ಬೆಂಗಳೂರು: ಬಿಗ್ಬಾಸ್ ಎಂದರೆ ಇಲ್ಲಿ ಎನಿಥಿಂಗ್ ಕ್ಯಾನ್ ಹ್ಯಾಪನ್ (Anything can happen). ಇದಕ್ಕೆ ಪೂರಕವೆಂಬಂತೆ ಸೀಸನ್ 12ರಲ್ಲಿ ಬಿಗ್ಬಾಸ್ ಅತಿದೊಡ್ಡ ಟ್ವಿಸ್ಟ್ ನೀಡಿದ್ದಾರೆ. ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಮನೆಗೆ ಎಂಟ್ರಿ ಕೊಟ್ಟು, ಮನೆಯವರ ನಿದ್ದೆಗೆಡಿಸಿದ್ದ ರಜತ್ ಮತ್ತು ಚೈತ್ರಾ ಕುಂದಾಪುರ ಈಗ ಸದ್ದಿಲ್ಲದೆ ಮನೆಯಿಂದ ಹೊರಬಂದಿದ್ದಾರೆ. ಈ ವೇಳೆ ಇವರಿಬ್ಬರು ಸ್ಪರ್ಧಿಗಳಲ್ಲ, ಕೇವಲ ಅತಿಥಿಗಳಾಗಿದ್ದರು ಎಂದು ಬಿಗ್ಬಾಸ್ ಘೋಷಿಸಿದ್ದಾರೆ.
ಕಳೆದ ವಾರಗಳಲ್ಲಿ ಬಿಗ್ಬಾಸ್ ಸೀಸನ್ 11ರ ಖ್ಯಾತಿಯ ರಜತ್ ಮತ್ತು ಚೈತ್ರಾ ಮನೆಗೆ ಬಂದಾಗ ಇಡೀ ಮನೆಯ ಚಿತ್ರಣವೇ ಬದಲಾಗಿತ್ತು. ರಜತ್ ಮನೆಯಲ್ಲಿ ಕ್ಯಾಪ್ಟನ್ ಆಗಿ ಆರ್ಭಟಿಸಿದ್ದರು, ಚೈತ್ರಾ ಉಸ್ತುವಾರಿಯಾಗಿ ಎಲ್ಲರಿಗೂ ಟಫ್ ಫೈಟ್ ಕೊಟ್ಟಿದ್ದರು. ಇವರಿಬ್ಬರೂ ಟ್ರೋಫಿ ಗೆಲ್ಲುವ ರೇಸ್ಗೆ ಬಂದಿದ್ದಾರೆ ಎಂದೇ ಉಳಿದ ಸ್ಪರ್ಧಿಗಳು ಮತ್ತು ಪ್ರೇಕ್ಷಕರು ನಂಬಿದ್ದರು. ಆದರೆ, ಇವರು ವೈಲ್ಡ್ ಕಾರ್ಡ್ ಎಂಟ್ರಿ ಎಂದು ಬಿಂಬಿಸಿ ಬಿಗ್ಬಾಸ್ ಎಲ್ಲರಿಗೂ ದೊಡ್ಡ ಚಮಕ್ ನೀಡಿದ್ದಾರೆ.
ಮಾಹಿತಿಗಳ ಪ್ರಕಾರ, ರಜತ್ ಮತ್ತು ಚೈತ್ರಾ ಮನೆಗೆ ಬರುವ ಮುನ್ನವೇ ಈ ಕುರಿತು ಬಿಗ್ಬಾಸ್ ತಂಡದೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಇವರು ಸ್ಪರ್ಧಿಗಳಾಗಿ ಅಲ್ಲದೆ, ಮನೆಯ ಆಟದ ವೇಗ ಹೆಚ್ಚಿಸಲು ಅತಿಥಿಗಳಾಗಿ ಬರಲಿದ್ದಾರೆ ಎಂಬುದು ಮೊದಲೇ ನಿಗದಿಯಾಗಿತ್ತು. ಈ ಕಾರಣಕ್ಕಾಗಿಯೇ ಈ ವಾರ ಯಾವುದೇ ವೋಟಿಂಗ್ ಲೈನ್ (Voting Line) ಓಪನ್ ಇರಲಿಲ್ಲ. ಮತದಾನ ಇಲ್ಲದಿದ್ದರೂ ಕಿಚ್ಚನ ಸಮ್ಮುಖದಲ್ಲಿ ಎಲಿಮಿನೇಷನ್ ಹೇಗೆ ನಡೆಯುತ್ತದೆ ಎಂಬ ಕುತೂಹಲಕ್ಕೀಗ ತೆರೆ ಬಿದ್ದಿದೆ.
ಟ್ವಿಸ್ಟ್ಗಳ ಮೇಲೆ ಟ್ವಿಸ್ಟ್:
ಈ ಸೀಸನ್ ಆರಂಭದಿಂದಲೂ ಬಿಗ್ಬಾಸ್ ತನ್ನ ಹಳೆಯ ರೂಲ್ಸ್ಗಳನ್ನು ಬದಿಗಿಟ್ಟಿದ್ದಾರೆ. ಮೊದಲ ದಿನವೇ ರಕ್ಷಿತಾ ಅವರನ್ನು ಹೊರಗೆ ಕಳಿಸಿ ಮತ್ತೆ ವಾಪಸ್ ಕರೆಸಿದ್ದು, ನಂತರ ಮೂವರು ವೈಲ್ಡ್ ಕಾರ್ಡ್ ಸದಸ್ಯರನ್ನು ಸೇರಿಸಿದ್ದು, ಈಗ ಹಳೆಯ ಸ್ಪರ್ಧಿಗಳನ್ನು ಅತಿಥಿಗಳಾಗಿ ತಂದು ಆಟದ ದಿಕ್ಕನ್ನೇ ಬದಲಿಸಿದ್ದಾರೆ. ರಜತ್ ಮತ್ತು ಚೈತ್ರಾ ಹೊರ ಬಂದಿದ್ದರಿಂದ ಉಳಿದ ಸ್ಪರ್ಧಿಗಳಿಗೆ ಒಂದು ಕಡೆ ನೆಮ್ಮದಿ ತಂದಿದ್ದರೆ, ಇನ್ನೊಂದೆಡೆ ಆಟದ ಆಟ ಇನ್ನೇನು ಮುಗಿಯುವ ಹಂತದಲ್ಲಿದ್ದು ಸ್ಪರ್ದಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ರಜತ್ ಮತ್ತು ಚೈತ್ರಾ ಕೇವಲ ಅತಿಥಿಗಳಾಗಿ ಬಂದು ಹೋದರೂ, ಈ ಸೀಸನ್ನ ಅತ್ಯಂತ ಪ್ರಭಾವಿ ಸ್ಪರ್ಧಿಗಳಂತೆ ಆಟವಾಡಿದ್ದು ಸುಳ್ಳಲ್ಲ. ಈಗ ಇವರಿಬ್ಬರು ಮನೆಯಿಂದ ಹೊರಬಂದಿದ್ದು, ಮನೆಯಲ್ಲಿ ಅಸಲಿ ಆಟಗಾರರ ನಡುವಿನ ಸ್ಪರ್ಧೆ ಹೇಗೆ ಇರಲಿದೆ ಎಂಬುದು ಕುತೂಹಲ ಮೂಡಿಸಿದೆ.





