ತಪ್ಪು ಮಾಡೋದು ಸಹಜ ಕಣೋ.. ತಿದ್ದಿ ನಡೆಯೋದು ಮನುಜ ಕಣೋ.. ಈ ಮಾತು ಸೋನು ನಿಗಮ್ ಮಾಡಿದ ಎಡವಟ್ಗೆ ಹೇಳಿ ಮಾಡಿಸಿದಂತಿದೆ. ಈ ಹಿಂದೆ ಲೈವ್ ಕಾನ್ಸರ್ಟ್ವೊಂದರಲ್ಲಿ ಕನ್ನಡದ ಹಾಡು ಹಾಡಿ ಎಂದವ್ರ ವಿರುದ್ಧ ಗುಡುಗಿ, ಕನ್ನಡಕ್ಕೆ ಅಪಮಾನ ಮಾಡಿದ್ದ ಗಾಯಕ, ಇದೀಗ ಕರುನಾಡಿಗೆ ಕಾಲಿಟ್ಟಿದ್ದಾರೆ. ಹುಬ್ಬಳ್ಳಿಯ ಸಿದ್ದಾರೂಢ ಮಠಕ್ಕೆ ಭೇಟಿ ನೀಡಿ, ಪಾಪವನ್ನು ತೊಳೆದುಕೊಂಡಿದ್ದಾರೆ.
ವಿವಾದದ ನಂತ್ರ ಕರುನಾಡಿಗೆ.. ಸಿದ್ದಾರೂಢನಿಗೆ ಸೋನು ಕ್ಷಮೆ
ಕನ್ನಡ ಅವಮಾನಿಸಿ.. ಕೊನೆಗೆ ಕ್ಷಮೆ ಕೇಳಿದ್ದ ಸೋನು ನಿಗಮ್
ಸೋನು ನಿಗಮ್.. ಅದ್ಭುತ ಗಾಯಕ. ಅದರಲ್ಲಿ ಎರಡು ಮಾತಿಲ್ಲ. ಆದ್ರೆ ಆತನಿಗೆ ಒಳ್ಳೆಯ ಗಾಯಕ ಅನ್ನೋ ಪಟ್ಟ ಸಿಕ್ಕಿದ್ದು ಕನ್ನಡಿಗರಿಂದ. ಕನ್ನಡದ ಹಾಡುಗಳಿಂದ. ಕನ್ನಡದ ಸಂಗೀತ ಸಂಯೋಜಕರಿಂದ. ಕನ್ನಡದ ನಿರ್ಮಾಪಕರುಗಳಿಂದ ಅನ್ನೋದು ಅಷ್ಟೇ ಸತ್ಯ. 2025ರಲ್ಲಿ ಒಮ್ಮೆ ಲೈವ್ ಕಾನ್ಸರ್ಟ್ ಮಾಡೋಕೆ ಬೆಂಗಳೂರಿಗೆ ಬಂದಿದ್ದ ಸೋನು ನಿಗಮ್, ಅಲ್ಲಿ ಕನ್ನಡದ ಹಾಡುಗಳನ್ನ ಹಾಡಿ ಅಂತ ಡಿಮ್ಯಾಂಡ್ ಮಾಡಿದವರ ವಿರುದ್ಧ ದರ್ಪ ತೋರಿ, ಕನ್ನಡವನ್ನ ಅವಮಾನಿಸಿದ್ರು ಸೋನು ನಿಗಮ್.
ಈಸ್ಟ್ ಪಾಯಿಂಟ್ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯಲ್ಲಿ ನಡೆದ ಆ ವಿವಾದದ ಬಳಿಕ ಕರುನಾಡಿಗೆ ಎಂಟ್ರಿ ಇಲ್ಲ. ಕನ್ನಡ ಚಿತ್ರಗಳಲ್ಲಿ ಹಾಡಿಸುವಂತಿಲ್ಲ. ಬಾಯ್ಕಾಟ್ ಸೋನು ನಿಗಮ್. ಕನ್ನಡದ ದ್ರೋಹಿ ಅಂತೆಲ್ಲಾ ಅಭಿಯಾನ ನಡೆದಿತ್ತು. ಅದೇ ವಿಚಾರ ಎಫ್ಐಆರ್ ಕೂಡ ಆಗಿತ್ತು. ಆದ್ರೆ ಕೂಡಲೇ ಎಚ್ಚೆತ್ತುಕೊಂಡ ಸೋನು ನಿಗಮ್, ಕನ್ನಡಿಗರ ಭಾವನೆಗಳಿಗೆ ಧಕ್ಕೆ ಆಗಿದ್ರೆ ಕ್ಷಮೆ ಇರಲಿ ಅಂತ ಕ್ಷಮೆ ಕೂಡ ಕೇಳಿದ್ರು. ಅದಾದ ಬಳಿಕ ಕನ್ನಡದ ಯಾವುದೇ ನಿರ್ಮಾಪಕರು ಆತನಿಂದ ಹಾಡುಗಳನ್ನ ಹಾಡಿಸುವ ಕಾರ್ಯಕ್ಕೆ ಕೈ ಹಾಕಿರಲಿಲ್ಲ.
ವಿಶೇಷ ಪೂಜೆ.. ಗದ್ದುಗೆ ಬಳಿ 10 ನಿಮಿಷ ಧ್ಯಾನ.. ಪಾಪಪ್ರಜ್ಞೆ..!
ತಪ್ಪು ತಿದ್ದಿಕೊಂಡ ಗಾಯಕನ ಕ್ಷಮಾದಾನಕ್ಕೆ ಕನ್ನಡಿಗರು ಸಮಾಧಾನ
ಆದ್ರೀಗ ತಪ್ಪು ಅರಿತುಕೊಂಡಿರೋ ಸೋನು ನಿಗಮ್, ತಮ್ಮ ತಪ್ಪನ್ನ ತಿದ್ದಿಕೊಂಡು, ಇದೇ ಮೊದಲ ಬಾರಿಗೆ ವಿವಾದದ ಬಳಿಕ ಕರ್ನಾಟಕಕ್ಕೆ ಬಂದಿದ್ದಾರೆ. ಹುಬ್ಬಳ್ಳಿಯಲ್ಲಿರೋ ಸುಪ್ರಸಿದ್ದ ಸಿದ್ದಾರೂಢ ಮಠಕ್ಕೆ ಭೇಟಿ ನೀಡಿ, ಅಲ್ಲಿರೋ ಸ್ವಾಮಿಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಅಷ್ಟೇ ಯಾಕೆ, ಸುಮಾರು ಹತ್ತು ನಿಮಿಷಗಳ ಕಾಲ ಗದ್ದುಗೆ ಮುಂದೆ ಧ್ಯಾನ ಕೂಡ ಮಾಡಿದ್ದಾರೆ. ಸಿದ್ದಾರೂಢರ ಮೂರ್ತಿ ನೀಡಿ, ಟ್ರಸ್ಟ್ನಿಂದ ಅಭಿನಂದನೆ ಕೂಡ ಸಲ್ಲಿಸಲಾಗಿದೆ. ಒಟ್ಟಾರೆ ಸಿದ್ದಾರೂಢರ ಬಳಿ ಕ್ಷಮೆ ಕೋರುವ ಮೂಲಕ ಮಾಡಿದ ತಪ್ಪಿಗೆ ಪ್ರಾಯಶ್ಚಿತ ಮಾಡಿಕೊಂಡಿದ್ದಾರೆ ಸೋನು ನಿಗಮ್.





