ಬೆಂಗಳೂರು: ಲಾಭಕ್ಕಾಗಿ ಆಹಾರದ ಗುಣಮಟ್ಟವನ್ನು ತೊರೆದು ಕಲಬೆರಕೆ ಮಾಡುವವರ ವಿರುದ್ಧ ಸರ್ಕಾರ ತೀವ್ರ ಕ್ರಮ ಕೈಗೊಳ್ಳಲು ಸಜ್ಜಾಗಿದೆ. ಗೋಬಿ, ಪಾನಿಪುರಿ, ಕಬಾಬ್, ಕಾಟನ್ ಕ್ಯಾಂಡಿ, ಕರಿದ ಬಟಾಣಿ ಬಳಿಕ ಈಗ ಪನ್ನೀರ್ ಮತ್ತು ಸಿಹಿ ತಿಂಡಿಗಳ ಮೇಲೆ ಆಹಾರ ಸುರಕ್ಷತೆ ಇಲಾಖೆಯ ನಿಗಾ ವಹಿಸುತ್ತಿದೆ.
ಹೋಳಿ ಹಬ್ಬದ ಪ್ರಯುಕ್ತ ರಾಜ್ಯಾದ್ಯಂತ ಬೃಹತ್ ಕಾರ್ಯಾಚರಣೆ ನಡೆಸಿರುವ ಇಲಾಖೆ, ಪನ್ನೀರ್, ಹಾಲಿನ ಉತ್ಪನ್ನಗಳು, ಸಿಹಿತಿಂಡಿಗಳು, ಖಾರದ ತಿಂಡಿಗಳ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯ ಪರೀಕ್ಷೆಗೆ ಕಳಿಸಿದೆ. ಮಾರ್ಚ್ 15 ನಂತರ ಈ ಪರೀಕ್ಷೆಯ ವರದಿ ಲಭ್ಯವಾಗಲಿದ್ದು, ಕಲಬೆರಕೆ ಪತ್ತೆಯಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು.
ಕರಿದ ಬಟಾಣಿಯಲ್ಲಿ ಕ್ಯಾನ್ಸರ್ ಕಾರಕ ಅಂಶ!
ರಾಜ್ಯಾದ್ಯಂತ 30 ಜಿಲ್ಲೆಗಳಲ್ಲಿ ಕರಿದ ಬಟಾಣಿಯ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದ್ದು, 26 ಜಿಲ್ಲೆಗಳ ಮಾದರಿಗಳು ಅಸುರಕ್ಷಿತವೆಂದು ವರದಿ ತಿಳಿಸಿದೆ. ಬಟಾಣಿಯಲ್ಲಿ ಕ್ಯಾನ್ಸರ್ ಕಾರಕ ಟೆಟಾರ್ಜಿನ್ ಅಂಶ ಪತ್ತೆಯಾಗಿದ್ದು, ಇದನ್ನು ನಿಷೇಧಿಸಲು ಸರ್ಕಾರ ಚಿಂತನೆ ನಡೆಸಿದೆ.
ಸುರಕ್ಷಿತ ಆಹಾರದತ್ತ ಬದಲಾವಣೆ ಅಗತ್ಯ!
ಜನರ ಆರೋಗ್ಯ ಕಾಪಾಡಲು ಆಹಾರದ ಗುಣಮಟ್ಟವನ್ನು ಕಟ್ಟುನಿಟ್ಟಾಗಿ ತಪಾಸಣೆ ಮಾಡಬೇಕು. ಸಾವಯವ ಕೃಷಿ ಹಾಗೂ ನೈಸರ್ಗಿಕ ಆಹಾರದತ್ತ ಜನರು ಗಮನಹರಿಸುವುದು ಅವಶ್ಯಕ. ಆಹಾರ ಸುರಕ್ಷತೆ ಇಲಾಖೆಯ ಈ ಹೊಸ ಕ್ರಮವು ಕಲಬೆರಕೆ ಮಾಡಿದವರ ಮೇಲೆ ಗಂಭೀರ ಪರಿಣಾಮ ಬೀರಲಿದೆ.