ಬೆಂಗಳೂರು, ಮಾ.20: ಯುಗಾದಿ ಮತ್ತು ರಂಜಾನ್ ಹಬ್ಬಗಳ ಸಂಭ್ರಮದ ನಡುವೆ ನಗರದ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಮಂಗಮ್ಮನಪಾಳ್ಯದಲ್ಲಿ ನಡೆದ ಉಚಿತ ಕೋಳಿ ವಿತರಣಾ ಕಾರ್ಯಕ್ರಮ ಭಾರಿ ಗಮನ ಸೆಳೆದಿದೆ. ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಭಾಗವಹಿಸಿದ್ದು, ಬೆಳಗ್ಗೆಯೇ ಕಿಲೋಮೀಟರ್ಗಳಷ್ಟು ಉದ್ದದ ಸಾಲುಗಳು ಕಂಡುಬಂದವು.
ಯುಗಾದಿ ಹಬ್ಬದ ನಂತರ ಆಚರಿಸುವ ‘ಹೊಸತೊಡಕು’ ಹಿನ್ನೆಲೆಯಲ್ಲಿ ಮಾಂಸಾಹಾರದ ಬೇಡಿಕೆ ಹೆಚ್ಚಾಗಿರುವುದು ಸಹಜ. ಇದರ ಜೊತೆಗೆ ರಂಜಾನ್ ಹಬ್ಬದ ಸನ್ನಿವೇಶವೂ ಇದ್ದುದರಿಂದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಸಹಾಯವಾಗಲಿ ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಸುಮಾರು 3,000ಕ್ಕೂ ಹೆಚ್ಚು ಕೋಳಿಗಳನ್ನು ಉಚಿತವಾಗಿ ವಿತರಿಸಲಾಗಿದೆ.
ಹೆಚ್.ಎಸ್.ಆರ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಘವೇಂದ್ರ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಿಗ್ಗೆ 7 ಗಂಟೆಯಿಂದಲೇ ಜನರು ಮಂಗಮ್ಮನಪಾಳ್ಯದಲ್ಲಿ ಮಹಿಳೆಯರು, ಹಿರಿಯರು, ಯುವಕರು ಸೇರಿದಂತೆ ಎಲ್ಲಾ ವರ್ಗದ ಜನರು ಉಚಿತ ಕೋಳಿ ಪಡೆಯಲು ಸಾಲಿನಲ್ಲಿ ನಿಂತಿದ್ದು, ರಸ್ತೆ ತುಂಬಾ ಜನಜಂಗುಳಿಯಿಂದ ಕಿಕ್ಕಿರಿದು ಹೋಗಿತ್ತು.
ಕೋಳಿ ಪಡೆಯಲು ಬಂದ ಜನರು ನಾಮುಂದು-ತಾಮುಂದು ಎಂಬಂತೆ ತಳ್ಳಾಟ-ನೂಕಾಟ ನಡೆಸಿದ ದೃಶ್ಯಗಳೂ ಕಂಡುಬಂದವು. ಕಾರ್ಯಕ್ರಮಕ್ಕೆ ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ಎಂಎಲ್ಸಿ ರಾಮೋಜಿ ಗೌಡ ಹಾಗೂ ಕಾಂಗ್ರೆಸ್ ಮುಖಂಡ ಉಮಾಪತಿ ಗೌಡ ಅವರು ಚಾಲನೆ ನೀಡಿದರು. ನಾಯಕರು ಮಾತನಾಡಿ, ಹಬ್ಬದ ಸಂದರ್ಭದಲ್ಲಿ ಜನರಿಗೆ ಸಹಾಯ ಮಾಡುವುದು ನಮ್ಮ ಕರ್ತವ್ಯ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಬೆಲೆ ಏರಿಕೆಯಿಂದಾಗಿ ಮಾಂಸ ಖರೀದಿಸುವುದು ಕೆಲವರಿಗೆ ಕಷ್ಟವಾಗಿರುವ ಸಂದರ್ಭದಲ್ಲಿ, ಉಚಿತವಾಗಿ ಕೋಳಿ ದೊರೆತಿರುವುದು ಜನರಲ್ಲಿ ವಿಶೇಷ ಸಂತೋಷ ಮೂಡಿಸಿದೆ. ಕೋಳಿ ಪಡೆದುಕೊಂಡ ಜನರು ಸಂತೋಷದಿಂದ ಮನೆಗೆ ತೆರಳಿದರು. “ಹಬ್ಬದ ಸಮಯದಲ್ಲಿ ಉಚಿತವಾಗಿ ಕೋಳಿ ಸಿಕ್ಕಿದ್ದು ತುಂಬಾ ಖುಷಿಯಾಗಿದೆ. ಇದು ನಮ್ಮ ಕುಟುಂಬಕ್ಕೆ ದೊಡ್ಡ ಸಹಾಯವಾಗಿದೆ” ಎಂದು ಹಲವರು ಪ್ರತಿಕ್ರಿಯಿಸಿದರು.




