ಸೀರಿಯಲ್ ಹಾಗೂ ಸಿನಿಮಾ ಎರಡೂ ಕ್ಷೇತ್ರಗಳಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿ, ಎಲ್ಲರ ಮನೆ ಮನಗಳನ್ನು ತಲುಪಿದ್ದ ಪಾರು ಖ್ಯಾತಿಯ ನಟ ಶ್ರೀಧರ್ ಇನ್ನು ನೆನಪು ಮಾತ್ರ. ಮಾರಣಾಂತಿಕ ಕಾಯಿಲೆಯಿಂದ ಸುಮಾರು 6 ತಿಂಗಳಿಂದ ಆಸ್ಪತ್ರೆ ಪಾಲಾಗಿದ್ದ ನಟ, ಆರ್ಥಿಕ ಸಂಕಷ್ಟದಲ್ಲೇ ಇಹಲೋಕ ತ್ಯಜಿಸಿದ್ದಾರೆ. ಈ ಕುರಿತ ಕಂಪ್ಲೀಟ್ ಸ್ಟೋರಿ ಇಲ್ಲಿದೆ. ಒಮ್ಮೆ ನೋಡ್ಕೊಂಡ್ ಬನ್ನಿ.
- ಮ್ಯಾಕ್ಸ್ ಶ್ರೀಧರ್ ಇನ್ನು ನೆನಪು ಮಾತ್ರ.. ನರಳಿದ್ದೆಷ್ಟು ಗೊತ್ತಾ ?
- ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದ ಕಲಾವಿದ ಶ್ರೀ
- 40ಕ್ಕೂ ಅಧಿಕ ಸೀರಿಯಲ್, ಹತ್ತಾರು ಸಿನಿಮಾಗಳಲ್ಲಿ ನಟನೆ
- ಆರ್ಥಿಕ ಸಂಕಷ್ಟದಲ್ಲೇ ಪಾರು ನಟ ಶ್ರೀಧರ್ ಕೊನೆಯುಸಿರು..!
ತೆರೆ ಮೇಲೆ ಕಲರ್ಫುಲ್ ಆಗಿ ಮಿಂಚುವ ಅದೆಷ್ಟೋ ಮಂದಿ ಕಲಾವಿದರ ರಿಯಲ್ ಬದುಕು ರೀಲ್ನಷ್ಟು ಕಲರ್ಫುಲ್ ಆಗಿ ಅಂತೂ ಇರಲ್ಲ. 40ಕ್ಕೂ ಅಧಿಕ ಸೀರಿಯರ್ಗಳು, ಸುದೀಪ್ ನಟನೆಯ ಮ್ಯಾಕ್ಸ್ ಸೇರಿದಂತೆ ಹತ್ತಾರು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದ ನಟ ಶ್ರೀಧರ್ ಕೂಡ ಇದರಿಂದ ಹೊರತಾಗಿಲ್ಲ. ಹೌದು.. 47 ವರ್ಷದ ಪಾರು ಸೀರಿಯಲ್ ಖ್ಯಾತಿಯ ನಟ ಶ್ರೀಧರ್ ಮಾರಣಾಂತಿಕ ಕಾಯಿಲೆ ಎಡಿಮಾಗೆ ಬಲಿಯಾಗಿದ್ದಾರೆ.
ಕಳೆದ ಆರು ತಿಂಗಳಿಂದ ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟನ ಗೋಳು ಕೇಳುವವರೇ ಇರಲಿಲ್ಲ. ಕಾರಣ ಪತ್ನಿ ಜೊತೆಗಿರಲಿಲ್ಲ. ತಾಯಿಯೇ ಎಲ್ಲಾ ಆರೈಕೆ ಮಾಡ್ತಿದ್ರು. ಜೊತೆಗೆ ಆರ್ಥಿಕ ಸಂಕಷ್ಟ. ಈ ಹಿಂದೆ ಚಿಕಿತ್ಸೆಗೂ ದುಡ್ಡಿಲ್ಲದೆ ಆರ್ಥಿಕ ನೆರವಿಗಾಗಿ ಕನ್ನಡಿಗರು ಹಾಗೂ ಟಿವಿ, ಸಿನಿಮಾ ರಂಗದ ಬಳಿ ಅಂಗಲಾಚಿದ್ರು ಶ್ರೀಧರ್.
