ಕನ್ನಡಿಗರ ಹೃದಯದ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವು 18 ವರ್ಷಗಳ ಕಾಲ ಕಪ್ ಗೆಲುವಿನ ಕನಸನ್ನು ಕಂಡು ಬಂದಿದೆ. ಇಂದು ಆ ಕನಸು ನನಸಾಗುವ ಸಮಯ ಒಲಿದು ಬಂದಿದೆ. ಕನ್ನಡಿಗರ ಬೆಂಗಳೂರು ತಂಡ ಆರ್ಸಿಬಿಯ ಅಭಿಮಾನಿಗಳು 50 ಕೋಟಿ ರೂಪಾಯಿಗಳಷ್ಟು ಪಟಾಕಿಗಳನ್ನು ಖರೀದಿಸಿ, ಈ ಐತಿಹಾಸಿಕ ಕ್ಷಣವನ್ನು ದೊಡ್ಡದಾಗಿ ಆಚರಿಸಲು ಸಿದ್ಧರಾಗಿದ್ದಾರೆ.
ಕನ್ನಡಿಗರಿಗೆ ಆರ್ಸಿಬಿ ಕೇವಲ ಕ್ರಿಕೆಟ್ ತಂಡವಲ್ಲ, ಅದು ಒಂದು ಭಾವನೆ, ಹೃದಯದ ಭಾಷೆ. ಕೋಟ್ಯಂತರ ಅಭಿಮಾನಿಗಳು ತಮ್ಮ ತಂಡವನ್ನು ಜೀವ ಪ್ರಾಣವೆಂಬಂತೆ ಕಾಪಾಡಿಕೊಂಡು, ಪ್ರತಿ ಪಂದ್ಯದಲ್ಲೂ ಅಚಲ ಬೆಂಬಲವನ್ನು ನೀಡುತ್ತಾ ಬಂದಿದ್ದಾರೆ. ಇಂತಹ ಅಭಿಮಾನಿಗಳ ಬೆಂಬಲದಿಂದ ಆರ್ಸಿಬಿ ಇಂದು ಐಪಿಎಲ್ 2025ರ ಫೈನಲ್ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲು ಸಜ್ಜಾಗಿದೆ.
ಈ ಫೈನಲ್ ಪಂದ್ಯವು ಕೇವಲ ಒಂದು ಕ್ರಿಕೆಟ್ ಮ್ಯಾಚ್ ಅಲ್ಲ, ಇದು ಕನ್ನಡಿಗರ ಆರ್ಸಿಬಿಗೆ ಇತಿಹಾಸ ಬರೆಯುವ ಅವಕಾಶ. ವಿರಾಟ್ ಕೊಹ್ಲಿ, ರಜತ್ ಪಾಟೀದಾರ್, ಯಶ್ ದಯಾಳ್ ಮುಂತಾದ ಆಟಗಾರರಿಂದ ಕೂಡಿದ ಈ ತಂಡವು ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್ನಂತಹ ಬಲಿಷ್ಠ ತಂಡಗಳನ್ನು ಸೋಲಿಸಿ ಫೈನಲ್ಗೆ ತಲುಪಿದೆ. ಇಂದು, ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಆರ್ಸಿಬಿ ಕಪ್ ಗೆದ್ದರೆ, ಇಡೀ ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ದೊಡ್ಡ ದೀಪಾವಳಿ ಆಚರಣೆಯಾಗಲಿದೆ.
50 ಕೋಟಿ ರೂಪಾಯಿಗಳಷ್ಟು ಪಟಾಕಿಗಳನ್ನು ಖರೀದಿಸಿರುವ ಆರ್ಸಿಬಿ ಅಭಿಮಾನಿಗಳ ಉತ್ಸಾಹವು ಯಾವುದೇ ಕ್ರಿಕೆಟ್ ತಂಡಕ್ಕೂ ಸಿಗದಷ್ಟು ವಿಶಿಷ್ಟವಾಗಿದೆ. ಈ ಉತ್ಸಾಹವು ಆರ್ಸಿಬಿಯ ಆಟಗಾರರಿಗೆ ಹೆಚ್ಚಿನ ಶಕ್ತಿಯನ್ನು ತುಂಬಿದೆ. ಒಂದು ವೇಳೆ ಆರ್ಸಿಬಿ ಗೆದ್ದರೆ, ಇಂಟರ್ನೆಟ್ ಉಡೀಸ್ ಆಗಲಿದೆ, ಸಾಮಾಜಿಕ ಜಾಲತಾಣಗಳು ಆರ್ಸಿಬಿಯ ಗೆಲುವಿನ ಸಂಭ್ರಮದಿಂದ ತುಂಬಿಹೋಗಲಿವೆ.