ಚೆನ್ನೈ: ತಮಿಳುನಾಡಿನ ಉಚ್ಚಾಟಿತ ಎಐಎಡಿಎಂಕೆ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಒ. ಪನ್ನೀರ್ಸೆಲ್ವಂ ಅವರು ಆಡಳಿತಾರೂಢ ಡಿಎಂಕೆ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಡಿಎಂಕೆ ಮುಖ್ಯ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಹಾಗೂ ಪಕ್ಷದ ಅಧ್ಯಕ್ಷ ಎಂ.ಕೆ ಸ್ಟಾಲಿನ್ ಹಾಗೂ ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರ ಸಮ್ಮುಖದಲ್ಲಿ ಒಪಿಎಸ್ ಪಕ್ಷದ ಸದಸ್ಯತ್ವವನ್ನು ಸ್ವೀಕರಿಸಿದರು.
ಮೂರು ಬಾರಿ ತಮಿಳುನಾಡಿನ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದ ಪನ್ನೀರ್ಸೆಲ್ವಂ, ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ದೀರ್ಘಕಾಲದ ನಿಷ್ಠಾವಂತ ಸಹಾಯಕ ಹಾಗೂ ಆಪ್ತರಾಗಿದ್ದರು. ಜಯಲಲಿತಾ ಅವರ ನಿಧನದ ಬಳಿಕ ಎಐಎಡಿಎಂಕೆ ಪಕ್ಷದ ಒಳರಾಜಕೀಯದಲ್ಲಿ ಭಾರೀ ಬದಲಾವಣೆಗಳು ಸಂಭವಿಸಿತು. ಪಕ್ಷದ ನೇತೃತ್ವ ವಿಚಾರದಲ್ಲಿ ಉಂಟಾದ ಗೊಂದಲ, ಆಂತರಿಕ ಅಧಿಕಾರ ಹೋರಾಟ ಮತ್ತು ಭಿನ್ನಾಭಿಪ್ರಾಯಗಳ ಪರಿಣಾಮವಾಗಿ 2022ರಲ್ಲಿ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಯಿತು.
2022ರ ಜುಲೈ 11ರಂದು ಎಐಎಡಿಎಂಕೆಯ ಮಧ್ಯಂತರ ಪ್ರಧಾನ ಕಾರ್ಯದರ್ಶಿಯಾಗಿ ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರನ್ನು ನೇಮಿಸಲಾಯಿತು. ಈ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಪನ್ನೀರ್ಸೆಲ್ವಂ ಅವರನ್ನು ಪಕ್ಷದ ಖಜಾಂಚಿ ಹುದ್ದೆಯಿಂದ ಹಾಗೂ ಪ್ರಾಥಮಿಕ ಸದಸ್ಯತ್ವದಿಂದಲೇ ಹೊರಹಾಕಲಾಯಿತು. ಈ ಬೆಳವಣಿಗೆಗಳು ಎಐಎಡಿಎಂಕೆಯ ಎರಡು ಪ್ರಮುಖ ಆಧಾರಸ್ತಂಭಗಳಾಗಿದ್ದ ಪನ್ನೀರ್ ಮತ್ತು ಪಳನಿಸ್ವಾಮಿ ನಡುವೆ ರಾಜಕೀಯ ಬಿರುಕು ಹೆಚ್ಚಿಸಿತು.
ಒಂದು ಹಂತದಲ್ಲಿ ಒಪಿಎಸ್ ಎನ್ಡಿಎ ಮೈತ್ರಿಕೂಟಕ್ಕೆ ಮರಳಲು ಸಜ್ಜಾಗಿದ್ದರು ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬಂದಿದ್ದವು. ಆದರೆ ಎಐಎಡಿಎಂಕೆಯ ಒಳಭಾಗದ ನಾಯಕತ್ವದ ಪ್ರಶ್ನೆ ಮತ್ತು ಮೈತ್ರಿ ರಾಜಕೀಯದ ಗೊಂದಲಗಳು ಆ ಪ್ರಯತ್ನಕ್ಕೆ ಅಡ್ಡಿಯಾದವು.
ಇದೀಗ ಡಿಎಂಕೆ ಸೇರ್ಪಡೆ ಮೂಲಕ ಒಪಿಎಸ್ ಹೊಸ ರಾಜಕೀಯ ದಿಕ್ಕನ್ನು ಆರಿಸಿಕೊಂಡಿದ್ದಾರೆ. ಡಿಎಂಕೆ ಕಚೇರಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಐದು ವರ್ಷಗಳ ಆಡಳಿತದಲ್ಲಿ ಮುಖ್ಯಮಂತ್ರಿ ಸ್ಟಾಲಿನ್ ಸಾಧನೆಗಳು ಜನಮನ ಗೆದ್ದಿವೆ ಎಂದು ಹೇಳಿದರು. ಜನರು ಮತ್ತೊಮ್ಮೆ ಡಿಎಂಕೆ ಸರ್ಕಾರ ಬಯಸುತ್ತಿದ್ದಾರೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು.
ಡಿಎಂಕೆ ನಾಯಕತ್ವದ ಪ್ರಕಾರ, ಪನ್ನೀರ್ಸೆಲ್ವಂ ಅವರ ಸೇರ್ಪಡೆ ಪಕ್ಷಕ್ಕೆ ಬಲ ತುಂಬಲಿದೆ. ಎಐಎಡಿಎಂಕೆಯಿಂದ ಹಲವು ಪ್ರಮುಖ ಕಾರ್ಯಕರ್ತರು ಹಾಗೂ ಬೆಂಬಲಿಗರು ಕೂಡ ಡಿಎಂಕೆ ಸೇರ್ಪಡೆಯಾಗಿದ್ದಾರೆ ಎನ್ನಲಾಗಿದೆ.
ತಮಿಳುನಾಡು ರಾಜಕೀಯದಲ್ಲಿ ಎಐಎಡಿಎಂಕೆ ಮತ್ತು ಡಿಎಂಕೆ ನಡುವಿನ ಪೈಪೋಟಿ ದಶಕಗಳಿಂದ ಮುಂದುವರಿದಿದೆ. ಜಯಲಲಿತಾ ಮತ್ತು ಕರೂಣಾನಿಧಿ ಕಾಲದಿಂದ ಆರಂಭವಾದ ಈ ರಾಜಕೀಯ ಪ್ರತಿಸ್ಪರ್ಧೆ ಈಗ ಹೊಸ ಹಂತ ತಲುಪಿದಂತಾಗಿದೆ.





