ಹುಬ್ಬಳ್ಳಿ : ಸಾಲ ಮಾಡಿಯಾದರೂ ತುಪ್ಪ ತಿನ್ನು ಎನ್ನುವಂತೆ ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ನಲ್ಲಿ ವಿತ್ತಿಯ ಕೊರತೆಯನ್ನು ಮೇಲೆ ಎತ್ತುವುದರ ಬಗ್ಗೆ ಗಮನ ಹರಿಸದೇ 4.48 ಲಕ್ಷ ಕೋಟಿ ರೂ. ಬಜೆಟ್ ಗಾತ್ರ ಹೆಚ್ಚಳ ಮಾಡಿ ರಾಜ್ಯವನ್ನು ಮತ್ತಷ್ಟು ಸಾಲದ ಸುಳಿಗೆ ಸಿಲುಕುವಂತೆ ಮಾಡಿರುವ ಆರ್ಥಿಕ ಸಮತೋಲನ ಇಲ್ಲದ ಆರ್ಥಿಕ ಸಂಕಷ್ಟಕ್ಕೆ ದೂಡುವ ಬಜೆಟ್ ಆಗಿದೆ ಎಂದು ಸ್ವರ್ಣಾ ಗ್ರುಪ್ ಆಪ್ ಕಂಪನೀಸ್ನ ವ್ಯವಸ್ಥಾಪಕ ನಿರ್ದೇಶಕ ಡಾ.ಸಿಎಚ್ ವಿಎಸ್ವಿ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯ ಬಜೆಟ್ ಕುರಿತು ಪತ್ರಿಕ್ರಿಯಿಸಿರುವ ಅವರು, ಕೇವಲ ಬಜೆಟ್ ಗಾತ್ರ ಹೆಚ್ಚಿಸಿದರಷ್ಟೇ ಸಾಲದು, ಅದಕ್ಕೆ ಯಾವ ರೀತಿಯ ಸಂಪನ್ಮೂಲ ಕ್ರೋಡಿಕರಣ ಮಾಡಬೇಕೆಂಬ ಚಿಂತನೆಯೂ ಇರಬೇಕು. ಈಗಾಗಲೇ ಗ್ಯಾರಂಟಿ ಯೋಜನೆಗಳಿಗಾಗಿ ನೀರಿನಂತೆ ಹಣ ವ್ಯಯಿಸುತ್ತಿರುವ ರಾಜ್ಯ ಸರ್ಕಾರ, ಅಭಿವೃದ್ಧಿ ಕಾರ್ಯಗಳಿಗೆ ಹಣ ಹೊಂದಿಸುವ ಬಗ್ಗೆಯೂ ಚಿಂತನೆ ನಡೆಸಬೇಕಿತ್ತು ಎಂದು ಸಲಹೆ ಮಾಡಿದ್ದಾರೆ.
ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ನಲ್ಲಿ ರಾಜ್ಯದ ಆರ್ಥಿಕ ಅಭಿವೃದ್ಧಿ ಮತ್ತು ಮೂಲಸೌಲಭ್ಯ ಅಭಿವೃದ್ಧಿಗೆ ಯಾವುದೇ ರಚನಾತ್ಮಕ ಪ್ರಸ್ತಾವನೆಗಳಿಲ್ಲ. ಬದಲಾಗಿ 97,449 ಕೋಟಿ ವಿತ್ತೀಯ ಕೊರತೆ ಮತ್ತು 29,957 ಕೋಟಿ ರಾಜಸ್ವ ಸಂಗ್ರಹ ಕೊರತೆ ತೋರಿಸಿದ್ದಾರೆ. ರಾಜ್ಯದ ಮೇಲೆ 1.32 ಲಕ್ಷ ಕೋಟಿ ಸಾಲದ ಹೊರೆ ಹೊರಿಸಿದ್ದಾರೆ. ಕಳೆದ ವರ್ಷದ ಬಜೆಟ್ ಗಾತ್ರಕ್ಕಿಂತ 40 ಸಾವಿರ ಕೋಟಿ ರೂ. ಹೆಚ್ಚಳ ಮಾಡಿದ್ದರೂ. ರಾಜ್ಯ ಜಿಡಿಪಿಯ 2.95ಕ್ಕೆ ಮಿತಿಗೊಳಿಸಲಾಗಿದೆ. ರಾಜ್ಯದ ಒಟ್ಟು ಸಾಲ 8.24 ಲಕ್ಷ ಕೋಟಿಗೆ ಹೆಚ್ಚಳವಾಗಿದೆ. ಇದನ್ನು ಗಮನಿಸಿದರೆ, ಸಿದ್ದರಾಮಯ್ಯ ಅವರಿಗೆ ರಾಜ್ಯದ ಆದಾಯ ಹೆಚ್ಚಿಸುವುದಕ್ಕಿಂತ ಸಾಲ ಮಾಡಿಯಾದರೂ ತುಪ್ಪ ತಿನ್ನಬೇಕು ಎನ್ನುವುದರ ಮೇಲೆಯೇ ಹೆಚ್ಚಿನ ಆಸಕ್ತಿ ಇದ್ದಂತಿದೆ. ಇದು ಮುಂಬರುವ ದಿನಗಳಲ್ಲಿ ರಾಜ್ಯದ ಆರ್ಥಿಕ ಸ್ಥಿತಿಗೆ ಮಾರಕವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದ್ದಾರೆ.
ಇನ್ನು ರಾಜ್ಯದ ಎರಡನೇ ದೊಡ್ಡ ನಗರವಾದ ಹುಬ್ಬಳ್ಳಿಯ ಮೂಲ ಸೌಕರ್ಯಕ್ಕೆ ಅನುದಾನ ನೀಡಬೇಕೆಂಬ ಬೇಡಿಕೆಯೂ ಹುಸಿಯಾಗಿದೆ. ಬೆಂಗಳೂರಿಗೆ ನೀಡಲಾದ ಅನುದಾನದಲ್ಲಿ ಶೇ. 1 ರಷ್ಟು ಅನುದಾನವನ್ನು ಹುಬ್ಬಳ್ಳಿ-ಧಾರವಾಡಕ್ಕೆ ನೀಡಲಾಗಿಲ್ಲ. ಮಹದಾಯಿ ಯೋಜನೆ ಬಗ್ಗೆ ಸ್ಪಷ್ಟತೆ ಇಲ್ಲ. ಇದರ ನಡುವೆ ಮುಂಬೈ ಬೆಂಗಳೂರು ಕೈಗಾರಿಕಾ ಕಾರಿಡಾರ್ ವ್ಯಾಪ್ತಿಯ ಧಾರವಾಡ ಕೈಗಾರಿಕಾ ನೋಡ್ಗೆ 1 ಸಾವಿರ ಎಕರೆ ಜಮೀನು ಸ್ವಾಧೀನಕ್ಕೆ 200 ಕೋಟಿ ರೂ. ಮೀಸಲು ಇಟ್ಟಿರುವುದು ಉದ್ಯಮ ವಲಯದಲ್ಲಿ ಸಮಾಧಾನ ಮೂಡಿಸಿದೆ ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯನವರ 17ನೇ ಬಜೆಟ್ ಆರ್ಥಿಕ ಶಿಸ್ತು ಇಲ್ಲದೇ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ ನೀಡದ ನಿರಾಶಾದಾಯಕ ಬಜೆಟ್ ಆಗಿದೆ ಎಂದು ಡಾ.ಪ್ರಸಾದ್ ಹೇಳಿದ್ದಾರೆ.





