ಚಿಕ್ಕಮಗಳೂರು: ಚಿಕ್ಕಮಗಳೂರಿನ ಗಾಂಧಿನಗರದಲ್ಲಿ ಭಾನುವಾರ ತಡರಾತ್ರಿ ಒಂದು ಆಘಾತಕಾರಿ ಘಟನೆ ಸಂಭವಿಸಿದೆ. ಒಂಟಿ ವಿವಾಹಿತ ಹಿಂದೂ ಮಹಿಳೆಯ ಮನೆಯಲ್ಲಿ ಯುವ ಕಾಂಗ್ರೆಸ್ ಮುಖಂಡ ಕಾಣಿಸಿಕೊಂಡಿದ್ದು, ಆತನಿಗೆ ಸ್ಥಳೀಯ ಯುವಕರ ಗುಂಪೊಂದು ಮನೆಗೆ ನುಗ್ಗಿ ಆತನ ಮೇಲೆ ಹಲ್ಲೆ ನಡೆಸಿದ್ದಾರೆ.
ಹಲ್ಲೆಗೊಳಗಾದ ವ್ಯಕ್ತಿಯನ್ನು ಯೂತ್ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ರಾಹಿಲ್ ಶರೀಫ್ ಎಂದು ಗುರುತಿಸಲಾಗಿದೆ. ರಾತ್ರಿ ವೇಳೆ ಮಹಿಳೆಯ ಮನೆಗೆ ರಾಹಿಲ್ ಶರೀಫ್ ಬಂದಿದ್ದು, ಬಹಳ ಸಮಯ ಕಳೆದರೂ ಮನೆಯಿಂದ ಹೊರ ಹೋಗದಿರುವುದನ್ನು ಗಮನಿಸಿದ ನೆರೆಯ ಮನೆಯ ಕೆಲ ಯುವಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಬಳಿಕ ಅವರು ಗುಂಪಾಗಿ ಮಹಿಳೆಯ ಮನೆಗೆ ತೆರಳಿ ಪ್ರಶ್ನಿಸಿದರು. ಈ ವೇಳೆ ಮಾತಿನ ಚಕಮಕಿ ನಡೆದಿದೆ ಎಂದು ಹೇಳಲಾಗಿದೆ.
ಮಾತಿನ ಚಕಮಕಿ ತೀವ್ರಗೊಂಡು ಯುವಕರ ಗುಂಪು ರಾಹಿಲ್ ಶರೀಫ್ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಘಟನೆಯಲ್ಲಿ ರಾಹಿಲ್ ಶರೀಫ್ಗೆ ಗಂಭೀರ ಗಾಯಗಳಾಗಿವೆ ಎನ್ನಲಾಗಿದ್ದು, ಕೆಲವರು ಮಾರಕಾಸ್ತ್ರಗಳನ್ನು ಹಿಡಿದು ಬೆದರಿಕೆ ಹಾಕಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಈ ಸಂಪೂರ್ಣ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕಾಂಗ್ರೆಸ್ ಮುಖಂಡ ಮಹಿಳೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ, ಮದುವೆ ಹಾಗೂ ಮಕ್ಕಳ ಬಗ್ಗೆ ತಪ್ಪು ಭರವಸೆ ನೀಡಿದ್ದಾರೆ ಎಂಬ ಗಂಭೀರ ಆರೋಪಗಳೂ ಕೇಳಿಬಂದಿವೆ. ಈ ಸಂಬಂಧ ಮಹಿಳೆಯೊಂದಿಗೆ ಮಾತುಕತೆ ನಡೆಸಿದ ಆಡಿಯೋ ಲಭ್ಯವಾಗಿದೆ.
ಈ ಘಟನೆ ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಹಲ್ಲೆಯಲ್ಲಿ ಭಾಗವಹಿಸಿದ್ದ ಯುವಕರ ಗುರುತು ಪತ್ತೆ ಹಚ್ಚುವ ಕಾರ್ಯವು ನಡೆಯುತ್ತಿದೆ. ಘಟನೆಗೆ ಕಾರಣವಾದ ಹಿನ್ನೆಲೆ ಬಗ್ಗೆಯೂ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಇದು ವೈಯಕ್ತಿಕ ವಿಚಾರದಿಂದ ಆರಂಭವಾದ ಗಲಾಟೆಯೋ ಅಥವಾ ಸಂಘಟಿತ ಹಲ್ಲೆಯೋ ಎಂಬುದನ್ನು ತನಿಖೆಯಿಂದ ತಿಳಿಯಬೇಕಿದೆ. ಮಹಿಳೆಯ ಹೇಳಿಕೆ, ಹಲ್ಲೆಗೊಳಗಾದ ವ್ಯಕ್ತಿಯ ಹೇಳಿಕೆ ಹಾಗೂ ವೈರಲ್ ಆಗಿರುವ ವಿಡಿಯೋ ಮತ್ತು ಆಡಿಯೋಗಳ ತಾಂತ್ರಿಕ ಪರಿಶೀಲನೆ ನಡೆಯುತ್ತಿದೆ.





