ಧ್ರುವ ಸರ್ಜಾ ಬರೀ ಸಿನಿಮಾ ಸ್ಟಾರ್ ಅಷ್ಟೇ ಅಲ್ಲ, ಒಳ್ಳೆಯ ಮನಸ್ಸಿರೋ ಮನುಷ್ಯ ಕೂಡ ಹೌದು. ಸದಾ ತಾನಾಯ್ತು, ತನ್ನ ಕುಟುಂಬವಾಯ್ತು ಅಂತ ಯೋಚಿಸೋ ಜನರ ಮಧ್ಯೆ, ತಾನು ದುಡಿದ ಹಣದಲ್ಲಿ ಒಂದಷ್ಟು ಸಾಮಾಜಿಕ ಕಾರ್ಯಗಳನ್ನ ಕೂಡ ಮಾಡೋಣ ಅಂತ ಮುಂದಾಗಿರೋ ಇವ್ರ ನಡೆಗೆ ಭೇಷ್ ಅನ್ನಲೇಬೇಕು. ಇತ್ತೀಚೆಗೆ ಧ್ರುವ ಸಹಾಯಹಸ್ತ ಫೌಂಡೇಷನ್ ಆರಂಭಿಸಿರೋ ಆ್ಯಕ್ಷನ್ ಪ್ರಿನ್ಸ್, ಲಕ್ಷಾಂತರ ಖರ್ಚು ಮಾಡಿ, ರಂಗನತಿಟ್ಟು ಸಿಬ್ಬಂದಿಗೆ ಅಭಯ ಹಸ್ತ ನೀಡಿದ್ದಾರೆ.
ರಂಗನತಿಟ್ಟು ಪಕ್ಷಿಧಾಮ.. ಕರ್ನಾಟಕದ ಪಕ್ಷಿಕಾಶಿ ಅಂತಲೇ ಕರೆಯಲ್ಪಡುವ ಮಂಡ್ಯ ಜಿಲ್ಲೆಯ ಕಾವೇರಿ ನದಿ ತಟದಲ್ಲಿರೋ ಈ ಧಾಮ ಸುಮಾರು 40 ಕಿಲೋ ಮೀಟರ್ ವಿಸ್ತೀರ್ಣ ಹೊಂದಿದೆ. ಆರು ಚಿಕ್ಕ ದ್ವೀಪ ಸಮೂಹಗಳನ್ನೊಳಗೊಂಡ ರಂಗನತಿಟ್ಟುನಲ್ಲಿ ಸಸ್ಯ ಸಂಪತ್ತು ಜೊತೆ ಮೊಸಳೆಗಳು, ನೀರು ನಾಯಿಗಳು ಹಾಗೂ ಬಾವಲಿಗಳಿವೆ. ಅಷ್ಟೇ ಅಲ್ಲ, ದೇಶ ವಿದೇಶಗಳಿಂದ ವಲಸೆ ಬರುವ ಸಾವಿರಾರು ಪಕ್ಷಿಗಳಿಗೆ ಆಶ್ರಯತಾಣವಾಗಿದೆ.

ರಂಗನತಿಟ್ಟು ಸಿಬ್ಬಂದಿಗೆ ಆ್ಯಕ್ಷನ್ ಪ್ರಿನ್ಸ್ ಅಭಯ.. ಭಲೇ ಧ್ರುವ
78 ಸಿಬ್ಬಂದಿಗೆ ಬ್ಯಾಗ್, ಜರ್ಕಿನ್, ಶೂ & ವಾಟರ್ ಬಾಟಲ್ಸ್
ಮೈಸೂರಿಗೆ ಪ್ರವಾಸಕ್ಕೆ ಅಂತ ಹೋಗುವವರು ಈ ರಂಗನತಿಟ್ಟುಗೆ ವಿಸಿಟ್ ಹಾಕದೆ ಬರೋ ಪ್ರಮೇಯವೇ ಇಲ್ಲ. ಮಕ್ಕಳಿಂದ ಮುದುಕರವರೆಗೆ ಮುದ ನೀಡುವ ಕಲರ್ಫುಲ್ ಪಕ್ಷಿಗಳಿರೋ ಪಕ್ಷಿಧಾಮವಿದು. ಇಲ್ಲಿದೆ ಕಳೆದ ವರ್ಷ ನಟ ಧ್ರುವ ಸರ್ಜಾ ಪತ್ನಿ ಪ್ರೇರಣಾ ಹಾಗೂ ಮಕ್ಕಳ ಸಮೇತ ಭೇಟಿ ನೀಡಿದ್ರು. ಇಲ್ಲಿ ಸುಮಾರು 78 ಮಂದಿ ಸಿಬ್ಬಂದಿ ಕೆಲಸ ಮಾಡ್ತಿದ್ದು, ಚಳಿಗಾಲ ಆದ್ದರಿಂದ ಹುಳ, ಉಪ್ಪಟೆಗಳ ಕಾಟ ಕೊಂಚ ಜಾಸ್ತಿ ಇರಲಿದೆ. ಹಾವುಗಳು ಕೂಡ ಸಿಕ್ಕಾಪಟ್ಟೆ ಇವೆ.

