ನವದೆಹಲಿ: ಮುಖ್ಯ ಮಾಹಿತಿ ಆಯುಕ್ತರ ನೇಮಕಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬುಧವಾರ ಸಭೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಚಳಿಗಾಲದ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ನಡೆದ ಈ ಸಭೆಯು ಮೊದಲಿನಿಂದಲೇ ಮುಖ್ಯ ಮಾಹಿತಿ ಆಯುಕ್ತರ ನೇಮಕಾತಿ ವಿಚಾರಕ್ಕೆ ಸಂಬಂಧಿಸಿದೆ ಎಂದು ತಿಳಿದುಬಂದಿದೆ. ಈ ಚರ್ಚೆ ನಿರೀಕ್ಷೆಗೂ ಮೀರಿ ಸಮಯ ತೆಗೆದುಕೊಂಡ ಕಾರಣ ರಾಜಕೀಯ ವಲಯದಲ್ಲಿ ವಿವಿಧ ಊಹಾಪೋಹಗಳು ಹರಿದಾಡುತ್ತಿವೆ.
ಮೂಲಗಳ ಪ್ರಕಾರ, ಈ ಸಭೆಯ ಮುಖ್ಯ ಉದ್ದೇಶ ಮುಖ್ಯ ಮಾಹಿತಿ ಆಯುಕ್ತ (CIC) ಹಾಗೂ ಎಂಟು ಮಾಹಿತಿ ಆಯುಕ್ತರ ನೇಮಕಾತಿ ಕುರಿತ ಚರ್ಚೆಯಾಗಿತ್ತು. ಜೊತೆಗೆ ಕೇಂದ್ರ ವಿಜಿಲೆನ್ಸ್ ಆಯುಕ್ತರ ನೇಮಕಾತಿಯ ಮೇಲೂ ಚರ್ಚೆ ನಡೆಸಿದೆ. ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 12(3) ಪ್ರಕಾರ, ಮಾಹಿತಿ ಆಯುಕ್ತರ ನೇಮಕಾತಿಗೆ ಪ್ರಧಾನ ಮಂತ್ರಿಗಳು ಅಧ್ಯಕ್ಷತೆ ವಹಿಸುವ ಆಯ್ಕೆ ಸಮಿತಿಯಲ್ಲಿ ವಿರೋಧ ಪಕ್ಷದ ನಾಯಕ ಮತ್ತು ಪ್ರಧಾನಿ ನಾಮನಿರ್ದೇಶನ ಮಾಡಿದ ಒಬ್ಬ ಕೇಂದ್ರ ಸಚಿವರು ಸೇರಿರಬೇಕು. ಈ ಬಾರಿ ಸಚಿವ ಅಮಿತ್ ಶಾ ಸಮಿತಿಯಲ್ಲಿ ಭಾಗವಹಿಸಿದ್ದರು.
ರಾಹುಲ್ ಗಾಂಧಿ ಮಧ್ಯಾಹ್ನ 1 ಗಂಟೆಗೆ ಪ್ರಧಾನ ಮಂತ್ರಿ ಕಚೇರಿಗೆ ಆಗಮಿಸಿದ್ದು, ಸಭೆ 1.07ಕ್ಕೆ ಪ್ರಾರಂಭವಾಯಿತು. ಆದರೆ ಸಭೆಯು ನಿರೀಕ್ಷೆಗಿಂತ ಹೆಚ್ಚು ಕಾಲ ಮುಂದುವರೆದಿದ್ದು, ಸಂಸದರಲ್ಲಿ ಕುತೂಹಲ ಹೆಚ್ಚಿಸಿತ್ತು.
