ಪದ್ಮಭೂಷಣ ನಂದಮೂರಿ ಬಾಲಕೃಷ್ಣಗೆ ಡಬಲ್ ಧಮಾಕ. ಸಿನಿಮಾ, ರಾಜಕೀಯ ಎರಡನ್ನೂ ಬ್ಯಾಲೆನ್ಸ್ ಮಾಡುವ ಬಾಲಯ್ಯ, ಮತ್ತೊಮ್ಮೆ ಅಖಂಡ ತಾಂಡವಕ್ಕೆ ಸಜ್ಜಾಗಿದ್ದಾರೆ. ಈ ಬಾರಿ ಮತ್ತಷ್ಟು ಪವರ್ಫುಲ್ ಆಗಿ ಕಾಣಲಿರೋ ಬಾಲಯ್ಯನ ಖದರ್ಗೆ ನೋಡುಗರು ಬೆಚ್ಚಿಬೀಳೋದು ಗ್ಯಾರಂಟಿ.
- ದಸರಾಗೆ ಬಾಲಯ್ಯ ಮತ್ತೆ ‘ಅಖಂಡ’ ತಾಂಡವಂ ಶುರು
- ಅಖಂಡಗಿಂತ ಜೋರು ಅಖಂಡ 2.. ಟೀಸರ್ ಬೆಂಕಿ ಗುರು
- 65ನೇ ವಸಂತಕ್ಕೆ ಕಾಲಿಟ್ಟ ಬಾಲಕೃಷ್ಣಗೆ ಪದ್ಮಭೂಷಣ ಗರಿ..!
- ಬಾಲಯ್ಯ ಎನರ್ಜಿ ಹೌಸ್.. ಈ ಬಾರಿ ರಾಕ್ಷಸ ಸಂಹಾರ..!
ಇದು ಅಖಂಡ-2 ಚಿತ್ರದ ಟೀಸರ್ ಝಲಕ್. ಬರ್ತ್ ಡೇ ಸಂಭ್ರಮದಲ್ಲಿರೋ ನಂದಮೂರಿ ಬಾಲಕೃಷ್ಣಗೆ ಚಿತ್ರತಂಡ ನೀಡಿರೋ ಭರ್ಜರಿ ಗಿಫ್ಟ್ ಕೂಡ ಹೌದು. ಅಂದಹಾಗೆ ಇದು 2021ರಲ್ಲಿ ತೆರೆಕಂಡ ಬ್ಲಾಕ್ ಬಸ್ಟರ್ ಹಿಟ್ ಮೂವಿ ಅಖಂಡ ಸೀಕ್ವೆಲ್. ಆ ಸಿನಿಮಾ 150 ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್ ನಿಂದ ಎಲ್ಲರ ಹುಬ್ಬೇರಿಸಿತ್ತು. ಇದೀಗ ಅಖಂಡ ರೆಕಾರ್ಡ್ಸ್ ಬ್ರೇಕ್ ಮಾಡೋ ರೇಂಜ್ಗೆ ಅಖಂಡ-2 ಟೀಸರ್ ನೋಡುಗರ ನಾಡಿಮಿಡಿತ ಹೆಚ್ಚಿಸಿದೆ.ಡೈರೆಕ್ಟರ್ ಬೋಯಪಾಟಿ ಶ್ರೀನು ಹಾಗೂ ಬಾಲಯ್ಯ ಮಧ್ಯೆ ಒಂದೊಳ್ಳೆ ಬಾಂಡಿಂಗ್ ಇದೆ. ಅದರಲ್ಲೂ ಇವರಿಬ್ಬರ ಕಾಂಬೋನಲ್ಲಿ ಬಂದ ಎಲ್ಲಾ ಮೂವೀಸ್ ಸೂಪರ್ ಹಿಟ್. ಹಾಗಾಗಿ ಅಖಂಡ ಬಳಿಕ ಮತ್ತೊಮ್ಮೆ ಜೊತೆಯಾಗಿದೆ ಈ ಸೂಪರ್ ಹಿಟ್ ಕಾಂಬಿನೇಷನ್. ಈ ಬಾರಿ ಅಖಂಡಗಿಂತ ಕಥೆ, ಪಾತ್ರಗಳು ಹಾಗೂ ಮೇಕಿಂಗ್ ಜೋರಿರಲಿದ್ದು, ಬಾಲಯ್ಯನ ಪರ್ಫಾಮೆನ್ಸ್ಗೆ ನೋಡುಗರು ಸುಸ್ತಾಗೋದು ಕನ್ಫರ್ಮ್.
