆಯಲ್ಲ, ಕಿವಿಗೆ ಇಂಪು ನೀಡುವ ಮಧುರ ಸಂಗೀತದ ಅಲೆಯೂ ಇರುತ್ತೆ. ‘ಮುಂಗಾರು ಮಳೆ’ಯ ‘ಅನಿಸುತಿದೆ ಯಾಕೋ ಇಂದು’ ಹಾಡಿನಿಂದ ಹಿಡಿದು, ಇತ್ತೀಚಿನ ಸೆನ್ಸೇಷನ್ ‘ಕೃಷ್ಣಂ ಪ್ರಣಯ ಸಖಿ’ಯ ‘ದ್ವಾಪರ’ ಹಾಡಿನವರೆಗೆ ಗಣೇಶ್ ಸಿನಿಮಾಗಳ ಮ್ಯೂಸಿಕ್ ಕ್ರೇಜ್ ಅಪ್ರತಿಮ. ‘ಚೆಲುವಿನ ಚಿತ್ತಾರ’ದ ಹಾಡುಗಳು ಇಂದಿಗೂ ಕಾಲೇಜು ಹುಡುಗರ ಫೇವರೆಟ್ ಆಂಥೆಮ್ ಆಗಿದ್ದರೆ, ‘ಗಾಳಿಪಟ’ದ ಸಾಂಗ್ಸ್ ಫ್ರೆಂಡ್ಶಿಪ್ಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿವೆ. ಪ್ರತಿಯೊಂದು ಸಿನಿಮಾದಲ್ಲೂ ವಿಭಿನ್ನ ಮೆಲೋಡಿಗಳನ್ನು ನೀಡುತ್ತಾ ಸಂಗೀತ ಪ್ರಿಯರನ್ನೂ ಗಣೇಶ್ ತಮ್ಮ ಅಭಿಮಾನಿ ಬಳಗಕ್ಕೆ ಸೆಳೆದುಕೊಂಡಿದ್ದಾರೆ.
ಇನ್ನು ಸ್ಯಾಂಡಲ್ವುಡ್ನಲ್ಲಿ ಗಣೇಶ್ ಹಾಗು ದಿಗಂತ್ ಜುಗಲ್ಬಂಧಿ ಇದೆಯಲ್ಲ, ಅದು ಮ್ಯಾಜಿಕ್ ಜೋಡಿ. ‘ಮುಂಗಾರು ಮಳೆ’ಯಲ್ಲಿ ಶುರುವಾದ ಗಣೇಶ್ ಮತ್ತು ದಿಗಂತ್ ಅವರ ಕೆಮಿಸ್ಟ್ರಿ, ‘ಗಾಳಿಪಟ’ದ ಹೊತ್ತಿಗೆ ಎವರೆಸ್ಟ್ ಎತ್ತರಕ್ಕೆ ಏರಿತ್ತು. ಗಣಿಯ ಪಂಚ್ ಡೈಲಾಗ್ಗಳಿಗೆ ದೂದ್ ಪೇಡಾ ದಿಗಂತ್ ನೀಡುತ್ತಿದ್ದ ಕೌಂಟರ್ಗಳು ಇಂದಿಗೂ ಸಿನಿಮಾ ಪ್ರೇಮಿಗಳ ಫೇವರೆಟ್ ಎಂಟರ್ಟೈನ್ಮೆಂಟ್. ತೆರೆಯ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲೂ ಕುಚಿಕು ಗೆಳೆಯರಾಗಿರುವ ಈ ಜೋಡಿ ತೆರೆ ಹಂಚಿಕೊಂಡಾಗಲೆಲ್ಲಾ ಬಾಕ್ಸ್ ಆಫೀಸ್ನಲ್ಲಿ ನಗುವಿನ ಸುನಾಮಿ ಗ್ಯಾರಂಟಿ.
ಅಂದಹಾಗೆ ಗಣೇಶ್ ಸಿನಿ ಜರ್ನಿ ನೆನೆದ ದಿಗಂತ್.. ತಮ್ಮ ಹಾಗು ಗಣೇಶ್ ಭಾಂದವ್ಯ ಹೇಗಿತ್ತು ಈಗ ಹೇಗಿದೆ.?ಮುಂಗಾರು ಮಳೆ.. ಗಾಳಿಪಟ ಸನ್ನಿವೇಶಗಳನ್ನ ಮೆಲುಕು ಹಾಕಿದ್ದಾರೆ. ಅಂದು ಮುಂಗಾರು ಮಳೆಯಲ್ಲಿ ಸಣ್ಣ ಪಾತ್ರ ಮಾಡಿಲ್ಲ ಅಂದಿದ್ರೆ ಇವತ್ತು ಸ್ಟಾರ್ ನಟ ಆಗೋಕೆ ಕಷ್ಟ ಆಗಯಿತ್ತು ಎಂದಿದ್ದಾರೆ.
- ಅದೇ ನಗು.. ಅದೇ ಸ್ಟೈಲ್.. 20 ವರ್ಷದ ನಂತರವೂ ಕನ್ನಡಿಗರ ಕ್ರಶ್..!
