ಕೊಪ್ಪಳ ಜಿಲ್ಲೆಯಲ್ಲಿ ಹುಟ್ಟಿದ ನವಜಾತ ಶಿಶುವಿನ ಜೀವ ಉಳಿಸಲು ಅದ್ಭುತ ಕಾರ್ಯಾಚರಣೆ ನಡೆದಿದೆ. ಹೆರಿಗೆ ಸಮಯದಲ್ಲಿ ಮಗುವಿನ ಹೊಟ್ಟೆಯ ಚರ್ಮ ಸರಿಯಾಗಿ ಬೆಳವಣಿಗೆಯಾಗದೇ ಕರುಳು ಮತ್ತು ಕಿಡ್ನಿ ಹೊರಗೆ ಬಂದಿದ್ದ ಹಿನ್ನೆಲೆಯಲ್ಲಿ ತಕ್ಷಣ ಹೆಚ್ಚಿನ ಚಿಕಿತ್ಸೆ ಅಗತ್ಯವಾಗಿತ್ತು. ಈ ನಾಜೂಕ ಸ್ಥಿತಿಯಲ್ಲಿ ಕೊಪ್ಪಳದಿಂದ ಹುಬ್ಬಳ್ಳಿಯ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಕಿಮ್ಸ್) ಆಸ್ಪತ್ರೆಗೆ ಸುಮಾರು 120 ಕಿ.ಮೀ ದೂರವನ್ನು ಕೇವಲ 1 ಗಂಟೆಯಲ್ಲಿ ಪೂರೈಸಿ ಶಿಶುವನ್ನು ಸುರಕ್ಷಿತವಾಗಿ ತಲುಪಿಸಲಾಗಿದೆ.
ಕೊಪ್ಪಳ ಜಿಲ್ಲೆಯ ಕುಕನೂರ ತಾಲ್ಲೂಕಿನ ಬೂದಗುಂಪ ಗ್ರಾಮದ ನಿವಾಸಿ ವಿಜಯಲಕ್ಷ್ಮಿ ಅವರು ಡಿಸೆಂಬರ್ 27ರಂದು ಬೆಳಗ್ಗೆ 11:30ಕ್ಕೆ ಕುಕನೂರ ತಾಲೂಕು ಆಸ್ಪತ್ರೆಗೆ ದಾಖಲಾಗಿ ಹೆರಿಗೆ ಮಾಡಿದ್ದರು. ಹುಟ್ಟಿದ ಮಗುವಿನ ಹೊಟ್ಟೆಯ ಚರ್ಮ ಬೆಳವಣಿಗೆಯಾಗದೇ ಕರುಳು ಮತ್ತು ಕಿಡ್ನಿ ಹೊರಗೆ ಬಂದಿದ್ದವು. ತಕ್ಷಣ ಮಗುವನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ಬೆಳಗ್ಗೆ 6 ಗಂಟೆಯವರೆಗೆ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲು ನಿರ್ಧರಿಸಲಾಯಿತು.
ಬೆಳಗ್ಗೆ 10 ಗಂಟೆಗೆ ಕೊಪ್ಪಳದಿಂದ ಹೊರಟಿದ್ದ ಆಂಬುಲೆನ್ಸ್ ಸಾಮಾನ್ಯವಾಗಿ 2.5 ಗಂಟೆಗಳು ತೆಗೆದುಕೊಳ್ಳುವ ಪ್ರಯಾಣವನ್ನು ಕೇವಲ 1 ಗಂಟೆಯಲ್ಲಿ ಪೂರ್ಣಗೊಳಿಸಿತು. ಇದಕ್ಕೆ ಅಖಿಲ ಕರ್ನಾಟಕ ಆಂಬುಲೆನ್ಸ್ ರೋಡ್ ಸೇಫ್ಟಿ ಸಂಘಟನೆಯ ಸಹಕಾರವೇ ಮುಖ್ಯ ಕಾರಣ. ಸಂಘಟನೆಯು ಒಟ್ಟು 30 ಆಂಬುಲೆನ್ಸ್ಗಳನ್ನು ದಾರಿಯುದ್ದಕ್ಕೂ ನಿಯೋಜಿಸಿ, ರಿಲೇ ಶೈಲಿಯಲ್ಲಿ ಶಿಶುವನ್ನು ರವಾನಿಸಿತು. ಹುಬ್ಬಳ್ಳಿ ಮತ್ತು ದಾರಿಯುದ್ದಕ್ಕೂ ಟ್ರಾಫಿಕ್ ಪೊಲೀಸರು ಜೀರೋ ಟ್ರಾಫಿಕ್ ಒದಗಿಸಿ ಸಹಕರಿಸಿದ್ದಾರೆ.
ಪ್ರಸ್ತುತ ಶಿಶುವನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತಜ್ಞ ವೈದ್ಯರು ಚಿಕಿತ್ಸೆ ಆರಂಭಿಸಿದ್ದಾರೆ. ಶಿಶುವಿನ ಆರೋಗ್ಯ ಸ್ಥಿರವಾಗಿದ್ದು, ಹೆಚ್ಚಿನ ಚಿಕಿತ್ಸೆಯಿಂದ ಚೇತರಿಕೆಯ ನಿರೀಕ್ಷೆಯಿದೆ.
ಈ ಮಾನವೀಯ ಕಾರ್ಯಕ್ಕೆ ಆಂಬುಲೆನ್ಸ್ ಚಾಲಕರು, ಸಂಘಟನೆಯ ಸಿಬ್ಬಂದಿ ಮತ್ತು ಟ್ರಾಫಿಕ್ ಪೊಲೀಸರ ಕೊಡುಗೆಯನ್ನು ಸಾರ್ವಜನಿಕರು ಮೆಚ್ಚಿಕೊಳ್ಳುತ್ತಿದ್ದಾರೆ. ನವಜಾತ ಶಿಶುವಿನ ಜೀವ ಉಳಿದಿದ್ದಕ್ಕೆ ಕುಟುಂಬ ಸದಸ್ಯರು ಸಂತೋಷ ವ್ಯಕ್ತಪಡಿಸಿದ್ದಾರೆ.





