ದಳಪತಿ ವಿಜಯ್.. ಸದ್ಯ ಇಂಡಿಯಾದಲ್ಲಿ ಟ್ರೆಂಡಿಂಗ್ನಲ್ಲಿರೋ ಏಕೈಕ ಹೆಸರು. ಅವ್ರು ಸಿಎಂ ಆಗಿ ಪದಗ್ರಹಣ ಮಾಡೋಕೆ ಕೌಂಟ್ಡೌನ್ ಶುರುವಾಗಿದ್ದು, ಅದಕ್ಕೂ ಮೊದ್ಲೇ ಜನನಾಯಗನ್ ಚಿತ್ರದ ಟೈಟಲ್ ಕಾರ್ಡ್ ಬದಲಾಗಿಬಿಟ್ಟಿದೆ. ಇಷ್ಟಕ್ಕೂ ವಿಜಯ್ ಕಾರ್ ನಂಬರ್ನ ಹಿಂದಿರೋ ಆ ಎಮೋಷನ್ ಎಂಥದ್ದು..? ಅವ್ರ ತಂದೆ ಎಸ್. ಎ. ಚಂದ್ರಶೇಖರ್ಗೂ ನಮ್ಮ ಕರ್ನಾಟಕಕ್ಕೂ ಇರೋ ನಂಟು ಏನು ಅನ್ನೋದ್ರ ಡಿಟೈಲ್ಡ್ ಸ್ಟೋರಿ ಇಲ್ಲಿದೆ ನೋಡಿ..
- ಜನನಾಯಗನ್ ಚಿತ್ರದ ಟೈಟಲ್ ಕಾರ್ಡ್ ಬದಲಾಗಿದ್ಯಾಕೆ?
- ಟೈಟಲ್ ಕಾರ್ಡ್ನಲ್ಲಿ CM ಆಫ್ ತಮಿಳುನಾಡು ವಿಜಯ್
ಸರ್ಕಾರ ಜನನಾಯಗನ್ ಚಿತ್ರಕ್ಕೆ ಸಮಸ್ಯೆ ಉಂಟು ಮಾಡಿತು. ಆದ್ರೆ ಅದ್ರ ಹೀರೋ ಸರ್ಕಾರವೇ ಆಗಿಬಿಟ್ರು ನೋಡಿ.. ಹೀಗಂತ ಇಡೀ ದೇಶವೇ ಕೂಗಿ ಹೇಳ್ತಿದೆ. ಯೆಸ್.. ದಳಪತಿ ವಿಜಯ್ ನಟನೆಯ ಕಟ್ಟ ಕಡೆಯ ಸಿನಿಮಾ ಎನ್ನಲಾದ ಜನನಾಯಗನ್ ಎಲ್ಲಾ ಅಂದುಕೊಂಡಂತೆ ಆಗಿದ್ದಿದ್ರೆ ಜನವರಿ 9ರಂದು ತೆರೆ ಕಾಣಬೇಕಿತ್ತು. ಅದಕ್ಕೆ ಸೆನ್ಸಾರ್ ಸಮಸ್ಯೆ ಎದುರಾಗಿ, ಕೊನೆಗೆ ಏಪ್ರಿಲ್ 9ಕ್ಕೆ ಕಂಪ್ಲೀಟ್ ಮೂವಿ ಪೈರಸಿ ಕಾಪಿ ಹೊರಬಂದಿತ್ತು. ಆದಾಗ್ಯೂ ಕೂಡ ಜನನಾಯಗನ್ ಸಖತ್ ಟ್ರೆಂಡಿಂಗ್ನಲ್ಲಿದೆ. ಅದಕ್ಕೆ ಕಾರಣ ವಿಜಯ್ ಸಿಎಂ ಆಗ್ತಿರೋದು.
ಯೆಸ್.. ದಳಪತಿ ಸಿಎಂ ಆಗೋಕೆ ಕೌಂಟ್ಡೌನ್ ಶುರುವಾಗಿದೆ. ಸ್ಪಷ್ಟ ಬಹುಮತ ತೋರಿಸುತ್ತಿದ್ದಂತೆ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಲಿದೆ. ಆದ್ರೆ ವಿಜಯ್ ಸಿಎಂ ಆಗೋಕೆ ಮೊದಲೇ ಜನನಾಯಗನ್ ಚಿತ್ರದ ಟೈಟಲ್ ಕಾರ್ಡ್ನಲ್ಲಿ ಅವರ ಹೆಸರು ಬದಲಾಗಿದೆ. ತಮಿಳುನಾಡಿನ ಗೌರವಾನ್ವಿತ ಮುಖ್ಯಮಂತ್ರಿಗಳು ದಳಪತಿ ವಿಜಯ್ ಅಂತ ಬದಲಾದ ಟೈಟಲ್ ಕಾರ್ಡ್ನಲ್ಲಿ ಸಾಕಷ್ಟು ಥಿಯೇಟರ್ಗಳಲ್ಲಿ ಜನನಾಯಗನ್ ಟೀಸರ್ ಪ್ರದರ್ಶನಗೊಂಡಿದೆ.
