ಬಿಗ್ ಬಾಸ್ 17 ಹಿಂದಿ ಆವೃತ್ತಿಯ ಖ್ಯಾತ ಸ್ಪರ್ಧಿ ಮತ್ತು ಜನಪ್ರಿಯ ಮೋಟೋವ್ಲಾಗರ್ ಅನುರಾಗ್ ದೊಭಾಲ್ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಖಿನ್ನತೆಯಿಂದಾಗಿ “ಕೊನೆಯ ರೈಡ್” ಎಂದು ಇನ್ಸ್ಟಾಗ್ರಾಮ್ ಲೈವ್ನಲ್ಲಿ ಹೇಳಿ ದೆಹಲಿ-ಮೀರುತ್ ಎಕ್ಸ್ಪ್ರೆಸ್ವೇಯಲ್ಲಿ ತನ್ನ ಟೊಯೋಟಾ ಫಾರ್ಚ್ಯೂನರ್ನಲ್ಲಿ ಅತೀ ವೇಗದಲ್ಲಿಡಿವೈಡರ್ಗೆ ಡಿಕ್ಕಿ ಹೊಡೆದು ಅಪಘಾತ ಮಾಡಿಕೊಂಡಿದ್ದಾರೆ. ಘಟನೆಯ ಸಮಯದಲ್ಲಿ ಸುಮಾರು 80,000 ಮಂದಿ ಲೈವ್ ವೀಕ್ಷಿಸುತ್ತಿದ್ದರು.
ಮಾರ್ಚ್ 7, 2026ರ ಶನಿವಾರ ರಾತ್ರಿ ನಡೆದ ಈ ದುರಂತದಲ್ಲಿ ಅನುರಾಗ್ ತೀವ್ರ ಗಾಯಗೊಂಡು ಸಬ್ಹಾರ್ತಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಪ್ರಸ್ತುತ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಮ್ಯಾನೇಜರ್ ರೋಹಿತ್ ಪಾಂಡೆ ಇನ್ಸ್ಟಾಗ್ರಾಮ್ನಲ್ಲಿ “ಅನುರಾಗ್ ಸದ್ಯ ಐಸಿಯುವಿನಲ್ಲಿದ್ದಾರೆ. ಎಲ್ಲರೂ ಪ್ರಾರ್ಥಿಸಿ. ನಾವು ಡಾಕ್ಟರ್ಗಳೊಂದಿಗೆ ಸಂಪರ್ಕದಲ್ಲಿದ್ದೇವೆ” ಎಂದು ಮನವಿ ಮಾಡಿಕೊಂಡಿದ್ದಾರೆ.
ಅನುರಾಗ್ ಇತ್ತೀಚೆಗೆ ತನ್ನ ಯೂಟ್ಯೂಬ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ತೀವ್ರ ಖಿನ್ನತೆಯ ಬಗ್ಗೆ ಮಾತನಾಡಿದ್ದರು. ಪ್ರೀತಿಸಿ ಮದುವೆಯಾದ ಪತ್ನಿ ರಿತಿಕಾ ಚೌಹಾಣ್ ಅವರೊಂದಿಗಿನ ಸಂಬಂಧಕ್ಕೆ ಕುಟುಂಬ (ಪೋಷಕರು ಮತ್ತು ಸಹೋದರ) ವಿರೋಧ ವ್ಯಕ್ತಪಡಿಸಿದ್ದರಿಂದ ಅಂತರ್ಜಾತಿ ವಿವಾಹ ಸಂಕಷ್ಟ ಎದುರಿಸಿದ್ದರು. ಮದುವೆಯ ನಂತರ ಕುಟುಂಬದಿಂದ ಮನೆಯಿಂದ ಹೊರಹಾಕಲ್ಪಟ್ಟು, ಮಾನಸಿಕ ಕಿರುಕುಳ ಎದುರಿಸಿದ್ದೇನೆ ಎಂದು ಅನುರಾಗ್ ವಿಡಿಯೋಗಳಲ್ಲಿ ಆರೋಪಿಸಿದ್ದರು. ಇದರಿಂದ ತೀವ್ರ ಖಿನ್ನತೆಗೆ ಜಾರಿ, ಕೆಲವು ತಿಂಗಳುಗಳಿಂದ ಮಾನಸಿಕ ಒತ್ತಡದಲ್ಲಿದ್ದರು ಎಂದು ವರದಿಗಳಿವೆ.
ಲೈವ್ನಲ್ಲಿ ಅನುರಾಗ್ ತನ್ನ ತಾಯಿಯನ್ನು ಉದ್ದೇಶಿಸಿ “ಅಗಲೇ ಜನ್ಮದಲ್ಲಿ ಬಂದರೆ ಪ್ರೀತಿ ಕೊಡಮ್ಮಾ, ಬಹುತ್ ಜರೂರತ್ ಥಿ ಪ್ಯಾರ್ ಕಿ” ಎಂದು ಕಣ್ಣೀರು ಹಾಕುತ್ತಾ ಹೇಳಿದ್ದರು. “ಲೆಟ್ಸ್ ಗೋ ಫಾರ್ ಫೈನಲ್ ರೈಡ್” ಎಂದು ಹೇಳಿ ವಾಹನವನ್ನು ಡಿವೈಡರ್ಗೆ ಡಿಕ್ಕಿ ಹೊಡೆದಿದ್ದಾರೆ. ಅಪಘಾತದ ನಂತರ ಸ್ಥಳೀಯರು ರಕ್ಷಣೆ ಮಾಡಿ ಆಸ್ಪತ್ರೆಗೆ ಕರೆದೊಯ್ದರು.
ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅನುರಾಗ್ ಶೀಘ್ರ ಚೇತರಿಕೆಗೆ ಪ್ರಾರ್ಥಿಸುತ್ತಿದ್ದಾರೆ. ಈ ಘಟನೆ ಮಾನಸಿಕ ಆರೋಗ್ಯ, ಕುಟುಂಬ ಸಂಬಂಧಗಳು ಮತ್ತು ಸೆಲೆಬ್ರಿಟಿ ಒತ್ತಡದ ಬಗ್ಗೆ ಚರ್ಚೆಯನ್ನು ಉಂಟುಮಾಡಿದೆ. ಅನುರಾಗ್ ಚೇತರಿಸಿಕೊಳ್ಳಲಿ ಎಂದು ಎಲ್ಲರೂ ಆಶಿಸುತ್ತಿದ್ದಾರೆ.





