ಸ್ಯಾಂಡಲ್ ವುಡ್ ಅಂಗಳದಲ್ಲಿ ನ್ಯೂ ಜನರೇಷನ್ ಮಾಸ್ ಹೀರೋ ಹುಟ್ಟಿ ಬರೋಬ್ಬರಿ 13 ವರ್ಷಗಳಾಯ್ತು. ಅಂದಿನಿಂದ ಆ ರೀತಿ ಭರವಸೆ ಮೂಡಿಸೋ ಒಬ್ಬೇ ಒಬ್ಬ ಹೀರೋ ಹುಟ್ಕೊಳ್ತಿಲ್ಲ. ಹೌದು.. 2012ರಲ್ಲಿ ಅದ್ಧೂರಿ ಸಿನಿಮಾದ ಮೂಲಕ ಧ್ರುವ ಸರ್ಜಾ ಇಂಡಸ್ಟ್ರಿಗೆ ಕಾಲಿಟ್ಟರು. ಚೊಚ್ಚಲ ಚಿತ್ರದಲ್ಲೇ ಮುಂದೊಂದು ದಿನ ಸ್ಟಾರ್ ಆಗುವ ಲಕ್ಷಣ ತೋರಿದ್ದರು. ಅದ್ರಂತೆ ಇಂದು ಧ್ರುವ ಸರ್ಜಾ ಆ್ಯಕ್ಷನ್ ಪ್ರಿನ್ಸ್ ಆಗಿದ್ದಾರೆ. ಹ್ಯಾಟ್ರಿಕ್ ಹಿಟ್ ಗಳನ್ನ ನೀಡಿದ್ದಾರೆ. ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಸಿನಿಮಾಗಳನ್ನ ಮಾಡ್ತಿದ್ದಾರೆ. ಹತ್ತು ವರ್ಷಕ್ಕೆ ಒಬ್ಬ ಸ್ಟಾರ್ ಹುಟ್ಕೊಂಡ್ರೆ ಸಾಕು, ಅದಕ್ಕಿಂತ ಖುಷಿಯ ವಿಚಾರ ಮತ್ತೇನಿದೆ ಅಲ್ಲವೇ..? ಆದ್ರೆ ಹಾಗೆ ಆಗ್ತಿಲ್ಲವಲ್ಲ ಅನ್ನೋದೇ ವಿಪರ್ಯಾಸ.
ಜಗ್ಗೇಶ್ ಮಕ್ಕಳು, ರವಿಚಂದ್ರನ್ ಮಕ್ಕಳು, ರಾಘವೇಂದ್ರ ರಾಜ್ ಕುಮಾರ್ ಮಕ್ಕಳು, ಶಶಿಕುಮಾರ್ ಮಗ, ರಾಮ್ ಕುಮಾರ್ ಮಕ್ಕಳು, ಟೈಗರ್ ಪ್ರಭಾಕರ್ ಮಗ ಹೀಗೆ ಸಾಲು ಸಾಲು ಸ್ಟಾರ್ ಮಕ್ಕಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರೂ ಯಾರೂ ಭರವಸೆ ಮೂಡಿಸಿಲ್ಲ. ದೊಡ್ಡ ಮಟ್ಟದ ಕ್ರೌಡ್ ನ ಥಿಯೇಟರ್ ಗೆ ಸೆಳೆಯುವಂತಹ ಮಾಸ್ ಹೀರೋಗಳಾಗಿಲ್ಲ. ಅದೆಲ್ಲ ಬಿಡಿ, ಸದ್ಯ ನಮ್ಮ ರೆಬೆಲ್ ಸ್ಟಾರ್ ಅಂಬರೀಶ್ ಅವರ ಮಗ ಅಭಿಷೇಕ್ ಅಂಬರೀಶ್ ನಟನೆಯ ಬ್ಯಾಡ್ ಮ್ಯಾನರ್ಸ್ ಚಿತ್ರ ತೆರೆಕಂಡು ಒಂದೂವರೆ ವರ್ಷ ಆಗ್ತಿದೆ. ಇಲ್ಲಿಯವರೆಗೂ ಯಾವುದೇ ಸಿನಿಮಾಗಾಗಿ ಅವರು ಬಣ್ಣ ಹಚ್ಚಿಲ್ಲ.
