ಬೆಂಗಳೂರು: ದುಬೈನಿಂದ ಚಿನ್ನ ಕಳ್ಳಸಾಗಣೆ ಮಾಡಿದ ಆರೋಪದಲ್ಲಿ ನಟಿ ರನ್ಯಾ ರಾವ್ ಅವರನ್ನು ಡಿಆರ್ಐ ಅಧಿಕಾರಿಗಳು ಬಂಧಿಸಿದ್ದು, ಇದರಿಂದ ಸರ್ಕಾರಕ್ಕೆ ₹4.83 ಕೋಟಿ ಸುಂಕ ನಷ್ಟ ಆಗಿದೆ. ದೇಹದ ವಿವಿಧ ಭಾಗಗಳಲ್ಲಿ ಚಿನ್ನವನ್ನು ಮುಚ್ಚಿಟ್ಟುಕೊಂಡು ರನ್ಯಾ ಸಾಗಣೆ ಮಾಡಿದ್ದಾರೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.
ರನ್ಯಾ ತನ್ನ ಹೊಟ್ಟೆ, ಸೊಂಟ, ಮತ್ತು ಕಾಲುಗಳನ್ನು ಬ್ಯಾಂಡೇಜ್ ಬಟ್ಟೆಯಿಂದ ಸುತ್ತಿ, ಜಾಕೆಟ್ನ ಒಳಪಾಕೆಟ್ನಲ್ಲಿ ಚಿನ್ನದ ಬಿಸ್ಕತ್ತುಗಳನ್ನು ಇಟ್ಟು ಸಾಗಿಸುತ್ತಿದ್ದರು. ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿಆರ್ಐ ಅಧಿಕಾರಿಗಳು ಅವರನ್ನು ಸ್ಥಗಿತಗೊಳಿಸಿದ ನಂತರ ಈ ವಿವರಗಳು ಬಹಿರಂಗಗೊಂಡಿವೆ.
ಸಿಂಡಿಕೇಟ್ ಜಾಲದ ಪಾತ್ರ
ಈ ಕಳ್ಳಸಾಗಣೆಯ ಹಿಂದೆ ದುಬೈ-ಆಧಾರಿತ ಸಂಘಟಿತ ಗುಂಪು ಕೆಲಸ ಮಾಡುತ್ತಿದ್ದು, ಅದರಲ್ಲಿ ರನ್ಯಾ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಮೊಬೈಲ್ ಮತ್ತು ಲ್ಯಾಪ್ಟಾಪ್ನಲ್ಲಿ ಹೆಚ್ಚಿನ ಸಾಕ್ಷ್ಯಗಳಿವೆ ಎಂದು ಹೇಳಲಾಗುತ್ತದೆ.
ರನ್ಯಾ ಅಳಲು
ವಕೀಲರನ್ನು ಭೇಟಿಯಾದಾಗ ರನ್ಯಾ, “ನಾನು ತಪ್ಪು ಮಾಡಿದ್ದೇನೆ. ನನಗೆ ಇಂಥ ಸಂಕಷ್ಟದ ಪರಿಸ್ಥಿತಿ ಎದುರಿಸಲಾಗುತ್ತಿಲ್ಲ. ಕಣ್ಣು ಮುಚ್ಚಿದರೂ ವಿಮಾನ ನಿಲ್ದಾಣದ ದೃಶ್ಯಗಳೇ ಕಂಡುಬರುತ್ತವೆ“ ಎಂದು ಕಣ್ಣೀರಿಟ್ಟಿದ್ದಾರೆ. ಬಂಧನದ ನಂತರ 5 ದಿನಗಳ ಕಾಲ ಅವರು ಒಂದೇ ಜೊತೆ ಬಟ್ಟೆ ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಿಯಲ್ ಎಸ್ಟೇಟ್ ಮತ್ತು ವಾರ್ಷಿಕ ವಿದೇಶ ಪ್ರವಾಸ
ರನ್ಯಾ ಕನ್ನಡ ಚಿತ್ರರಂಗದ ನಟಿ ಮಾತ್ರವಲ್ಲದೆ, ದುಬೈನಲ್ಲಿ ಫ್ರೀಲಾನ್ಸ್ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದಾರೆ. ಕಳೆದ ವರ್ಷದಲ್ಲಿ ಪ್ರತಿ 15 ದಿನಗಳಿಗೊಮ್ಮೆ ವಿದೇಶಕ್ಕೆ ಪ್ರಯಾಣಿಸಿದ್ದು, ಯುಕೆ ರಿಟರ್ನ್ ವೀಸಾ ಹೊಂದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.