‘‘ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿರುವ ಚಿತ್ರಗಳನ್ನು ಪರಿಚಯಿಸುವ ಪುಸ್ತಕವನ್ನು ಚಲನಚಿತ್ರ ಅಕಾಡೆಮಿ ಪ್ರಕಟಿಸಿ, ವಿತರಿಸುತ್ತಿದೆ. ಇದರಲ್ಲಿ ಕನ್ನಡ ಅನುವಾದ ಮಾಡಿದವರಿಗೆ ಈ ವರ್ಷದ ಶ್ರೇಷ್ಠ ಅನುವಾದ ಪ್ರಶಸ್ತಿ ಕೊಡಬೇಕೆಂದು ಕೋರಿಕೆ. ಎಲ್ಲವನ್ನು ಕನ್ನಡದಲ್ಲಿ ಓದಲಾಗಲಿಲ್ಲ, ಓದಿದ್ದರಲ್ಲಿ ಇಷ್ಟು ಸಿಕ್ಕಿದೆ. ಜೈ ಗೂಗಲ್! ಜೈ ಚಾಟ್ ಜಿಪಿಟಿ..!’’- ಹೀಗಂತ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು.
ಹೌದು.. ಇದು ಅಕ್ಷರಶಃ ಸತ್ಯ. ಮೊನ್ನೆಯಷ್ಟೇ ಬೆಂಗಳೂರು ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಉದ್ಘಾಟನಾ ಕಾರ್ಯಕ್ರಮ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಅದ್ಧೂರಿಯಾಗಿ ನಡೆಯಿತು. ಅಲ್ಲಿ ಸಿಎಂ, ಡಿಸಿಎಂ ಸೇರಿದಂತೆ ಕನ್ನಡದ ಖ್ಯಾತ ನಟ ಶಿವರಾಜ್ ಕುಮಾರ್ ಹಾಗೂ ಪ್ರಿಯಾಂಕಾ ಮೋಹನ್ ಕೂಡ ಸಮಾರಂಭಕ್ಕೆ ಸಾಕ್ಷಿಯಾಗಿದ್ರು.
ಅಷ್ಟೇ ಅಲ್ಲ, ಅಲ್ಲಿ ಅಂದು ಅಕಾಡೆಮಿ ಪ್ರಕಟಿಸಿರೋ ಪುಸ್ತಕಗಳನ್ನ ನಟ ಶಿವರಾಜ್ ಕುಮಾರ್ ಅವರು ಬಿಡುಗಡೆ ಮಾಡಿದ್ರು. ಆದ್ರೆ ಆ ಪುಸ್ತಕಗಳಲ್ಲಿರೋ ಕಂಟೆಂಟ್ ನೋಡೋಕೆ ಮಾತ್ರ ಎರಡು ಕಣ್ಣು ಸಾಲುತ್ತಿಲ್ಲ. ಕನ್ನಡ ಭಾಷೆಯಲ್ಲಿ ಉಳಿಸಿ, ಬೆಳೆಸಬೇಕಾದ ಕನ್ನಡ ಚಲನಚಿತ್ರ ಅಕಾಡೆಮಿಯಿಂದಲೇ ಕನ್ನಡದ ಕಗ್ಗೊಲೆ ಆಗಿರೋದು ದುರದೃಷ್ಠ.
ಅಕಾಡೆಮಿ ಅಧ್ಯಕ್ಷರಾಗಿರೋ ಸಾಧು ಕೋಕಿಲಾ ಅವರು ಪುಸ್ತಕಗಳನ್ನ ಬರೆಸಲು ಒಳ್ಳೆಯ ಬರಹಗಾರರನ್ನ ಬಳಸಿಕೊಳ್ಳದೆ, ಅದನ್ನ ಗೂಗಲ್ ಟ್ರಾನ್ಸ್ ಲೇಟ್ ಮಾಡಿಸೋ ಮೂಲಕ ಹಾಗೂ ಚಾಟ್ ಜಿಪಿಟಿ ಅನುವಾದದ ಮೂಲಕ ಬಟ್ಟಿ ಇಳಿಸೋ ಕಾರ್ಯ ಮಾಡಿಸಿದ್ದಾರೆ. ಅದ್ರಲ್ಲಿ ಆಗಿರೋ ಎಡವಟ್ಟುಗಳು ಒಂದಾ ಎರಡಾ..? ಸಾವಿರಾರು. ಪ್ರತಿ ಪುಟದಲ್ಲೂ ಕನ್ನಡ ವ್ಯಾಕರಣ, ವಾಕ್ಯ ಜೋಡಣೆ ತಪ್ಪಾಗಿದೆ.
ಅದಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು ಆಗಿರೋದನ್ನ ಪಟ್ಟಿಯಲ್ಲಿ ತೋರಿಸೋ ಸಾಧು ಕೋಕಿಲಾ ಅವರು ನೀಟ್ ಆಗಿ ಬರೆಯಬಲ್ಲ ಬರಹಗಾರರಿಗೆ ಕೆಲಸ ಕೊಟ್ಟಿದ್ರೆ ಆಗ್ತಿತ್ತು ಅಂತ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಕಾಲು ಎಳೆಯುತ್ತಿದ್ದಾರೆ.
ಚಿತ್ರರಂಗದಲ್ಲಿ ಇಷ್ಟು ವರ್ಷ ಸೇವೆ ಸಲ್ಲಿಸಿರೋ ನಿಮಗೆ ಕನ್ನಡಾಭಿಮಾನ ಬತ್ತಿ ಹೋಗಿದ್ಯಾ ಸಾಧು ಕೋಕಿಲಾ ಅವರೇ..? ನೀವು ಕನ್ನಡಿಗರಲ್ಲವೇ..? ನಿಮಗೆ ಕನ್ನಡದ ಮೇಲೆ ಗೌರವ, ಪ್ರೀತಿ ಇಲ್ಲವೇ..?! ಅಥ್ವಾ ನಿಮಗೇನೇ ಕನ್ನಡ ಬರಲ್ಲವೇ..? ಇದಕ್ಕೆ ನೀವು ಉತ್ತರಿಸಲೇಬೇಕು.