ಕಳೆದ ತಿಂಗಳು ಪತ್ನಿ, ಮಕ್ಕಳ ಸಮೇತ ರಂಗನತಿಟ್ಟುಗೆ ವಿಸಿಟ್
ಸಿಬ್ಬಂದಿ ಪರದಾಟ ನೋಡಿ ಧ್ರುವ ಫೌಂಡೇಷನ್ ಸಹಾಯ..!
ಅಲ್ಲಿ ಕೆಲಸ ಮಾಡುವ ಅದೆಷ್ಟೋ ಮಂದಿ ಸಿಬ್ಬಂದಿಗೆ ಸೇಫ್ಟಿಗೆ ಅಂತ ಒಳ್ಳೆಯ ಶೂ, ಜಾಕೆಟ್ಗಳಿಲ್ಲ. ಹಾಗಾಗಿ ಸ್ವತಃ ಧ್ರುವ ಸರ್ಜಾ ಅವರು ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿ, ಅಷ್ಟೂ ಮಂದಿ ಸಿಬ್ಬಂದಿಗೆ ಬ್ಯಾಗ್, ಜರ್ಕಿನ್, ಶೂ ಹಾಗೂ ವಾಟರ್ ಬಾಟಲ್ಸ್ ನೀಡಿ ಸಹಾಯಹಸ್ತ ಚಾಚಿದ್ದಾರೆ. ಇದು ನಿಜಕ್ಕೂ ಅಲ್ಲಿರೋ ಸಿಬ್ಬಂದಿಗೆ ಎಲ್ಲಿಲ್ಲದ ಖುಷಿ ಕೊಟ್ಟಿದೆ. ಅದನ್ನ ಅವರು ಮುಕ್ತ ಮನಸ್ಸಿನಿಂದ ಹಾಡಿ, ಹೊಗಳಿದ್ದಾರೆ.

ಹನುಮ ಭಕ್ತರಿಗೆಲ್ಲಾ ಶುಭವಾಗಲಿ ಎಂದ ಆ ಕಷ್ಟ ಜೀವಿಗಳು..!
14 ದಿನದ ಹಿಂದೆ ಧ್ರುವ ಫೌಂಡೇಷನ್ ಶುರು.. 35 ಲಕ್ಷ ನೆರವು
ಆಂಜನೇಯಸ್ವಾಮಿ ಭಕ್ತರು ನಮಗೆಲ್ಲಾ ಸಹಾಯ ಮಾಡಿದ್ದಾರೆ. ಅವರಿಗೆ ಇದೇ ರೀತಿ ಸಹಾಯ ಮಾಡುವ ಶಕ್ತಿ ದೇವರು ಕರುಣಿಸಲಿ ಅಂತೆಲ್ಲಾ ತುಂಬು ಹೃದಯದಿಂದ ಕೇಳಿಕೊಂಡಿದ್ದಾರೆ ಸಿಬ್ಬಂದಿ ವರ್ಗ. ಅಂದಹಾಗೆ ಧ್ರುವ ಸಹಾಯ ಹಸ್ತ ಅನ್ನೋ ಫೌಂಡೇಷನ್ ಕೇವಲ 14 ದಿನಗಳ ಹಿಂದೆಯಷ್ಟೇ ಶುರುವಾದ ಸಂಸ್ಥೆಯಾಗಿದೆ. ಆಗಲೇ ಬರೋಬ್ಬರಿ 35 ಲಕ್ಷ ರೂಪಾಯಿಗಳಷ್ಟು ಖರ್ಚು ಮಾಡಿ, ಅಸಹಾಯಕರಿಗೆ, ಬಡವರಿಗೆ ನೆರವಾಗಿದ್ದಾರೆ ಅನ್ನೋದು ನಿಜಕ್ಕೂ ಗ್ರೇಟ್.

ಅಂದಹಾಗೆ ಇತ್ತೀಚೆಗೆ ಸಕ್ರೆಬೈಲು ಆನೆ ಕ್ಯಾಂಪ್ಗೆ ತೆರಳಿದ್ದ ಧ್ರುವ ಸರ್ಜಾ ಅವರು, ಮಾವುತರ ಕುಟುಂಬಗಳಿಗೆ ರೇಷನ್ ಕಿಟ್, ಮಕ್ಕಳಿಗೆ ಪೆನ್ನು-ಪುಸ್ತಕ, ಮಕ್ಕಳಿಗೆ ಆಟದ ಸಾಮಗ್ರಿಗಳನ್ನು ನೀಡಿ ಗಮನ ಸೆಳೆದಿದ್ದರು.
ಕೇವಲ ಐದಾರು ಸಿನಿಮಾಗಳನ್ನು ಮಾಡಿರೋ ಧ್ರುವ ಸರ್ಜಾ ಅವರೇ ಇಷ್ಟು ಮಾಡ್ತಿದ್ದಾರೆ ಅಂದಾಗ, ಇದೇ ರೀತಿ ಇತರೇ ಸ್ಟಾರ್ಗಳು ಕೂಡ ಮಾಡೋಕೆ ಮುಂದಾದ್ರೆ ಎಷ್ಟು ಮಂದಿ ಅಸಹಾಯಕರ ಬಾಳಿಗೆ ಬೆಳಕಾದಂತೆ ಆಗುತ್ತೆ ಅಲ್ವಾ..? ಬಹುಶಃ ಧ್ರುವ ಅವರ ಈ ನಡೆ, ಉಳಿದವರಿಗೂ ಸ್ಫೂರ್ತಿ ಆಗಲಿದೆ. ಕೊಡುಗೈ ದಾನಿಗಳು ಹೆಚ್ಚಾಗಲಿ, ಪಡೆವ ಮನಸುಗಳು ಧನ್ಯತಾ ಭಾವ ಅರ್ಪಿಸಲಿ ಅನ್ನೋದೇ ನಮ್ಮ ಆಶಯ.