ಗಜಕೇಸರಿ ಡೈರೆಕ್ಟರ್ ಕೃಷ್ಣ ಅವರೊಟ್ಟಿಗೆ ಕಾಳಿ ಸಿನಿಮಾ ಅನೌನ್ಸ್ ಆಯ್ತು. ರಾಕ್ ಲೈನ್ ಪ್ರೊಡಕ್ಷನ್ಸ್ ಹಾಗೂ ಅಯೋಗ್ಯ ಫೇಮ್ ಡೈರೆಕ್ಟರ್ ಮಹೇಶ್ ಕುಮಾರ್ ಕಾಂಬಿನೇಷನ್ ನಲ್ಲಿ AA04 ಸಿನಿಮಾ ಕೂಡ ಘೋಷಣೆ ಆಯ್ತು. ಆದ್ರೆ ಅವು ಜಸ್ಟ್ ಅನೌನ್ಸ್ ಮೆಂಟ್ ಗಷ್ಟೇ ಸೀಮಿತ ಆಗಿವೆ. ನಂತರ ಎಳ್ಳಷ್ಟು ಕೂಡ ಮುಂದುವರೆದಿಲ್ಲ. ನಿರ್ದೇಶಕ ಕೃಷ್ಣ ಅವರನ್ನ ಕೇಳಿದ್ರೆ ಕಾಳಿ ಸಿನಿಮಾನ ಅಭಿಷೇಕ್ ಅಂಬರೀಶ್ ಅವರಿಗೆ ಮಾಡ್ತಿಲ್ಲ ಅಂತಾರೆ. ಮಹೇಶ್ ಕುಮಾರ್ ಅವರು ಅಯೋಗ್ಯ-2 ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ.
ಅಮರ್ ಸಿನಿಮಾದ ಮೂಲಕ ರೆಬೆಲ್ ಸ್ಟಾರ್ ಅಂಬರೀಶ್ ಖದರ್ ತೋರಿದ್ದ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್, ಚೊಚ್ಚಲ ಚಿತ್ರದಲ್ಲೇ ವ್ಹಾವ್ ಫೀಲ್ ತರಿಸಿದ್ರು. ಇಂದಿಗೂ ಅದರ ಹಾಡುಗಳು ಕಿವಿಯನ್ನ ಇಂಪಾಗಿಸುತ್ವೆ, ಕಣ್ಣನ ತಂಪಾಗಿಸುತ್ವೆ. ಸುಕ್ಕಾ ಸೂರಿಯ ಬ್ಯಾಡ್ ಮ್ಯಾನರ್ಸ್ ಸಿನಿಮಾಗಾಗಿ ಅಭಿ ಹಾಕಿದ ಎಫರ್ಟ್ಸ್ ಪ್ರತಿ ಫ್ರೇಮ್ ನಲ್ಲಿ ಕಾಣ್ತಿತ್ತು. ಅದೇ ಸಮಯದಲ್ಲಿ ಅವಿವಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ರು ಅಭಿಷೇಕ್.
