ಕಿರುತೆರೆಯ ಜನಪ್ರಿಯ ಧಾರಾವಾಹಿ ‘ದೃಷ್ಟಿ ಬೊಟ್ಟು’ ಇಂದು ವೀಕ್ಷಕರಿಗೆ ಮಹಾ ಸಂಚಿಕೆಯ ಮೂಲಕ ರೋಚಕ ತಿರುವುಗಳನ್ನು ಒಡ್ಡಲಿದೆ. ವಿಜಯ್ ಸೂರ್ಯ ದತ್ತನ ಪಾತ್ರದಲ್ಲಿ ಖಡಕ್ ಲುಕ್ನೊಂದಿಗೆ ಮಿಂಚುತ್ತಿದ್ದರೆ, ಅರ್ಪಿತಾ ಮೋಹಿತೆ ದೃಷ್ಟಿಯಾಗಿ ಬಣ್ಣ ಬದಲಿಸಿ ವೀಕ್ಷಕರ ಮನಗೆದ್ದಿದ್ದಾರೆ. ಈ ಜೋಡಿಯ ಮುನಿಸು, ಪ್ರೀತಿ, ಕಿತ್ತಾಟಗಳು ವೀಕ್ಷಕರಿಗೆ ಇಷ್ಟವಾಗಿವೆ. ಈಗ ಈ ಧಾರಾವಾಹಿ ಹೊಸ ರೋಮಾಂಚಕ ತಿರುವುಗಳೊಂದಿಗೆ ಮತ್ತಷ್ಟು ಕುತೂಹಲಕಾರಿಯಾಗಿದೆ.
ಈ ಮಹಾ ಸಂಚಿಕೆಯಲ್ಲಿ ದತ್ತ ಮತ್ತು ದೃಷ್ಟಿಯ ಮದುವೆಯ ನಂತರದ ಕಥಾಹಂದರ ಗಮನ ಸೆಳೆಯಲಿದೆ. ಇವರಿಬ್ಬರು ಹನಿಮೂನ್ಗಾಗಿ ಸಕಲೇಶಪುರಕ್ಕೆ ತೆರಳಿದ್ದಾರೆ. ಆದರೆ, ಅವರು ರೊಮ್ಯಾಂಟಿಕ್ ಕ್ಷಣಗಳಿಗೆ ತಯಾರಾಗುತ್ತಿರುವಾಗಲೇ, ಒಂದು ಅಪಾಯದ ಎಚ್ಚರಿಕೆ ಬಂದಿದೆ. ‘ಸೈಲೆಂಟ್’ ಎಂಬ ಪಾತ್ರ ಇವರ ಜೀವಕ್ಕೆ ಕಂಟಕವಿದೆ ಎಂದು ಎಚ್ಚರಿಸಿದ್ದಾನೆ. ಇದೇ ಸಂದರ್ಭದಲ್ಲಿ ಶರಾವತಿ ದೃಷ್ಟಿಯೊಂದಿಗೆ ವ್ಯಂಗ್ಯವಾಡುವ ಮೂಲಕ ಸಂಚಿನ ಸುಳಿವು ನೀಡುತ್ತಾಳೆ. ದತ್ತ ತನ್ನ ಕುಟುಂಬವನ್ನು ಹನಿಮೂನ್ಗೆ ಕರೆದುಕೊಂಡು ಹೋಗುವುದು ಶರಾವತಿಗೆ ಅಸಹನೆ ತಂದಿದೆ. ಇದರಿಂದ ದೃಷ್ಟಿಗೆ ಶರಾವತಿ ಮತ್ತು ನೇತ್ರಾ ಬಗ್ಗೆ ಅನುಮಾನ ಮೂಡಿದೆ.
ಸಕಲೇಶಪುರದಲ್ಲಿ ಲಚ್ಚಿ ದತ್ತ ಮತ್ತು ದೃಷ್ಟಿಯನ್ನು ಸ್ವಾಗತಿಸುತ್ತಾಳೆ. ದೃಷ್ಟಿ ದತ್ತನನ್ನು ತನ್ನನ್ನು ಹೆಂಡತಿಯಾಗಿ ಸ್ವೀಕರಿಸುವಂತೆ ಭಾವುಕವಾಗಿ ಬೇಡಿಕೊಳ್ಳುತ್ತಾಳೆ. ಆದರೆ, ದತ್ತ ಉತ್ತರಿಸದೆ ಕೊಠಡಿಯಿಂದ ಹೊರನಡೆಯುತ್ತಾನೆ. ಇದಾದ ನಂತರ ಏನಾಗುತ್ತದೆ ಎಂಬುದು ಈ ಸಂಚಿಕೆಯ ಕುತೂಹಲಕಾರಿ ಭಾಗ.
ಈ ಮೆಗಾ ಸಂಚಿಕೆಯಲ್ಲಿ ದೃಷ್ಟಿ-ದತ್ತನ ರೊಮಾನ್ಸ್, ಶರಾವತಿಯ ಸಂಚು, ಮತ್ತು ಕುಟುಂಬದ ಒಡನಾಟದಿಂದ ಕಥೆ ರೋಚಕ ತಿರುವು ಪಡೆಯಲಿದೆ.