ಬೆಂಗಳೂರು: ಬೆಂಗಳೂರಿನ ಹನುಮಂತ ನಗರದ ಮುನೇಶ್ವರ ಲೇಔಟ್ನಲ್ಲಿ ಕಿರುತೆರೆ ನಟಿ ಹಾಗೂ ಖಾಸಗಿ ವಾಹಿನಿಯ ನಿರೂಪಕಿ ಮಂಜುಳಾ ಮೇಲೆ ಪತಿಯಿಂದಲೇ ಚಾಕು ಇರಿತಕ್ಕೆ ಒಳಗಾಗಿದ್ದಾರೆ. ಈ ಘಟನೆ ಜುಲೈ 4 ರಂದು ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಶ್ರುತಿ, ಅಮೃತಧಾರೆ ಸೇರಿದಂತೆ ಹಲವು ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಈ ಘಟನೆಯಲ್ಲಿ ಆರೋಪಿಯಾಗಿರುವ ಶೃತಿಯ ಪತಿ ಅಮರೇಶ್ನನ್ನು ಹನುಮಂತ ನಗರ ಪೊಲೀಸರು ಬಂಧಿಸಿದ್ದಾರೆ. ಸದ್ಯ ಶೃತಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ಹಿನ್ನೆಲೆ
ಶೃತಿ ಮತ್ತು ಅಮರೇಶ್ 20 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಹನುಮಂತ ನಗರದಲ್ಲಿ ಲೀಸ್ಗೆ ಮನೆ ಪಡೆದು ವಾಸವಾಗಿದ್ದ ಈ ಜೋಡಿಯ ನಡುವೆ ಕೆಲವು ವರ್ಷಗಳಿಂದ ಬಿರುಕು ಉಂಟಾಗಿದ್ದವು. ಇದರಿಂದ ಇಬ್ಬರ ನಡುವೆ ವೈಮನಸ್ಸು ಉಂಟಾಗಿತ್ತು. ಕಳೆದ ಏಪ್ರಿಲ್ನಲ್ಲಿ ಶ್ರುತಿ ಗಂಡನಿಂದ ದೂರವಾಗಿ ತನ್ನ ಅಣ್ಣನ ಮನೆಯಲ್ಲಿ ವಾಸವಾಗಿದ್ದರು.
ಶೃತಿ ಮತ್ತು ಅಮರೇಶ್ ನಡುವೆ ಲೀಸ್ ಹಣಕ್ಕೆ ಸಂಬಂಧಿಸಿದಂತೆ ಜಗಳವೂ ನಡೆದಿತ್ತು. ಈ ವಿಷಯದ ಬಗ್ಗೆ ಶ್ರುತಿ ಈಗಾಗಲೇ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಘಟನೆಯ ನಂತರ ಜುಲೈ 3 ರಂದು ರಾಜಿ ಸಂಧಾನದ ಮೂಲಕ ಇಬ್ಬರೂ ಒಂದಾಗಿದ್ದರು. ಆದರೆ, ಒಂದಾದ ಮಾರನೇ ದಿನವೇ, ಜುಲೈ 4 ರಂದು, ಈ ದಾರುಣ ಘಟನೆ ಸಂಭವಿಸಿದೆ.
ಜುಲೈ 4 ರಂದು, ಶೃತಿಯ ಮಕ್ಕಳು ಕಾಲೇಜಿಗೆ ತೆರಳಿದ ನಂತರ, ಅಮರೇಶ್ ತನ್ನ ಪತ್ನಿಯ ಮೇಲೆ ದಾಳಿ ಮಾಡಿದ್ದಾನೆ. ಮೊದಲಿಗೆ ಪೆಪ್ಪರ್ ಸ್ಪ್ರೇ ಬಳಸಿ, ನಂತರ ಶೃತಿಯ ಪಕ್ಕೆಲುಬು, ತೊಡೆ ಮತ್ತು ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ಇದಲ್ಲದೇ, ಸಿನಿಮಾ ಶೈಲಿಯಲ್ಲಿ ಶ್ರುತಿಯ ತಲೆ ಕೂದಲನ್ನು ಹಿಡಿದು ಗೋಡೆಗೆ ತಲೆ ಗುದ್ದಿಸಿ ಕೊಲೆಗೆ ಯತ್ನಿಸಿದ್ದಾನೆ. ಈ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಶೃತಿ, ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.