88 ನಿಮಿಷಗಳ ನಂತರ ರಾಹುಲ್ ಗಾಂಧಿ ಸಭೆಯಿಂದ ಹೊರಬಂದಾಗ, ಅವರು ಎಲ್ಲಾ ನೇಮಕಾತಿ ಪ್ರಕ್ರಿಯೆಗಳ ಕುರಿತು ತಮ್ಮ ಆಕ್ಷೇಪಣೆಗಳನ್ನು ಲಿಖಿತವಾಗಿ ಸಲ್ಲಿಸಿದ್ದರೆಂದು ತಿಳಿದುಬಂತು. ಹಿಂದೆಯೂ ವಿರೋಧ ಪಕ್ಷದ ಪ್ರತಿನಿಧಿಗಳಾಗಿ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಹಲವು ಸಂದರ್ಭಗಳಲ್ಲಿ ನೇಮಕಾತಿ ಶಿಫಾರಸುಗಳ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಸದ್ಯ ಕೇಂದ್ರ ಮಾಹಿತಿ ಆಯೋಗದಲ್ಲಿ ಒಟ್ಟು 8 ಹುದ್ದೆಗಳು ಖಾಲಿಯಾಗಿದ್ದು, ಕೇವಲ ಇಬ್ಬರು ಮಾಹಿತಿ ಆಯುಕ್ತರು ಆನಂದಿ ರಾಮಲಿಂಗಂ ಮತ್ತು ವಿನೋದ್ ಕುಮಾರ್ ತಿವಾರಿಕಾರ್ಯನಿರ್ವಹಿಸುತ್ತಿದ್ದಾರೆ. ಸೆಪ್ಟೆಂಬರ್ 13 ರಂದು ಹಿರಾಲಾಲ್ ಸಮಾರಿಯಾ ಅವರು ನಿವೃತ್ತಿಯಾದ ನಂತರ ಮುಖ್ಯ ಮಾಹಿತಿ ಆಯುಕ್ತರ ಹುದ್ದೆಯೂ ಖಾಲಿಯಾಗಿದೆ. ಸಿಐಸಿಯ ವೆಬ್ಸೈಟ್ ಪ್ರಕಾರ, 30,838 ಪ್ರಕರಣಗಳು ಬಾಕಿ ಉಳಿದಿವೆ.
ಮಾಹಿತಿ ಆಯುಕ್ತರ ನೇಮಕಾತಿಯ ಪ್ರಕ್ರಿಯೆ ಮೂರು ಹಂತಗಳನ್ನು ಒಳಗೊಂಡಿದೆ.
-
ಜಾಹೀರಾತು ಪ್ರಕಟಣೆ: ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲು ಇಲಾಖೆ ಜಾಹೀರಾತು ನೀಡುತ್ತದೆ.
-
ಶೋಧ ಸಮಿತಿ ಪರಿಶೀಲನೆ: ಕ್ಯಾಬಿನೆಟ್ ಕಾರ್ಯದರ್ಶಿಯವರ ನೇತೃತ್ವದ ಸಮಿತಿ ಅರ್ಜಿಗಳ ಪರಿಶೀಲನೆ ನಡೆಸಿ ಅರ್ಹತೆಗಳ ಆಧಾರದ ಮೇಲೆ ಹೆಸರುಗಳನ್ನು ಶಾರ್ಟ್ಲಿಸ್ಟ್ ಮಾಡುತ್ತದೆ.
-
ಆಯ್ಕೆ ಸಮಿತಿ ಶಿಫಾರಸು: ಪ್ರಧಾನಿ, ವಿರೋಧ ಪಕ್ಷದ ನಾಯಕ ಹಾಗೂ ನಾಮನಿರ್ದೇಶಿತ ಸಚಿವರಿಂದ ಕೂಡಿದ ಸಮಿತಿ ಅಂತಿಮ ಶಿಫಾರಸನ್ನು ರಾಷ್ಟ್ರಪತಿಗಳಿಗೆ ಕಳುಹಿಸುತ್ತದೆ.
ಸರ್ಕಾರವು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ಮಾಹಿತಿಯ ಪ್ರಕಾರ, ನೇಮಕಾತಿ ಪ್ರಕ್ರಿಯೆಯನ್ನು ವೇಗಗೊಳಿಸಲು ಈ ಸಭೆ ನಿಗದಿಪಡಿಸಲಾಗಿದೆ. ಸಿಐಸಿ ಮತ್ತು ರಾಜ್ಯ ಮಾಹಿತಿ ಆಯೋಗಗಳ ಖಾಲಿ ಹುದ್ದೆಗಳ ವಿಚಾರಣೆ ಸಂದರ್ಭದಲ್ಲಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್, ಸಮಿತಿಯ ಸಭೆಗೆ ಸದಸ್ಯರಿಗೆ ನೋಟಿಸ್ ಕಳುಹಿಸಲಾಗಿದೆ ಎಂದು ನ್ಯಾಯಾಂಗಕ್ಕೆ ತಿಳಿಸಿದ್ದರು.
ಆರ್ಟಿಐ ದೂರುಗಳು ಮತ್ತು ಮೇಲ್ಮನವಿಗಳ ಅಂತಿಮ ಮೇಲ್ಮನವಿ ಪ್ರಾಧಿಕಾರವಾದ ಸಿಐಸ ಕೆಲಸ ಮಾಡಲು ಹುದ್ದೆಗಳ ಭರ್ತಿ ಮಾಡುವುದು ಅತ್ಯಾವಶ್ಯಕ.





