ಬೆಂಗಳೂರು: ಕ್ರಿಕೆಟ್ ಪ್ರೇಮಿಗಳ ಹಬ್ಬ ಇಂಡಿಯನ್ ಪ್ರೀಮಿಯರ್ ಲೀಗ್ (IPL) 19ನೇ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದೆ. ಕಳೆದ ಬಾರಿ ಇತಿಹಾಸ ನಿರ್ಮಿಸಿ ಚೊಚ್ಚಲ ಬಾರಿಗೆ ಟ್ರೋಫಿ ಗೆದ್ದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮೇಲೆ ಈ ಬಾರಿ ನಿರೀಕ್ಷೆಗಳು ಹೆಚ್ಚಿದೆ. ಮಾರ್ಚ್ 28ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಆರ್ಸಿಬಿ, ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಈ ಮಹತ್ವದ ಪಂದ್ಯಕ್ಕೂ ಮುನ್ನ ತಂಡದ ಆಟಗಾರರನ್ನು ಉದ್ದೇಶಿಸಿ ಮಾತನಾಡಿರುವ ರನ್ ಮಷೀನ್ ವಿರಾಟ್ ಕೊಹ್ಲಿ ಈ ಬಾರಿ ಹಾದಿ ಸುಲಭವಿಲ್ಲ ಎಂದು ಎಚ್ಚರಿಸಿದ್ದಾರೆ.
ಕಳೆದ ಬಾರಿಯ ಗೆಲುವು ಇತಿಹಾಸ, ಈ ಬಾರಿ ಹೊಸ ಸವಾಲು
ಕಳೆದ ಸೀಸನ್ನಲ್ಲಿ ಆರ್ಸಿಬಿ ಅದ್ಭುತ ಪ್ರದರ್ಶನ ನೀಡಿ ಕಪ್ ಗೆದ್ದ ಸಂಭ್ರಮ ಇನ್ನೂ ಅಭಿಮಾನಿಗಳ ಕಣ್ಣ ಮುಂದಿದೆ. ಆದರೆ, ವಿರಾಟ್ ಕೊಹ್ಲಿ ಪ್ರಕಾರ ಆ ಸಂಭ್ರಮ ಈಗ ಹಳೆಯದು. ನಾವು ಚಾಂಪಿಯನ್ ಆಗಲು ಕಳೆದ ಎರಡು-ಮೂರು ಆವೃತ್ತಿಗಳಲ್ಲಿ ರಕ್ತ ಸುರಿಸಿ ಕಷ್ಟಪಟ್ಟಿದ್ದೇವೆ. ಆದರೆ ನೆನಪಿಡಿ, ಒಮ್ಮೆ ಚಾಂಪಿಯನ್ ಆದ ನಂತರ ಅದನ್ನು ಉಳಿಸಿಕೊಳ್ಳುವುದು ಮೊದಲ ಬಾರಿ ಗೆಲ್ಲುವುದಕ್ಕಿಂತಲೂ ಕಷ್ಟ. ಈಗ ಪ್ರತಿಯೊಂದು ತಂಡವೂ ನಮ್ಮನ್ನು ಸೋಲಿಸಲು ವಿಶೇಷ ತಂತ್ರಗಳೊಂದಿಗೆ ಕಣಕ್ಕಿಳಿಯಲಿವೆ ಎಂದು ಕೊಹ್ಲಿ ಆಟಗಾರರಿಗೆ ಮನವರಿಕೆ ಮಾಡಿದ್ದಾರೆ.
𝑫𝒂𝒚 1️⃣. 𝑾𝒐𝒓𝒌 𝒎𝒐𝒅𝒆 🔛. ❤️🔥
Head Coach Andy Flower’s welcome to the new members of the squad, and Virat’s pep talk in the first practice session of #IPL2026 at ನಮ್ಮ Chinnaswamy. 👊
Watch more on @bigbasket_com presents RCB Bold Diaries. 🎥#PlayBold #ನಮ್ಮRCB pic.twitter.com/ee8mPnIgWb
— Royal Challengers Bengaluru (@RCBTweets) March 20, 2026
ತಾಲೀಮು ಶಿಬಿರದಲ್ಲಿ ಬೆವರು ಹರಿಸುತ್ತಿರುವ ಆಟಗಾರರಿಗೆ ಕೊಹ್ಲಿ ಶಿಸ್ತಿನ ಪಾಠ ಮಾಡಿದ್ದಾರೆ. ನಾವು ಯಾವುದೇ ಒಂದು ನಿಮಿಷವನ್ನೂ ವ್ಯರ್ಥ ಮಾಡುವಂತಿಲ್ಲ. ತರಬೇತಿ ಇರಲಿ ಅಥವಾ ಪಂದ್ಯ ಇರಲಿ, ಪ್ರತಿಯೊಂದು ವಿಭಾಗದಲ್ಲೂ ನಾವು ನಮ್ಮ ನೂರಕ್ಕೆ ನೂರರಷ್ಟು ಮಾತ್ರವಲ್ಲ, 120% ಶ್ರಮ ಹಾಕಬೇಕಿದೆ. ನಾವು ಕೇವಲ ಹೆಸರಿಗಷ್ಟೇ ಚಾಲೆಂಜರ್ಸ್ ಅಲ್ಲ, ಮೈದಾನದಲ್ಲಿ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ನಮಗಿದೆ ಎಂಬುದನ್ನು ಸಾಬೀತುಪಡಿಸಬೇಕು ಎಂದು ಹೇಳಿ ಆಟಗಾರರಿಗೆ ಹುರಿದುಂವಿಸಿದ್ದಾರೆ.
ಮಾರ್ಚ್ 28ರಂದು ಚಿನ್ನಸ್ವಾಮಿ ಕ್ರೀಡಾಂಗಣ ‘ರೆಡ್ ಆರ್ಮಿ’ಯಿಂದ ತುಂಬಿ ತುಳುಕಲಿದೆ. ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯವು ಟೂರ್ನಿಗೆ ದಿಕ್ಸೂಚಿಯಾಗಲಿದೆ. ಆರ್ಸಿಬಿ ತನ್ನ ತವರಿನ ಮೈದಾನದಲ್ಲಿ ಜಯದೊಂದಿಗೆ ಶುಭಾರಂಭ ಮಾಡಲು ಸನ್ನದ್ಧವಾಗಿದೆ. ಆಟಗಾರರ ಮುಖದಲ್ಲಿ ಚಾಂಪಿಯನ್ ಪಟ್ಟ ಉಳಿಸಿಕೊಳ್ಳುವ ಛಲ ಎದ್ದು ಕಾಣುತ್ತಿದೆ ಎಂದು ಕೊಹ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವಿರಾಟ್ ಕೊಹ್ಲಿ ಅವರ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆರ್ಸಿಬಿ ಅಭಿಮಾನಿಗಳಲ್ಲಿ ಹೊಸ ಸಂಚಲನ ಮೂಡಿಸಿದೆ.





