ಬಾಂಗ್ಲಾದೇಶ ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ (ಬಿಎನ್ಪಿ) ಹಂಗಾಮಿ ಅಧ್ಯಕ್ಷ ತಾರಿಕ್ ರೆಹಮಾನ್ 17 ವರ್ಷಗಳಿಗೂ ಹೆಚ್ಚು ಕಾಲದ ಸ್ವಯಂ ಗಡಿಪಾರು ಜೀವನಕ್ಕೆ ತೆರೆ ಎಳೆದು ಇಂದು ತಾಯ್ನಾಡಿಗೆ ಮರಳಿದ್ದಾರೆ. ಈ ಐತಿಹಾಸಿಕ ವಾಪಸಾತಿ ಬಾಂಗ್ಲಾದೇಶದ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ರಾಜಧಾನಿ ಢಾಕಾದಲ್ಲಿ ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರು ಸ್ವಾಗತ ನೀಡಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿರುವ ಮಾಜಿ ಪ್ರಧಾನಿ ಖಾಲೇದಾ ಜಿಯಾ ಅವರ ಪುತ್ರನಾಗಿರುವ ತಾರಿಕ್ ರೆಹಮಾನ್, ಯುನೈಟೆಡ್ ಕಿಂಗ್ಡಮ್ನಿಂದ ಪತ್ನಿ ಜುಬೈದಾ ರೆಹಮಾನ್ ಹಾಗೂ ಮಗಳು ಜೈಮಾ ರೆಹಮಾನ್ ಅವರೊಂದಿಗೆ ಬಾಂಗ್ಲಾದೇಶಕ್ಕೆ ಆಗಮಿಸಿದರು. ಅವರನ್ನು ಸ್ವಾಗತಿಸಲು ಬಿಎನ್ಪಿ ಮುಖಂಡರು ಮತ್ತು ಸಾವಿರಾರು ಕಾರ್ಯಕರ್ತರು ಬನಾನಿ ವಿಮಾನ ನಿಲ್ದಾಣ ರಸ್ತೆಯಿಂದ ಢಾಕಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಕಾಲ್ನಡಿಗೆಯಲ್ಲಿ ತೆರಳಿದರು
ವಿಮಾನ ನಿಲ್ದಾಣದ ರಸ್ತೆ ಎರಡೂ ಬದಿಗಳಲ್ಲಿ ಜನರು ಸಾಲುಗಟ್ಟಿ ನಿಂತು, ಘೋಷಣೆಗಳನ್ನು ಕೂಗಿ ತಮ್ಮ ನಾಯಕನಿಗೆ ಬೆಂಬಲ ವ್ಯಕ್ತಪಡಿಸಿದರು. ಹಲವು ವರ್ಷಗಳ ಬಳಿಕ ನಾಯಕನನ್ನು ಕಣ್ಣಾರೆ ನೋಡಿದ ಸಂತಸ ಜನರ ಮುಖದಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು.
ಸ್ವಾಗತ ಸಮಾರಂಭದಲ್ಲಿ ಮಾತನಾಡಿದ ತಾರಿಕ್ ರೆಹಮಾನ್, ದೇಶ ನಿರ್ಮಾಣದಲ್ಲಿ ಯುವಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು. “ನವ ಬಾಂಗ್ಲಾದೇಶ ನಿರ್ಮಾಣದಲ್ಲಿ ಯುವ ಪೀಳಿಗೆ ಮುಂಚೂಣಿಯಲ್ಲಿ ನಿಲ್ಲಬೇಕು. ದೇಶದ ಭವಿಷ್ಯ ನಿಮ್ಮ ಕೈಯಲ್ಲಿದೆ” ಎಂದು ಯುವಕರಿಗೆ ಪ್ರೇರಣೆಯ ಸಂದೇಶ ನೀಡಿದರು. ಮುಂದಿನ ದಿನಗಳಲ್ಲಿ ಯುವ ಶಕ್ತಿಯನ್ನು ರಾಜಕೀಯ ಮತ್ತು ಆಡಳಿತದಲ್ಲಿ ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳುವ ಭರವಸೆ ನೀಡಿದರು.
ಇತ್ತೀಚೆಗೆ ದೇಶದಲ್ಲಿ ನಡೆಯುತ್ತಿರುವ ದೌರ್ಜನ್ಯ ಹಾಗೂ ಅಶಾಂತಿ ಘಟನೆಗಳ ಕುರಿತು ಮಾತನಾಡಿದ ಅವರು, ಎಲ್ಲರನ್ನೂ ಒಳಗೊಂಡ, ಸಹಿಷ್ಣು ಮತ್ತು ಶಾಂತಿಪೂರ್ಣ ಬಾಂಗ್ಲಾದೇಶ ನಿರ್ಮಾಣವೇ ತಮ್ಮ ಗುರಿ ಎಂದು ಸ್ಪಷ್ಟಪಡಿಸಿದರು. ಮುಸ್ಲಿಮರು, ಬೌದ್ಧರು, ಕ್ರಿಶ್ಚಿಯನ್ನರು ಮತ್ತು ಹಿಂದೂಗಳು ಸಹಬಾಳ್ವೆಯಿಂದ ಬದುಕುವ ಬಾಂಗ್ಲಾದೇಶವನ್ನು ಕಟ್ಟಬೇಕಿದೆ ಎಂದು ಅವರು ಹೇಳಿದರು.
ತಮ್ಮ ಭಾಷಣದಲ್ಲಿ, ಇತ್ತೀಚೆಗೆ ಹತ್ಯೆಗೀಡಾದ ನಾಯಕ ಉಸ್ಮಾನ್ ಹಾದಿಯನ್ನು ಸ್ಮರಿಸಿ, ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. “ಹಾದಿಗೆ ಪ್ರಜಾಪ್ರಭುತ್ವ ಬಾಂಗ್ಲಾದೇಶದ ಕನಸು ಇತ್ತು. ಆ ಕನಸನ್ನು ನನಸಾಗಿಸಲು ಬಿಎನ್ಪಿ ಶ್ರಮಿಸಲಿದೆ” ಎಂದು ಭರವಸೆ ನೀಡಿದರು.
1971ರ ವಿಮೋಚನಾ ಚಳವಳಿಗೆ ಗೌರವ ಸಲ್ಲಿಸಿದ ತಾರಿಕ್ ರೆಹಮಾನ್, ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ನೆನಪಿಸಿಕೊಂಡರು. ಜೊತೆಗೆ, ಜುಲೈ 2024ರಲ್ಲಿ ನಡೆದ ಜನಾಂದೋಲನಕ್ಕೆ ಕೃತಜ್ಞತೆ ವ್ಯಕ್ತಪಡಿಸಿ, ಜನಶಕ್ತಿಯೇ ದೇಶದ ನಿಜವಾದ ಶಕ್ತಿ ಎಂದು ಹೇಳಿದರು.