- 2 ದಶಕಗಳ ಸತತ ಬ್ಯಾಟಿಂಗ್.. ಸ್ಯಾಂಡಲ್ವುಡ್ ಪಿಚ್ನಲ್ಲಿ ಗಣಿ ನಾಟೌಟ್
ಸೋಲು-ಗೆಲುವಿನ ಲೆಕ್ಕಾಚಾರದ ನಡುವೆಯೂ ಸ್ಥಿತಪ್ರಜ್ಞರಾಗಿರುವ ಗಣೇಶ್, ನಟನೆಯ ಎಲ್ಲಾ ಮಗ್ಗಲುಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಇವತ್ತಿಗೂ ಅವರ ಅಭಿನಯದಲ್ಲಿ ಅಂದು ಕಂಡ ಅದೇ ಚೈತನ್ಯ ಮತ್ತು ಎನರ್ಜಿ ಇರುವುದು ಅವರ ವೃತ್ತಿ ಬದುಕಿನ ದೊಡ್ಡ ಪ್ಲಸ್ ಪಾಯಿಂಟ್. ಇದೇ ಕನ್ಸಿಸ್ಟೆನ್ಸಿ ಈಗ ಅವರನ್ನು 20 ವರ್ಷಗಳ ಯಶಸ್ವಿ ಸಿನಿಮಾ ಪಯಣದ ಮೈಲಿಗಲ್ಲು ತಲುಪುವಂತೆ ಮಾಡಿದೆ.
ಸದ್ಯ ಗೋಲ್ಡನ್ ಸ್ಟಾರ್ ಕೈಯಲ್ಲಿ ಸಾಲು ಸಾಲು ಬಿಗ್ ಬಜೆಟ್ ಸಿನಿಮಾಗಳಿವೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆ ನಿರ್ಮಿಸುತ್ತಿರುವ ‘ಪಿನಾಕ’ ಚಿತ್ರದಲ್ಲಿ ಗಣೇಶ್ ಹಿಂದೆಂದೂ ಕಾಣಿಸಿಕೊಳ್ಳದ ರಗಡ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದರ ಜೊತೆಗೆ ‘ಯುವರ್ಸ್ ಸಿನ್ಸಿಯರ್ಲಿ ರಾಮ್’, ‘ಬೃಂದಾ ವಿಹಾರಿ’, ‘ತಮ್ಮ ಸುಖಾಗಮನ ಬಯಸುವ’ ಹಾಗೂ ‘ಡಿಜ್ಯಾಂಗೋ ಕೃಷ್ಣಮೂರ್ತಿ’ ಚಿತ್ರಗಳ ಮೂಲಕ ಗಣೇಶ್ ಮತ್ತೆ ಬಾಕ್ಸ್ ಆಫೀಸ್ ಸುನಾಮಿ ಎಬ್ಬಿಸಲು ಪಕ್ಕಾ ಸ್ಕೆಚ್ ಹಾಕಿದ್ದಾರೆ. ಈ ಚಿತ್ರಗಳ ಮೂಲಕ ಗೋಲ್ಡನ್ ಸ್ಟಾರ್ ವೃತ್ತಿಜೀವನದಲ್ಲಿ ಮತ್ತೊಂದು ಸುವರ್ಣ ಅಧ್ಯಾಯ ಶುರುವಾಗೋದರಲ್ಲಿ ಸಂಶಯವಿಲ್ಲ.
ಗೋಲ್ಡನ್ ಸ್ಟಾರ್ ಗಣೇಶ್ ಅವರ ಈ 20 ವರ್ಷಗಳ ಸಾರ್ಥಕ ಪಯಣಕ್ಕೆ ಕೇವಲ ಅಭಿಮಾನಿಗಳಷ್ಟೇ ಅಲ್ಲ, ಇಡೀ ಸ್ಯಾಂಡಲ್ವುಡ್ನ ಸ್ಟಾರ್ಗಳೇ ವಿಶ್ ಮಾಡಿದ್ದಾರೆ. ಒಟ್ಟಿನಲ್ಲಿ, ಅಡಕಮಾರನಹಳ್ಳಿಯಿಂದ ಹಿಡಿದು ಈ ಹಂತದವರೆಗೆ ಗಣೇಶ್ ಬೆಳೆದು ಬಂದ ಹಾದಿಯಲ್ಲಿ ನೋವುಗಳಿಗಿಂತ ಗೆಲುವಿನ ಸಿಹಿಯೇ ಹೆಚ್ಚಿದೆ. ಅಂದು ಮಳೆಯ ಹನಿಯಂತೆ ಬಂದ ಗಣೇಶ್ ಇಂದು ಕನ್ನಡ ಚಿತ್ರರಂಗದ ಅಕ್ಷಯ ಪಾತ್ರೆಯಾಗಿದ್ದಾರೆ. ಸೋಲು-ಗೆಲುವುಗಳ ನಡುವೆ ಸ್ಥಿತಪ್ರಜ್ಞರಾಗಿ ನಿಂತಿರುವ ಗೋಲ್ಡನ್ ಸ್ಟಾರ್ ಗಣೇಶ್ ಅವರ ಮುಂದಿನ ಪಯಣ ಇನ್ನಷ್ಟು ಸುಂದರವಾಗಿರಲಿ.





