ಕಲಬುರಗಿ: ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ (ಬೆಸ್ಕಾಂ) ನಿರ್ವಾಹಕ ನಿರ್ದೇಶಕ ಮಹಾಂತೇಶ್ ಬಿಳಗಿ ಅವರು ಪ್ರಯಾಣಿಸುತ್ತಿದ್ದ ಕಾರು ಜೇವರ್ಗಿ ಬೈಪಾಸ್ ಬಳಿ ಅಪಘಾತಕ್ಕೀಡಾಗಿದ್ದು, ಈ ಅಪಘಾತದಲ್ಲಿ ಮಹಾಂತೇಶ್ ಬಿಳಗಿ ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಜೇವರ್ಗಿ ತಾಲ್ಲೂಕಿನ ಗೌನಹಳ್ಳಿ ಗ್ರಾಮದ ಬಳಿ ಇರುವ ಜೇವರ್ಗಿ ಬೈಪಾಸ್ ಬಳಿ ಈ ದುರಂತ ಸಂಭವಿಸಿದೆ. ವಿಜಯಪುರದಿಂದ ಕಲಬುರಗಿ ಕಡೆಗೆ ವೇಗದಲ್ಲಿ ಬರುತ್ತಿದ್ದ ಇನ್ನೋವಾ ಕಾರಿನ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಡಿವೈಡರ್ಗೆ ಡಿಕ್ಕಿ ಹೊಡೆದು ಹಲವು ಬಾರಿ ಪಲ್ಟಿಯಾಗಿ ನಿಂತಿದೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ಕಾರಿನಲ್ಲಿ ಒಟ್ಟು ಮೂವರು ಪ್ರಯಾಣಿಸುತ್ತಿದ್ದರು. ಅಪಘಾತದ ತೀವ್ರತೆಯಿಂದ ಸ್ಥಳದಲ್ಲೇ ಬೆಸ್ಕಾಂ ಎಂಡಿ ಮಹಾಂತೇಶ್ ಬಿಳಗಿ, ಈರಣ್ಣ ಸಿರಸಂಗಿ ಮತ್ತು ಶಂಕರ ಬಿಜಳಗಿ ಎಂಬ ಮೂವರು ಸಾವನ್ನಪ್ಪಿದ್ದಾರೆ. ಮೂವರೂ ಆ ಒಂದೇ ಕುಟುಂಬದ ಸದಸ್ಯರು ಹಾಗೂ ಸಂಬಂಧಿಕರು ಎನ್ನಲಾಗಿದೆ. ಮಹಾಂತೇಶ್ ಬಿಳಗಿ ಅವರನ್ನ ತಕ್ಷಣ ಕಲಬುರಗಿ ನಗರದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಗಂಭೀರ ಗಾಯಗಳಿಗೆ ಚಿಕಿತ್ಸೆ ಫಲಕಾರಿಯಾಗದೇ ಅವರು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.





