ದುನಿಯಾ ವಿಜಯ್ ನಟನೆಯ ಲ್ಯಾಂಡ್ಲಾರ್ಡ್ ಸಿನಿಮಾಗೆ ಸಿಎಂ ಸಿದ್ದರಾಮಯ್ಯ ಭರ್ಜರಿ ಗಿಫ್ಟ್ ನೀಡಿದ್ದಾರೆ. ಇತ್ತೀಚೆಗೆ ಸಿನಿಮಾ ನೋಡುವ ಭರವಸೆ ನೀಡಿದ್ದ ಮುಖ್ಯಮಂತ್ರಿಗಳು, ಚಿತ್ರ ಕಣ್ತುಂಬಿಕೊಳ್ಳುವ ಮೊದಲೇ ಬಿಗ್ ಬ್ರೇಕಿಂಗ್ ನ್ಯೂಸ್ ನೀಡಿದ್ದಾರೆ. ಅದೇನು ಅನ್ನೋ ಕುತೂಹಲಕ್ಕೆ ಉತ್ತರ ಇಲ್ಲಿದೆ ನೋಡಿ.
ಇತ್ತೀಚೆಗೆ ದುನಿಯಾ ವಿಜಯ್ ಹಾಗೂ ನಿರ್ದೇಶಕ ಜಡೇಶ್ ಕೆ ಹಂಪಿ ಭೇಟಿ ಆದಾಗ ಲ್ಯಾಂಡ್ಲಾರ್ಡ್ ಸಿನಿಮಾನ ನೋಡುವ ಭರವಸೆ ನೀಡಿದ್ರು ಸಿಎಂ ಸಿದ್ದರಾಮಯ್ಯ. ಆದ್ರೀಗ ಸಿನಿಮಾಗೆ ಎಲ್ಲೆಡೆ ಬರ್ತಿರೋ ಅಭೂತಪೂರ್ವ ಪ್ರಶಂಸೆ ಹಾಗೂ ಪ್ರತಿಕ್ರಿಯೆಗಳನ್ನ ನೋಡಿ, ಚಿತ್ರ ವೀಕ್ಷಿಸುವ ಮೊದಲೇ ಭರ್ಜರಿ ಗಿಫ್ಟ್ ನೀಡಿದ್ದಾರೆ ಸಿಎಂ ಸಿದ್ದು. ಯೆಸ್.. ಕರ್ನಾಟಕದಲ್ಲಿ ಲ್ಯಾಂಡ್ಲಾರ್ಡ್ ಚಿತ್ರಕ್ಕೆ ಟ್ಯಾಕ್ಸ್ ಫ್ರೀ ಮಾಡುವ ಮೂಲಕ ಬಿಗ್ ಬ್ರೇಕಿಂಗ್ ನ್ಯೂಸ್ ನೀಡಿದ್ದಾರೆ ಸಿಎಂ.

ಲ್ಯಾಂಡ್ಲಾರ್ಡ್ ಚಿತ್ರಕ್ಕೆ ಕರ್ನಾಟಕದಲ್ಲಿ ಟ್ಯಾಕ್ಸ್ ಫ್ರೀ
ದುನಿಯಾ ವಿಜಯ್ ಲ್ಯಾಂಡ್ಲಾರ್ಡ್ಗೆ ಸಿಎಂ ಗಿಫ್ಟ್
ಸಾಮಾಜಿಕ ಸಮಾನತೆ ಮತ್ತು ಜಾತಿಯಾಧಾರಿತ ಶೋಷಣೆ ವಿಷಯದ ದುನಿಯಾ ವಿಜಯ್ ನಾಯಕತ್ವದ ಲ್ಯಾಂಡ್ಲಾರ್ಡ್ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಅಂತ ಸ್ವತಃ ಸಿಎಂ ಸಿದ್ದರಾಮಯ್ಯ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಇಡೀ ತಂಡಕ್ಕೆ ಖುಷಿ ಕೊಟ್ಟಿದ್ದು, ಸಿಎಂ ನಿರ್ಧಾರಕ್ಕೆ ಚಿತ್ರಪ್ರೇಮಿಗಳು, ವಿಜಯ್, ರಾಜ್ ಶೆಟ್ಟಿ, ರಚಿತಾ ಅಭಿಮಾನಿಗಳು ಹಾಗೂ ಚಿತ್ರರಂಗ ಕೂಡ ಖುಷಿ ವ್ಯಕ್ತಪಡಿಸಿದೆ.

ಮೌಲ್ಯಯುತ ಸಂದೇಶ ಜನಕ್ಕೆ ತಲುಪಿಸಿ, ಸಾರ್ವತ್ರಿಕ ಅಭಿಪ್ರಾಯ ರೂಪಿಸಲು ಹಾಗೂ ಸಾಮಾಜಿಕ ಪರಿವರ್ತನೆಗೆ ಸಿನಿಮಾಗಳು ಅತ್ಯಂತ ಪರಿಣಾಮಕಾರಿ ಮಾಧ್ಯಮ ಅಂತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಸಿಎಂ ಸಿದ್ದು. ಸಾಮಾಜಿಕ ಕಳಕಳಿಯ ಸಿನಿಮಾಗಳನ್ನ ಮಾಡಿದಾಗ, ಅಂಥವ್ರ ಜೊತೆ ನಿಂತು ಬೆನ್ನು ತಟ್ಟುವುದು ಕೂಡ ಸರ್ಕಾರದ ನೈತಿಕ ಹೊಣೆ ಎಂದಿದ್ದಾರೆ. ಈ ರೀತಿಯ ಚಿತ್ರಗಳು ಮುಂದೆ ಮತ್ತಷ್ಟು ಮೂಡಿಬರಲು ಈ ನಿರ್ಧಾರ ಸ್ಫೂರ್ತಿಯಾಗಲಿದೆ ಎಂದಿದ್ದಾರೆ ಸಿಎಂ. ಇದು ಚಿತ್ರರಂಗದ ಮೇಲೆ ಸಿಎಂ ಸಿದ್ದುಗಿರೋ ಕಾಳಜಿ ಹಾಗೂ ಸಮಾಜಿಕ ಹೊಣೆಯ ಪ್ರತೀಕವೂ ಆಗಿದೆ.





