ಪ್ರಕಾಶ್ ರೈ ನಿರ್ದಿಗಂತದ ರಂಗ ವೇದಿಕೆಗೆ ಬರೋಬ್ಬರಿ ಎರಡು ವರ್ಷ. ಅದೇ ಹರುಷದಲ್ಲಿ ಹೆರಿಟೇಜ್ ಸಿಟಿ ಮೈಸೂರಿನಲ್ಲಿ ಖುಷಿ ಹಂಚಿಕೊಂಡ ಬಹುಭಾಷಾ ನಟ, ಜನಕ್ಕೆ ಕಿವಿ ಮಾತು ಕೂಡ ಹೇಳಿದ್ರು. ಭಾಷೆ, ಪಕ್ಷ, ಧರ್ಮ ಹಾಗೂ ಮೂಢನಂಬಿಕೆ ಹೆಸರಲ್ಲಿ ದಾರಿತಪ್ಪುವುದು ಬೇಡ ಎಂದಿದ್ದಾರೆ. ಹಾಡುಗಳ ಮೂಲಕವೇ ಸಂದೇಶ ಸಾರಿದ ರೈ ಮನದ ಲಹರಿ ಇಲ್ಲಿದೆ.
- ನಿರ್ದಿಗಂತ ಸಾರ್ಥಕ ಜರ್ನಿ.. ಪ್ರಕಾಶ್ ರೈ ಫುಲ್ ಖುಷ್
- ಆ ರಂಗ ವೇದಿಕೆಗೆ ಎರಡು ವರ್ಷ.. ನೂರಾರು ಹರುಷ
- ಮೈಸೂರಿನಲ್ಲಿ ಜನಕ್ಕೆ ಬಹುಭಾಷಾ ನಟ ರೈ ಕಿವಿಮಾತು..!
- ಹಾಡುಗಳ ಮೂಲಕವೇ ಸಂದೇಶ ಸಾರಿದ ಚಳವಳಿಗಾರ
ಪ್ರಕಾಶ್ ರೈ.. ಭಾರತೀಯ ಚಿತ್ರರಂಗ ಕಾಣ್ತಿರೋ ಅತ್ಯದ್ಭುತ ಕಲಾವಿದ. ಕನ್ನಡ ಮಣ್ಣಲ್ಲಿ ಜನಿಸಿದ ರೈ, 80ರ ದಶಕದಿಂದ ರಂಗಭೂಮಿ, ಚಿತ್ರರಂಗ ಹಾಗೂ ಕಿರುತೆರೆಗೆ ಸಾಕಷ್ಟು ದುಡಿದಿದ್ದಾರೆ. ನಟನೆ, ನಿರ್ದೇಶನ, ನಿರ್ಮಾಣ, ಬರವಣಿಗೆ, ರಾಜಕಾರಣ, ಜಸ್ಟ್ ಆಸ್ಕಿಂಗ್ ಚಳವಳಿ ಹೀಗೆ ಸಾಕಷ್ಟು ಕ್ಷೇತ್ರಗಳಲ್ಲಿ ತಮ್ಮನ್ನ ತಾವು ಅವಿರತವಾಗಿ ತೊಡಗಿಸಿಕೊಂಡಿದ್ದಾರೆ.
ರೈ ಎಲ್ಲೇ ಹೋದರೂ ಸಹ, ಅಲ್ಲಿನ ನಾಡು, ನುಡಿ, ಜಲ, ಭಾಷೆ, ಸಂಸ್ಕೃತಿ, ಸಾಹಿತ್ಯವನ್ನು ಬಹಳ ಆಳವಾಗಿ ಅಧ್ಯಯನ ಮಾಡ್ತಾರೆ. ಅದೇ ಕಾರಣಕ್ಕೆ ಅವರನ್ನ ತಮಿಳಿಗರು, ತೆಲುಗು ಮಂದಿ ಕೂಡ ತಮ್ಮದೇ ನೆಲದ ಸಾಧಕ ಎಂಬುವಂತೆ ಪ್ರೀತಿಸ್ತಾರೆ, ಗೌರವಿಸುತ್ತಾರೆ. ಚೆನ್ನೈ, ಆಂಧ್ರ, ಶ್ರೀರಂಗಪಟ್ಟಣ ಹೀಗೆ ಎಲ್ಲಾ ಕಡೆ ಮನೆ, ತೋಟದ ಮನೆಗಳು ಇರೋ ರೈಗೆ ತಾಯ್ನೆಲಕ್ಕೆ ಏನಾದ್ರು ಮಾಡ್ಬೇಕು ಅನ್ನೋ ಹಂಬಲ. ಅದೇ ಕಾರಣದಿಂದ ಕನ್ನಡದಲ್ಲಿ ಆಗಾಗ ಸಿನಿಮಾ ನಿರ್ದೇಶನ, ನಿರ್ಮಾಣ, ಪ್ರೆಸೆಂಟ್ ಕೂಡ ಮಾಡ್ತಿರ್ತಾರೆ.
