ಚಿನ್ನ ಕಳ್ಳ ಸಾಗಾಣೆ ಆರೋಪದ ಮೇಲೆ ಮಾಣಿಕ್ಯ ಸಿನಿಮಾದಲ್ಲಿ ನಟಿಸಿದ್ದ ನಟಿ ರನ್ಯಾ ರಾವ್ ಅವರನ್ನು ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಇಂದು ಆರ್ಥಿಕ ಅಪರಾಧಗಳ ನ್ಯಾಯಾಲಯ ನಟಿ ರನ್ಯಾ ರಾವ್ ಅವರಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡುವ ಆದೇಶ ನೀಡಿದೆ.
ಜಡ್ಜ್ ಮುಂದೆ ನಟಿ ರನ್ಯಾ ಕಣ್ಣೀರಿಟ್ಟುಕೊಂಡು ಭಾವುಕವಾಗಿ ಮಾತನಾಡಿದರು. ಜಡ್ಜ್ ಮಾತನಾಡಿ “ನಿಮ್ಮ ಮೇಲೆ ಹಲ್ಲೆ ನಡೆದಿದ್ಯಾ?” ಎಂದು ಕೇಳಿದಾಗ, “ನನಗೆ ಯಾರೂ ಹೊಡೆದಿಲ್ಲ, ಆದರೆ ಬೈದಿದ್ದಾರೆ. ಭಾವುಕವಾಗಿ ಮಾನಸಿಕ ಹಿಂಸೆ ಅನುಭವಿಸುತ್ತಿದ್ದೇನೆ” ಎಂದು ಉತ್ತರಿಸಿದರು. ನಟಿ ರನ್ಯಾ ರಾವ್ ತಮ್ಮ ಮೇಲೆ “ಮಾನಸಿಕ ಹಿಂಸೆ ಕೊಟ್ಟಿದ್ದಾರೆ” ಎಂದು ಆರೋಪ ಮಾಡಿದ್ದರು. ಆದರೆ DRI ಅಧಿಕಾರಿಗಳು ಅದನ್ನು ಖಂಡಿಸಿದರು.
DRI ಅಧಿಕಾರಿಗಳ ಹೇಳಿಕೆ
ನಮ್ಮ ತನಿಖೆಗೆ ನಟಿ ಸಹಕರಿಸುತ್ತಿಲ್ಲ ಎಂದು DRI ಅಧಿಕಾರಿಗಳು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ನಾವು ದಿನದ 24 ಗಂಟೆಯೂ ಸಿಸಿಟಿವಿ ಮುಂದೆ ನಿಗಾ ಇಟ್ಟಿದ್ದೇವೆ. ನೀವು ಬೇಕಾದರೆ ಸಿಸಿಟಿವಿ ದೃಶ್ಯ ಪರಿಶೀಲಿಸಿ. ನಾವು ಯಾವುದೇ ತೊಂದರೆ ನೀಡಿಲ್ಲ ಎಂದು DRI ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ.
DRI ವಿರುದ್ಧ ನಟಿ ರನ್ಯಾ ಆರೋಪ
“ನನ್ನನ್ನು ಕೆಟ್ಟಕೆಟ್ಟ ಪದಗಳಿಂದ ಬೈದಿದ್ದಾರೆ, ಮನಸ್ಸಿಗೆ ತೀವ್ರ ನೋವು ಉಂಟುಮಾಡಿದ್ದಾರೆ” ಎಂದು ಕೋರ್ಟ್ನಲ್ಲಿ ಭಾವುಕರಾಗಿ ಆರೋಪಿಸಿದರು. DRI ಅಧಿಕಾರಿಗಳು ಕೇಳಿದ ಪ್ರಶ್ನೆಗಳನ್ನು ಟಾರ್ಚರ್ ಎಂದು ನಟಿ ದೂರು ನೀಡಿದ್ದಾರೆ.
ನಟಿಯ ಪರ ವಕೀಲರು ಹೇಳಿದಂತೆ ಈಕೆ ಮಾತನಾಡುತ್ತಿದ್ದಾರೆ. ನಟಿಯ ವಿರುದ್ದ ಸಾಕಷ್ಟು ಸಾಕ್ಷಾಧಾರಗಳು ನಮ್ಮ ಬಳಿ ಇವೆ. ಸಾಕ್ಷಿ ಮುಂದಿಟ್ಟು ಪ್ರಶ್ನೆ ಕೇಳಿದಾಗ, ರನ್ಯಾ ನಮ್ಮನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಾರೆ ಎಂದು DRI ತನಿಖಾಧಿಕಾರಿ ನಾಗೇಶ್ವರ್ ರಾವ್ ಕೋರ್ಟ್ ಮುಂದೆ ಹೇಳಿಕೆ ನೀಡಿದ್ದಾರೆ.
DRI ಪರ ವಕೀಲರ ವಿರುದ್ಧವೇ ರನ್ಯಾ ರಾವ್ ಆರೋಪ ಮಾಡಿದ್ದು, “ನನ್ನಿಂದ ಬಲವಂತವಾಗಿ ಸಹಿ ಪಡೆದಿದ್ದಾರೆ” ಎಂಬ ಗಂಭೀರ ಆರೋಪವನ್ನು ನಟಿ ಮಾಡಿದ್ದಾರೆ. ಕೋರ್ಟ್ ಮುಂದೆ ಮಾತನಾಡಿದ ಅವರು, “ಇವರು ನಮ್ಮ ಮನೆಯ ಮ್ಯಾಪಿಂಗ್ ಮಾಡಿದ್ದಾರೆ, ವಕೀಲರು ಯಾಕೆ ತನಿಖೆಯಲ್ಲಿ ಭಾಗಿಯಾಗುತ್ತಾರೆ?” ಎಂದು ಪ್ರಶ್ನಿಸಿದ್ದಾರೆ.
ಆರೋಪಿಸುತ್ತಲೇ ಜಡ್ಜ್ ಮುಂದೆ ನಟಿ ರನ್ಯಾ ರಾವ್ ಬಿಕ್ಕಿಬಿಕ್ಕಿ ಕಣ್ಣೀರಿಟ್ಟಿದ್ದು, ರನ್ಯಾ ಮಾತು ಕೇಳಿ ನೀವು ಹೆದರುವ ಅಗತ್ಯವಿಲ್ಲ, ನಿಮ್ಮ ವಿಚಾರಣೆಯನ್ನ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಅದೆಲ್ಲವನ್ನೂ ನಾವು ನೋಡುತ್ತೇವೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.