ಇದೀಗ ತಂದೆಯಾಗಿ ಬಡ್ತಿ ಕೂಡ ಪಡೆದರು. ಮಗನ ಜೊತೆ ಫಾದರ್ ಹುಡ್ ನ ಎಂಜಾಯ್ ಮಾಡ್ತಿದ್ದಾರೆ. ಆದ್ರೆ ಸಿನಿಮಾ ಕರಿಯರ್ ಅಂತ ಬಂದಾಗ ಕೊಂಚ ಸೈಲೆಂಟ್ ಆಗಿದ್ದಾರೆ. ಇದು ಅವರೊಬ್ಬರ ಲಾಸ್ ಅಲ್ಲ, ಚಿತ್ರರಂಗಕ್ಕೂ ಲಾಸ್. ತಂದೆ ಖದರ್, ಮದರ್ ಇಂಡಿಯಾ ಸುಮಲತಾ ಪವರ್ ಎರಡೂ ಇದ್ಕೊಂಡು ಅಭಿ ಹೀಗೆ ಸೈಲೆಂಟ್ ಆದ್ರಲ್ಲಾ ಅನ್ನೋದು ಕಾಡುವ ಪ್ರಶ್ನೆ.
ಅಂದಹಾಗೆ ಅಂಬರೀಶ್ ಅವರು ಸಿನಿಮಾರಂಗ ಹಾಗೂ ರಾಜಕಾರಣ ಎರಡನ್ನೂ ಬ್ಯಾಲೆನ್ಸ್ ಮಾಡ್ತಿದ್ರು. ಒಂದು ಸಿನಿಮಾ ಥಿಯೇಟರ್ ನಲ್ಲಿ ಇರೋವಾಗ್ಲೇ ಮತ್ತೊಂದು ಸಿನಿಮಾದ ಶೂಟಿಂಗ್ ನಲ್ಲಿ ಇರ್ತಿದ್ರು. ಯಾರಾದ್ರೂ ಸಿನಿಮಾ ಲಾಸ್ ಆಯ್ತು ಅಂದ್ರೆ ಸಾಕು, ಅದು ಅವರಿಬ್ಬರ ಮಧ್ಯೆಯೇ ಗೌಪ್ಯವಅಗಿರ್ತಿತ್ತು. ಕೂಡಲೇ ಅವರಿಗೆ ಮತ್ತೊಮ್ಮೆ ಡೇಟ್ಸ್ ಕೊಟ್ಟು ಬ್ಯಾಲೆನ್ಸ್ ಮಾಡ್ತಿದ್ರಂತೆ. ಪ್ರೊಡ್ಯೂಸರ್ ಫ್ರೆಂಡ್ಲಿ ಸ್ಟಾರ್ ಆಗಿ ರೆಬೆಲ್ ಸ್ಟಾರ್ ಸಾಕಷ್ಟು ಮಂದಿಗೆ ಅನ್ನದಾತರಾಗಿದ್ರು.
ಡಿಸ್ಟ್ರಿಬ್ಯೂಟರ್ ಗಳು, ಬ್ಲಾಕ್ ಟಿಕೆಟ್ಸ್ ಮಾರೋರು ಒಂದಷ್ಟು ಮಂದಿ ಇವರ ಹೆಸರು ಹೇಳ್ಕೊಂಡೇ ಜೀವನ ಮಾಡಿದ್ದುಂಟು. ಇನ್ನು ಎ ಟಿ ರಘು ಅಂತಹ ಡೈರೆಕ್ಟರ್ ಒಬ್ಬರಿಗೇನೇ 25ಕ್ಕೂ ಅಧಿಕ ಸಿನಿಮಾಗಳನ್ನ ಮಾಡಿದ್ರು ಅಂಬರೀಶ್ ಅಂದ್ರೆ, ಅವರ ಬದ್ಧತೆ ಎಂಥದ್ದು ಅಂತ ನೀವೇ ಊಹಿಸಿಕೊಳ್ಳಿ. ಅಂಬರೀಶ್ ಅವರಲ್ಲಿ ದುರ್ಯೋಧನನ ಸ್ನೇಹವೂ ಇತ್ತು.. ಕರ್ಣನ ತ್ಯಾಗವೂ ಇತ್ತು. ಅವರಿಗೆ ಎಷ್ಟೇ ವ್ಯಸನಗಳಿದ್ರೂ ಸಹ, ಸಿನಿಮಾನ ಕೂಡ ಒಂದು ವ್ಯಸನವಾಗಿಸಿಕೊಂಡಿದ್ರು.