ರಿಲೀಸ್ ವೇಳೆಗೆ ಹೇಗೋ ವಿಜಯ್ ಅವರು ತಮಿಳು ಸಿಎಂ ಆಗಿರ್ತಾರೆ. ಅದರಲ್ಲೇನಿದೆ ಬಿಡಿ ಅನ್ನಬಹುದು. ಅದು ನಿಜವೂ ಹೌದು.
- ಸಿಎಂ ವಿಜಯ್ ಕಾರ್ ನಂಬರ್ 0277 ಸೀಕ್ರೆಟ್ ಗೊತ್ತಾ..?
- ಫೆಬ್ರವರಿ 1977ನಲ್ಲಿ ನಿಧನರಾಗಿದ್ರಂತೆ ವಿಜಯ್ ಸಹೋದರಿ
ತಮಿಳಿನ ಸೆನ್ಸೇಷನಲ್ ಸಿನಿಮಾ ಹಾಗೂ ಪೊಲಿಟಿಕಲ್ ಸ್ಟಾರ್ ವಿಜಯ್ ಬಹುತೇಕ ಕಾರ್ಗಳ ನಂಬರ್ಗಳು 0277 ಆಗಿವೆ. ಸಾಮಾನ್ಯವಾಗಿ ಸ್ಟಾರ್ಗಳು ಒಂದು ಪರ್ಟಿಕ್ಯುಲರ್ ನಂಬರ್ ಬಳಸಿದ್ರೆ ಅದಕ್ಕೊಂದು ರೀಸನ್ ಇರಲಿದೆ. ಆದ್ರೆ ವಿಜಯ್ ಇದೇ ನಂಬರ್ ಬಳಸ್ತಿರೋದ್ರ ಹಿಂದೆ ಒಂದು ಭಾವನಾತ್ಮಕ ಕಥೆ ಇದೆ. ಅದೇನಪ್ಪಾ ಅಂದ್ರೆ ವಿಜಯ್ ಅವರ ಸಹೋದರಿ ವಿದ್ಯಾ.
ಯೆಸ್.. 1977ರ ಫೆಬ್ರವರಿಯಲ್ಲಿ ವಿಜಯ್ ಸಹೋದರಿ ವಿದ್ಯಾ ಅನಾರೋಗ್ಯದಿಂದ ಅಗಲಿದ್ದರು. ಅದ್ರಿಂದ ಸಿಕ್ಕಾಪಟ್ಟೆ ಡಿಸ್ಟರ್ಬ್ ಆಗಿದ್ದ ವಿಜಯ್, ಆ ನಂತರ ಯಾವುದೇ ಕಾರ್ ಖರೀದಿಸಿದ್ರೂ ಸಹ ಆಕೆಯ ನೆನಪಿಗಾಗಿ 0277 ನಂಬರ್ನ ಖರೀದಿ ಮಾಡ್ತಾ ಬರ್ತಿದ್ದಾರೆ. ಇದು ಬ್ರದರ್-ಸಿಸ್ಟರ್ ಬಾಂಡಿಂಗ್ನ ಪ್ರತೀಕವೂ ಹೌದು. ವಿಜಯ್ ಕಾರ್ ನಂಬರ್ ಹಿಂದೆ ಇಂಥದ್ದೊಂದು ರೋಚಕ ಕಥೆ ಇದೆ ಅನ್ನೋದು ಎಷ್ಟೋ ಮಂದಿಗೆ ಗೊತ್ತೇ ಇಲ್ಲ.
- ದಳಪತಿ ವಿಜಯ್ ತಂದೆ.. ಕನ್ನಡ ಚಿತ್ರರಂಗಕ್ಕಿದೆ ಸಂಬಂಧ!
