ರಾಜ್ ಬಿ ಶೆಟ್ಟಿ ಒಂದು ರೀತಿ ಅವತಾರ ಪುರುಷನಾಗಿಬಿಟ್ಟಿದ್ದಾರೆ. ಕರುಣಾಕರ ಗುರೂಜಿಯಾಗಿ ಸು ಫ್ರಮ್ ಸೋ ಚಿತ್ರದಿಂದ ಎಲ್ಲೆಡೆ ಸುನಾಮಿ ಎಬ್ಬಿಸಿರೋ ಶೆಟ್ರು, ಇದೀಗ ಕರಾವಳಿಯ ಮಾವೀರನಾಗಿ ಅಬ್ಬರಿಸುತ್ತಿದ್ದಾರೆ. ಪ್ರಜ್ವಲ್ ದೇವರಾಜ್ರ ಬಹುಕೋಟಿ ಕರಾವಳಿಯಲ್ಲಿ ಶೆಟ್ರ ಗತ್ತು ಒಮ್ಮೆ ನೋಡಿ.
- ಕೋಣಗಳ ಜೊತೆ ಕರಾವಳಿಯ ಮಾವೀರ ರಾಜ್ ಶೆಟ್ಟಿ
- ಹೊಚ್ಚ ಹೊಸ ಗೆಟಪ್ನಲ್ಲಿ ಶೆಟ್ರ ಅಬ್ಬರ, ಆರ್ಭಟ ಶುರು
- ಕರುಣಾಕರ ಗುರೂಜಿಯ ಹೊಸ ಅವತಾರ ಮಾವೀರ..!
- ಸು ಫ್ರಮ್ ಸೋ ಸಕ್ಸಸ್ ಬೆನ್ನಲ್ಲಿ ರಾಜ್ ಶೆಟ್ಟಿ ಸೆನ್ಸೇಷನ್
ಸು ಫ್ರಮ್ ಸೋ.. ಬರೀ ಸ್ಯಾಂಡಲ್ವುಡ್ಗೆ ಸೀಮಿತ ಆಗಿದ್ದ ಈ ಸಕ್ಸಸ್ಫುಲ್ ಸಿನಿಮಾ, ಇದೀಗ ಸುನಾಮಿ ಸುಂಟರಗಾಳಿಯಾಗಿ ಪ್ಯಾನ್ ಇಂಡಿಯಾ, ಪ್ಯಾನ್ ವರ್ಲ್ಡ್ ಸದ್ದು ಮಾಡ್ತಿದೆ. ರಾಜ್ ಬಿ ಶೆಟ್ಟಿ ನಟಿಸಿ, ನಿರ್ಮಿಸಿರೋ ಈ ಸಿನಿಮಾಗೆ ನಾಯಕನಟ ಜೆಪಿ ತುಮಿನಾಡ್ ಡೈರೆಕ್ಷನ್ ಮಾಡಿದ್ದಾರೆ. ಇದೇ ಆಗಸ್ಟ್ 8ಕ್ಕೆ ಆಂಧ್ರದಲ್ಲೂ ಇದರ ಪರ್ವ ಶುರುವಾಗ್ತಿದ್ದು, ಇತ್ತೀಚೆಗೆ ನಡೆದ ಇವೆಂಟ್ನಲ್ಲಿ ಹೈದ್ರಾಬಾದ್ನಲ್ಲಿ ರಾಜ್ ಶೆಟ್ಟಿ ರಾರಾಜಿಸಿದ್ರು.
ಒಂದ್ಕಡೆ ಸು ಫ್ರಮ್ ಸೋ ಸುನಾಮಿ. ಮತ್ತೊಂದ್ಕಡೆ ಕರಾವಳಿಯ ಮಾವೀರ ಅಬ್ಬರ, ಆರ್ಭಟ ಶುರುವಾಗಿದೆ. ಯೆಸ್.. ಮಾವೀರ ಅನ್ನೋದು ಕರಾವಳಿ ಚಿತ್ರದಲ್ಲಿ ನಟ ರಾಜ್ ಬಿ ಶೆಟ್ಟಿ ಅವರ ಪಾತ್ರದ ಹೆಸರು. ಸದ್ಯ ಕರುಣಾಕರ ಗುರೂಜಿಯಾಗಿ ಅಭಿಮಾನಿಗಳ ಹೃದಯ ಗೆದ್ದಿರುವ ರಾಜ್ ಬಿ ಶೆಟ್ಟಿ ಇದೀಗ ಮತ್ತೊಂದು ವಿಭಿನ್ನ ಪಾತ್ರದ ಮೂಲಕ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ.
