ಚಿಕ್ಕಬಳ್ಳಾಪುರ: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಟೀಕಿಸುವ ಬಿಜೆಪಿಯವರಿಗೆ ಸರ್ಕಾರದ ಆರ್ಥಿಕ ಸಾಧನೆಗಳನ್ನು ಎತ್ತಿ ತೋರಿಸಿ, ಬಿಜೆಪಿಯ ವಿರುದ್ಧ ಕಾರ್ಮಿಕ ಸಚಿವ ಸಂತೋಷ್ ಲಾಡ್ ವಾಗ್ದಾಳಿ ನಡೆಸಿದ್ದಾರೆ.
ಇಂದು ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮಗಳಿಗೆ ಮಾತನಾಡಿದ ಅವರು, “ಬಿಜೆಪಿಯವರು ಸರ್ಕಾರದ ಬಳಿ ಗ್ಯಾರಂಟಿ ಯೋಜನೆಗಳಿಗೆ ಹಣವಿಲ್ಲ ಎಂದು ಆರೋಪಿಸುತ್ತಾರೆ. ಆದರೆ, ಕರ್ನಾಟಕ ಸರ್ಕಾರವು ಒಂದು ವರ್ಷಕ್ಕೆ 60 ಸಾವಿರ ಕೋಟಿ ರೂಪಾಯಿ ಮತ್ತು ಐದು ವರ್ಷಗಳಲ್ಲಿ 3 ಲಕ್ಷ ಕೋಟಿ ರೂಪಾಯಿ ಖರ್ಚು ಮಾಡಿದೆ. ಇದರ ಜೊತೆಗೆ, 500 ಕೋಟಿ ಮಹಿಳೆಯರು ರಾಜ್ಯದಲ್ಲಿ ಉಚಿತವಾಗಿ ಬಸ್ನಲ್ಲಿ ಪ್ರಯಾಣಿಸಿದ್ದಾರೆ,” ಎಂದು ಸಚಿವ ಸಂತೋಷ್ ಲಾಡ್ ತಿಳಿಸಿದರು.
ಮುಂದುವರೆದು ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳನ್ನೂ ತೀವ್ರವಾಗಿ ಟೀಕಿಸಿದ ಅವರು, “ಪ್ರಧಾನಮಂತ್ರಿ ನರೇಂದ್ರ ಮೋದಿ ಭಾರತವನ್ನು ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕ ಶಕ್ತಿಯ ದೇಶ ಎಂದು ಹೇಳುತ್ತಾರೆ. ಆದರೆ, ಜಿಡಿಪಿ ದರವನ್ನು 8.4%ರಿಂದ 4.5%ಗೆ ಇಳಿಸಿರುವ ಕೀರ್ತಿಯನ್ನು ಅವರೇ ತೆಗೆದುಕೊಂಡಿದ್ದಾರೆ. ಜಿಡಿಪಿಯನ್ನು 8.4%ಕ್ಕೆ ಏರಿಸಲು ಮತ್ತೊಬ್ಬ ಮನಮೋಹನ್ ಸಿಂಗ್ ಬೇಕು,” ಎಂದು ಕಿಡಿಕಾರಿದ್ದಾರೆ.
ಜಪಾನ್ ಮತ್ತು ಚೀನಾದ ಆರ್ಥಿಕ ಸಾಧನೆಗಳೊಂದಿಗೆ ಭಾರತವನ್ನು ಹೋಲಿಸಿದ ಸಚಿವ ಸಂತೋಷ್ ಲಾಡ್, “ಜಪಾನ್ನಲ್ಲಿ ಒಬ್ಬ ವ್ಯಕ್ತಿಯ ಆದಾಯ 30 ಲಕ್ಷ ರೂಪಾಯಿಯಾದರೆ, ಚೀನಾದಲ್ಲಿ 12 ಲಕ್ಷ ರೂಪಾಯಿ ಇದೆ. ಆದರೆ, ಕರ್ನಾಟಕದಲ್ಲಿ ಒಬ್ಬ ವ್ಯಕ್ತಿಯ ಆದಾಯ ಕೇವಲ 1.50 ಸಾವಿರ ರೂಪಾಯಿ ಮತ್ತು ಬಿಹಾರದಲ್ಲಿ 43 ಸಾವಿರ ರೂಪಾಯಿಯಷ್ಟಿದೆ. ಬಿಜೆಪಿಯವರು ಕೇವಲ ಹಿಂದೂ-ಮುಸ್ಲಿಂ, ಭಾರತ-ಪಾಕಿಸ್ತಾನದಂತಹ ವಿಭಜನಕಾರಿ ವಿಷಯಗಳ ಬಗ್ಗೆಯೇ ಮಾತನಾಡುತ್ತಾರೆ,” ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.