- ಸಾಲು ಸಾಲು ಕನ್ನಡ ಸೂಪರ್ ಹಿಟ್ ಚಿತ್ರಗಳಿಗೆ ನಿರ್ದೇಶನ
ತಮಿಳುನಾಡಿನಲ್ಲಿ ಟಿವಿಕೆ ಪಕ್ಷ 108 ಸೀಟ್ಗಳು ಗೆಲ್ಲೋಕೆ ಕಾರಣ ದಳಪತಿ ವಿಜಯ್ ಅನ್ನೋ ಹೀರೋ. ಆದ್ರೆ ಅವರಿಗೊಬ್ಬ ಸೂಪರ್ ಹೀರೋ ಇದ್ದಾರೆ.. ಅವರೇ ಎಸ್. ಎ. ಚಂದ್ರಶೇಖರ್. ಅಂದಹಾಗೆ ವಿಜಯ್ ತಂದೆ ಎಸ್ ಎ ಚಂದ್ರಶೇಖರ್ ಕೂಡ ಫಿಲ್ಮ್ ಮೇಕರ್. ಸುಮಾರು 70ರಷ್ಟು ಸಿನಿಮಾಗಳನ್ನ ನಿರ್ದೇಶಿಸಿ, ನಿರ್ಮಿಸಿದ್ದಾರೆ. ಸೋ.. ಡೈರೆಕ್ಟರ್ ಹಾಗೂ ಪ್ರೊಡ್ಯೂಸರ್ ಆಗಿ ಬಹುದೊಡ್ಡ ಹೆಸರು ಮಾಡಿದ್ದಾರೆ ದಳಪತಿ ಫಾದರ್.
ಇಂಟರೆಸ್ಟಿಂಗ್ ಅಂದ್ರೆ ಕ್ಯಾಪ್ಟನ್ ವಿಜಯ್ಕಾಂತ್ನ ಸ್ಟಾರ್ ಆಗಿಸಿದ್ದೇ ವಿಜಯ್ ತಂದೆ ಚಂದ್ರಶೇಖರ್. ಹೌದು.. ವಿಜಯ್ಕಾಂತ್ ಬಹುತೇಕ ಚಿತ್ರಗಳಿಗೆ ಚಂದ್ರಶೇಖರ್ ಅವರೇ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇನ್ನೂ ನಮ್ಮ ಕನ್ನಡ ಚಿತ್ರರಂಗಕ್ಕೂ ವಿಜಯ್ ತಂದೆಗೂ ಅವಿನಾಭಾವ ಸಂಬಂಧವಿದೆ. ಯಾಕಂದ್ರೆ ಶಂಕರ್ನಾಗ್ ಜೊತೆ ಎರಡು, ಅಂಬರೀಶ್ ಜೊತೆ ಎರಡು ಹಾಗೂ ವಿಷ್ಣುವರ್ಧನ್ ಜೊತೆ ಒಂದು ಸಿನಿಮಾ ಮಾಡಿದ್ದಾರೆ ವಿಜಯ್ ತಂದೆ.
ಶಂಕ್ರಣ್ಣನ ನ್ಯಾಯ ಎಲ್ಲಿದೆ..? ಹಾಗೂ ಗೆದ್ದ ಮಗ ಚಿತ್ರಗಳು, ಸಾಹಸಸಿಂಹ ವಿಷ್ಣುವರ್ಧನ್ರ ಸಿಂಹ ಘರ್ಜನೆ, ಅಂಬರೀಶ್ರ ಗೆಲುವು ನನ್ನದೇ, ಹಸಿದ ಹೆಬ್ಬುಲಿ ಚಿತ್ರಗಳ ಡೈರೆಕ್ಟರ್ ಇದೇ ದಳಪತಿ ವಿಜಯ್ ತಂದೆ ಎಸ್ ಎ ಚಂದ್ರಶೇಖರ್ ಅನ್ನೋದು ಅಚ್ಚರಿಯ ಸಂಗತಿ. ಅದರಲ್ಲೂ ವಿಜಯ್ ತಂದೆಯ ಬಹುತೇಕ ಚಿತ್ರಗಳಿಗೆ ಕಥೆ ಬರೆದಿರೋದು ವಿಜಯ್ ತಾಯಿ ಶೋಭಾ ಅವರೇ ಅನ್ನೋದು ಮತ್ತೊಂದು ಹೈಲೈಟ್.
ರೆಬೆಲ್ ಸ್ಟಾರ್ ಅಂಬರೀಶ್ರ ಗೆಲುವು ನನ್ನದೇ ಚಿತ್ರ ತಮಿಳಿಗೆ ರಿಮೇಕ್ ಆಗುತ್ತೆ.. ಅದೇ ವೆಟ್ರಿ ಸಿನಿಮಾ. ಆ ವೆಟ್ರಿ ಚಿತ್ರದಿಂದಲೇ ವಿಜಯ್ ಬಾಲನಟನಾಗಿ ಅಧಿಕೃತವಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ ಅನ್ನೋದು ವಿಶೇಷ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