ಹೌದು, 65ರ ಹರೆಯದಲ್ಲೂ ಬಾಲಯ್ಯ ಎನರ್ಜಿ ಹೌಸ್ ರೀತಿ ಪರ್ಫಾಮ್ ಮಾಡಿದ್ದಾರೆ. ಅದ್ರಲ್ಲೂ ಏಜ್ಗೆ ತಕ್ಕನಾದ ಪಾತ್ರವಾಗಿದ್ದು, ಈ ಬಾರಿ ರಾಕ್ಷಸ ಸಂಹಾರದ ಕುರಿತ ದೃಶ್ಯಗಳು ಟೀಸರ್ನಲ್ಲಿ ಕಂಡುಬಂದಿವೆ. ಶಿವನ ಪ್ರತಿರೂಪವಾಗಿ ಬಾಲಯ್ಯ ಕಾಣಸಿಗಲಿದ್ದು, ಒಂದೊಂದು ದೃಶ್ಯ ಕೂಡ ನಿಬ್ಬೆರಗಾಗಿಸುವಂತಿವೆ. ಇನ್ನು ಡೈಲಾಗ್ಸ್ ಬಗ್ಗೆ ಹೇಳೋದೇ ಬೇಡ. ಗಾಡ್ ಆಫ್ ಮಾಸಸ್ ಅಂದಾಗ, ಬಾಲಯ್ಯನ ಇಮೇಜ್ಗೆ ತಕ್ಕನಾಗಿ ಬೋಯಪಾಟಿ ಶ್ರೀನು ಮಾಸ್ ಹಾಗೂ ಪಂಚ್ ಡೈಲಾಗ್ಸ್ ಬರೆದಿದ್ದಾರೆ.
ಇತ್ತೀಚೆಗೆ ರಾಷ್ಟ್ರಪತಿಗಳಿಂದ ಪದ್ಮಭೂಷಣ ಗೌರವಕ್ಕೆ ಪಾತ್ರರಾದಂತಹ ಬಾಲಯ್ಯ, ಇದೀಗ ಇಳಿವಯಸ್ಸಿನಲ್ಲೂ ಕೂಡ ಹಗಲಿರುಳು ದುಡಿಯುವ ಕಾಯಕಜೀವಿ ಅನಿಸಿಕೊಂಡಿದ್ದಾರೆ. ಒಂದ್ಕಡೆ ಹಿಂದೂಪುರದ ಎಂಎಲ್ಎ ಆಗಿದ್ದುಕೊಂಡು ಜನಸೇವೆ, ಮತ್ತೊಂದ್ಕಡೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ಮಾಡುವ ಮೂಲಕ ಕಲಾಸೇವೆ ಮಾಡ್ತಿರೋ ಲಿವಿಂಗ್ ಲೆಜೆಂಡ್ ಅಂದ್ರೆ ತಪ್ಪಾಗಲ್ಲ. ಡಾಕು ಮಹಾರಾಜ್ ಸಿನಿಮಾ ನೀಡಿದ ಇದೇ ವರ್ಷದಲ್ಲಿ ಇದೀಗ ಅಖಂಡ-2 ಕೂಡ ರಿಲೀಸ್ ಆಗ್ತಿರೋದು ವಿಶೇಷ.
ದೈವ ಹಾಗೂ ದುಷ್ಠ ಶಕ್ತಿಯ ಮಹಾಕಾಳಗದ ಜೊತೆ ಜೊತೆಗೆ ಹಿಮಾಲಯ ಪರ್ವತಗಳಲ್ಲಿ ಗನ್ಗಳ ಮೊರೆತ ಕೂಡ ಜೋರಿರಲಿದೆ. ನೋಡ್ತಿದ್ರೆ ಈ ಬಾರಿ ನ್ಯಾಷನಲ್ ಸೆಕ್ಯೂರಿಟಿ ವಿಚಾರವಾಗಿ ಕಥೆ ಹೆಣೆದಂತಿದೆ ಬೋಯಪಾಟಿ ಶ್ರೀನು. ಮೇಕಿಂಗ್ ಸಖತ್ ಮಜಬೂತಾಗಿದ್ದು, ತಮನ್ ಮ್ಯೂಸಿಕ್ ಕೂಡ ಇಂಪ್ರೆಸ್ಸೀವ್ ಆಗಿದೆ. ಅಂದಹಾಗೆ ಸಿನಿಮಾನ ದಸರಾ ಹಬ್ಬದ ವಿಶೇಷ ಇದೇ ಸೆಪ್ಟೆಂಬರ್ 25ಕ್ಕೆ ಪ್ರೇಕ್ಷಕರ ಮುಂದೆ ತರುವ ಧಾವಂತದಲ್ಲಿದ್ದಾರೆ ಬಾಲಯ್ಯ.