ಕಲಾವಿದರಾದವರು ಸೋಲು, ಗೆಲುವುಗಳನ್ನ ಸಮಾನವಾಗಿ ಸ್ವೀಕರಿಸಬೇಕು. ಅಭಿಷೇಕ್ ಅಂಬರೀಶ್ ಆದಷ್ಟು ಬೇಗ ಬಣ್ಣ ಹಚ್ಚಿದ್ರೆ ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಸುಮಲತಾ ಅಂಬರೀಶ್ ಅವರ ಅಸಂಖ್ಯಾತ ಅಭಿಮಾನಿಗಳು, ಕನ್ನಡಿಗರು ಖುಷಿ ಪಡ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಚಿತ್ರರಂಗ ಸಂಭ್ರಮಿಸುತ್ತೆ. ಮೊದಲ ಸಿನಿಮಾ ಮಾಡುವಾಗ ಥಾಯ್ಲೆಂಡ್ ಗೆ ತೆರಳಿ ಕಿಕ್ ಬಾಕ್ಸಿಂಗ್ ಮೂಲಕ ದೇಹದ ತೂಕ ಇಳಿಸಿದ್ರಂತೆ ಅಭಿಷೇಕ್. ಈಗಲೂ AA04ಗಾಗಿ ರೀಸೆಂಟ್ ಆಗಿ ಥಾಯ್ಲೆಂಡ್ ಗೆ ಹೋಗಿ ಬಂದಿದ್ದಾರಂತೆ. ಐತಿಹಾಸಿಕ ಹಿನ್ನೆಲೆಯ AA04 ಸಿನಿಮಾಗಾಗಿ ಕಳರಿ ಪಯಟ್ಟು ಸೇರಿದಂತೆ ಒಂದಷ್ಟು ಸಮರ ಕಲೆಗಳನ್ನ ಕಲಿಯಬೇಕಿದೆ. ಈ ಹಿನ್ನೆಲೆಯಲ್ಲಿ ಅಭಿ ದೊಡ್ಡ ಗ್ಯಾಪ್ ಪಡೆದಿದ್ದಾರೆ ಎನ್ನಲಾಗ್ತಿದೆ. ಎಲ್ಲಕ್ಕಿಂತ ಮಿಗಿಲಾಗಿ ತಾನು ಚಿಕ್ಕವನಿದ್ದಾಗ ತಂದೆ ಪ್ರತಿ ದಿನ ಶೂಟಿಂಗ್, ಡಬ್ಬಿಂಗ್ ಅಂತ ಬ್ಯುಸಿ ಇರ್ತಿದ್ದರಂತೆ. ತನಗೆ ಆದಂತೆ ತನ್ನ ಮಗನಿಗೆ ಆಗಬಾರದು ಅನ್ನೋ ನಿಟ್ಟಿನಲ್ಲಿ ಮಗನೊಂದಿಗೆ ಕ್ವಾಲಿಟಿ ಟೈಂ ಕಳೆಯುತ್ತಿರೋ ಅಭಿಷೇಕ್, ಫಾದರ್ ಹುಡ್ ಜೊತೆ ಜೊತೆಗೆ ಸಿನಿಮಾ ಕರಿಯರ್ ಬಗ್ಗೆಯೂ ಯೋಚಿಸಬೇಕಿದೆ. ಇಲ್ಲವಾದಲ್ಲಿ ಚಿತ್ರರಂಗಕ್ಕೆ ಗುಡ್ ಬೈ ಹೇಳಿದ್ರಾ ಅಭಿಷೇಕ್ ಅಂತ ಈ ರೀತಿ ಹೆಡ್ ಲೈನ್ಸ್ ಆಗಿಬಿಡ್ತಾರೆ ಅಷ್ಟೇ.
– ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್