ಇನ್ನು ಎರಡು ವರ್ಷಗಳ ಹಿಂದೆ ಉತ್ಸಾಹಿ ಹಾಗೂ ಉದಯೋನ್ಮುಖ ರಂಗಭೂಮಿ ಕಲಾವಿದರಿಗಾಗಿ ಶ್ರೀರಂಗಪಟ್ಟಣದಲ್ಲಿರೋ ತಮ್ಮ ತೋಟದ ಮನೆಗೆ ನಿರ್ದಿಗಂತ ಅನ್ನೋ ಹೆಸರಿಟ್ಟಿದ್ದರು. ಅಷ್ಟೇ ಅಲ್ಲ, ಕೊರೋನಾ ಸಮಯದಲ್ಲಿ ಅಲ್ಲೊಂದು ರಂಗವೇದಿಕೆ ಸೃಷ್ಟಿಸಿ, ನ್ಯೂ ಟ್ಯಾಲೆಂಟ್ಸ್ ಕನಸುಗಳಿಗೆ ನೀರೆರೆಯುವ ಕಾರ್ಯ ಮಾಡಿದ್ರು. ಅದೀಗ ಎರಡು ವರ್ಷ ಪೂರೈಸಿದೆ.
ಯೆಸ್.. ಈ ನರ್ದಿಗಂತಕ್ಕೀಗ ಎರಡನೇ ವಾರ್ಷಿಕೋತ್ಸವದ ಸಂಭ್ರಮ. ರಂಗಭೂಮಿಯ ಕಲಾವಿದರಿಗೆ ಕಾವು ಗೂಡಾಗಿ ಮೈದಳೆಯುತ್ತಾ, ಹಲವು ಪ್ರಯೋಗಗಳನ್ನು ನಡೆಸುತ್ತಾ, ಸಮಾಜದೊಳಗೆ ಸೂಕ್ತ ಮಧ್ಯಪ್ರವೇಶಿಕೆ ಪಡೆಯುತ್ತಾ, ನಿರ್ದಿಗಂತವು ಸಾಗುತ್ತಿದೆ. ಸಾರ್ವಜನಿಕರಿಗಾಗಿ ರಂಗ ಪ್ರದರ್ಶನಗಳು, ಯುವ ಸಮುದಾಯವನ್ನ ತಲುಪುವ ಉದ್ದೇಶದ ಕಾಲೇಜುರಂಗ, ಶಿಕ್ಷಣ ಮತ್ತು ರಂಗಭೂಮಿಯ ಸಮಾಸ ಸೃಷ್ಠಿಸುವತ್ತ ನಡೆಸುತ್ತಿರುವ ಪ್ರಯೋಗವಾಗಿದೆ. ‘ಶಾಲಾರಂಗ’ ಹಾಗು ಮಕ್ಕಳೊಡನೆ ರಂಗಪ್ರಯೋಗ ನಡೆಸಲು ರಂಗಶಿಕ್ಷಕರನ್ನು ತೊಡಗಿಸಿರುವ ‘ಶಾಲಾ ರಂಗವಿಕಾಸ’, ಇಂದಿನ ಯುವ ನಿರ್ದೇಶಕರುಗಳ ಲೋಕ ಗ್ರಹಿಕೆಯನ್ನು ಅರಿಯುವ ಮತ್ತು ಅವರ ಕನಸಿಗೆ ಬೆಂಬಲವಾಗಿ ನಿಲ್ಲುವ ‘ರಂಗವಿಕಾಸ’ ಯೋಜನೆ, ಹೀಗೆ ಹಲವು ಕಾರ್ಯಕ್ರಮಗಳನ್ನು ಸಂಯೋಜಿಸುತ್ತಾ ಬರ್ತಿದೆ ನಿರ್ದಿಗಂತ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ಕರೆದಿದ್ದ ರೈ, ಹಾಡುಗಳ ಮೂಲಕವೇ ಜನಕ್ಕೆ ಕಿವಿ ಮಾತು ಕೂಡ ಹೇಳಿದ್ರು. ಭಾಷೆ, ಪಕ್ಷ, ಧರ್ಮ ಹಾಗೂ ಮೂಢನಂಬಿಕೆ ಹೆಸರಲ್ಲಿ ದಾರಿ ತಪ್ಪುವುದು ಬೇಡ ಎಂದರು.
ಹತ್ತು, ಹಲವು ಸಾಮಾಜಿಕ ಕಾರ್ಯಗಳನ್ನು ಕೂಡ ಮಾಡ್ತಿರೋ ರೈ, ಸಾಕಷ್ಟು ಶಾಲೆಗಳನ್ನು ದತ್ತು ಪಡೆದಿದ್ದಾರೆ. ಅಸಹಾಯಕರ ಪಾಲಿನ ಆಶಾಕಿರಣವಾಗಿದ್ದಾರೆ. ನಟನೆಯಲ್ಲಿ ಎಂತಹ ಅತ್ಯದ್ಭುತ ಕಲಾವಿದ ಅನಿಸಿಕೊಂಡಿದ್ದಾರೋ, ಪರೋಪಕಾರಿ ಗುಣದಲ್ಲಿ ಅದಕ್ಕಿಂತ ದೊಡ್ಡ ವ್ಯಕ್ತಿತ್ವವಾಗಿ ಬೆಳೆದಿದ್ದಾರೆ. ಸೋ.. ನಮ್ಮ ಚಿತ್ರರಂಗದ ಪಾಲಿಗೆ ಪ್ರಕಾಶ್ ರೈ ಬರೀ ವ್ಯಕ್ತಿಯಲ್ಲ. ಅದೊಂದು ಅನನ್ಯ ಶಕ್ತಿ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್