ಗುರುದತ್ ಗಾಣಿಗ ನಿರ್ದೇಶನದಲ್ಲಿ ಮೂಡಿ ಬರ್ತಿರೋ ಕರಾವಳಿ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪ್ರಜ್ವಲ್ ದೇವರಾಜ್ ನಾಯಕನಾಗಿ ಕಾಣಿಸಿಕೊಂಡಿರೋ ಕರಾವಳಿ ಸಿನಿಮಾಗೆ ರಾಜ್ ಬಿ ಶೆಟ್ಟಿ ಎಂಟ್ರಿ ಕೊಟ್ಟಿದ್ದಾರೆ. ರಾಜ್ ಎಂಟ್ರಿಯಿಂದ ಕರಾವಳಿ ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ಸದ್ಯ ರಾಜ್ ಬಿ ಶೆಟ್ಟಿ ಅವರ ಪಾತ್ರ ಪರಿಚಯದ ಟೀಸರ್ ರಿಲೀಸ್ ಆಗಿದೆ. ರಾಜ್ ಶೆಟ್ಟಿ ಲುಕ್ ಆಕರ್ಷಕವಾಗಿದ್ದು, ಕುತೂಹಲ ಹೆಚ್ಚಾಗಿದೆ.
ಎರಡು ಕೋಣಗಳ ಮಧ್ಯೆ ನಿಂತು ದಿಟ್ಟಿಸಿ ನೋಡುತ್ತಿರುವ ರಾಜ್ ಬಿ ಶೆಟ್ಟಿ ಒಂದು ಕೈಯಲ್ಲಿ ಪಂಜು ಹಿಡಿದು ಕಾಣಿಸಿಕೊಂಡಿದ್ದಾರೆ. ರಾಜ್ ಲುಕ್ ನೋಡುತ್ತಿದ್ರೆ ಕಂಬಳ ಓಡಿಸುವ ಓಟಗಾರನ ಅಥವಾ ಕಂಬಳ ನಡೆಸುವ ಕುಟುಂಬದ ಮಹಾವೀರನ ಎನ್ನುವುದು ಕುತೂಹಲ ಮೂಡಿಸಿದೆ. ರಾಜ್ ಪಾತ್ರದ ಬಗ್ಗೆ ಸಿನಿಮಾತಂಡ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಆದ್ರೆ ಲುಕ್ ರಿಲೀಸ್ ಮಾಡುವ ಮೂಲಕ ಕರಾವಳಿ ಸಿನಿಮಾ ಮೇಲಿನ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ.
ಈಗಾಗಲೇ ಕರಾವಳಿ ಸಿನಿಮಾದಿಂದ ರಿಲೀಸ್ ಆಗಿರುವ ಪೋಸ್ಟರ್ಗಳು ಮತ್ತು ಟೀಸರ್ಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ. ಇದೀಗ ರಾಜ್ ಶೆಟ್ಟಿ ಪೋಸ್ಟರ್ ಮತ್ತಷ್ಟು ಆಕರ್ಷಕವಾಗಿದ್ದು, ಸಿನಿಮಾದ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಕರಾವಳಿಯಲ್ಲಿ ನಟ ಮಿತ್ರ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ರಮೇಶ್ ಇಂದಿರ ಅವರ ಪಾತ್ರ ಕೂಡ ಸಿಕ್ಕಾಪಟ್ಟೆ ಪವರ್ಫುಲ್ ಆಗಿದೆ. ನಾಯಕಿಯಾಗಿ ಸಂಪದಾ ಕಾಣಿಸಿಕೊಂಡಿದ್ದಾರೆ.
ಕರಾವಳಿ.. ಹೆಸರೇ ಹೇಳುವ ಹಾಗೆ ಬಹುತೇಕ ಸಿನಿಮಾ, ಕರಾವಳಿಯ ಸುತ್ತಮುತ್ತಲು ಚಿತ್ರೀಕರಣಗೊಂಡಿದೆ. ಈ ಸಿನಿಮಾ ಗುರುದತ್ ಗಾಣಿಗ ನಿರ್ದೇಶನದ ಜೊತೆಗೆ ವಿಕೆ ಫಿಲ್ಮಂ ಅಸೋಸಿಯೇಷನ್ ನಲ್ಲಿ ಗಾಣಿಗ ಫಿಲ್ಮ್ಸ್ನಲ್ಲಿ ನಿರ್ಮಾಣಾಗುತ್ತಿದೆ. ಕರಾವಳಿ ಮನುಷ್ಯ ಹಾಗೂ ಪ್ರಾಣಿ ಮಧ್ಯೆ ನಡೆಯುವ ಸಂಘರ್ಷದ ಕಥೆ ಇದಾಗಿದೆ. ಪಕ್ಕಾ ಹಳ್ಳಿ ಬ್ಯಾಕ್ ಡ್ರಾಪ್ ನಲ್ಲಿ ಸಿನಿಮಾ ಮೂಡಿ ಬರಲಿದೆ. ಈ ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ. ಅಭಿಮನ್ಯು ಸದಾನಂದನ್ ಕ್ಯಾಮೆರಾ ಕೈಚಳಕವಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್