ಪಾರು, ವಧು, ಮಂಗಳ ಗೌರಿ, ಮನೆಯೇ ಮಂತ್ರಾಲಯ ಸೀರಿಯಲ್ಗಳು ಹಾಗೂ ರಾಜಮಾರ್ತಾಂಡ, ಈಶ ಮಹೇಶ, ಮ್ಯಾಕ್ಸ್ ಅಲ್ಲದೆ ತಮಿಳು ಸಿನಿಮಾಗಳ ಮೂಲಕ ಜನಕ್ಕೆ ಹತ್ತಿರ ಆಗಿದ್ದ ಶ್ರೀಧರ್ ಪತ್ನಿಯಿಂದ ದೂರವಾಗಿದ್ದೇ ರೋಚಕ. ನಟ ಶ್ರೀಧರ್ ಹಾಗೂ ಪತ್ನಿ ಜ್ಯೋತಿ ನಡುವೆ ಭಿನ್ನಾಭಿಪ್ರಾಯಗಳಿದ್ದ ಕಾರಣ ಮಗು ಆದ ಆರಂಭದಲ್ಲೇ ಪರಸ್ಪರ ಇಬ್ಬರೂ ದೂರ ಆಗಿದ್ದರಂತೆ. ಅಲ್ಲದೆ ಆತನಿಗೆ ಮಾರಣಾಂತಿಕ ಕಾಯಿಲೆ ಇದ್ದ ಕಾರಣಕ್ಕೂ ಪತ್ನಿ ಜ್ಯೋತಿ ಪತಿಯಿಂದ ಅಂತರ ಕಾಯ್ದುಕೊಂಡಿದ್ದರಂತೆ. ಅದನ್ನ ಸ್ವತಃ ಅವರೇ ಸ್ಪಷ್ಟಪಡಿಸಿದ್ದಾರೆ.
ನಟ ಶ್ರೀಧರ್ ಪಾರ್ಥಿವ ಶರೀರವನ್ನು ಮನೆಗೆ ಕೂಡ ತರದ ಕುಟುಂಬಸ್ಥರು, ಆಸ್ಪತ್ರೆಯ ಬಳಿಯೇ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದರು. ಸೀರಿಯಲ್ ಹಾಗೂ ಸಿನಿಮಾ ರಂಗದ ಸಹ ಕಲಾವಿದರು, ಹಿತೈಷಿಗಳು ಹಾಗೂ ಒಂದಷ್ಟು ಮಂದಿ ತಂತ್ರಜ್ಞರು ಆಸ್ಪತ್ರೆಯಲ್ಲೇ ಅಂತಿಮ ನಮನ ಸಲ್ಲಿಸಿದರು. ಕೊನೆಗೆ ಹೆಬ್ಬಾಳದಲ್ಲಿರೋ ಚಿರಶಾಂತಿಧಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಈ ಹಿಂದೆ ಅಭಿನಯ ಕಲಿಯೋಕೆ ಅಂತ ಬರೋರಿಗೆ ನಟನಾ ಶಾಲೆಯನ್ನು ಕೂಡ ಆರಂಭಿಸಿದ್ದರು ನಟ ಶ್ರೀಧರ್. ಬಾಡಿಗೆ ಮನೆಯಲ್ಲೇ ಮೂರ್ನಾಲ್ಕು ವರ್ಷಗಳಿಂದ ಅಭಿನಯ ತರಗತಿಗಳನ್ನ ಹೇಳಿಕೊಡ್ತಾ ಜೀವನ ಸಾಗಿಸ್ತಿದ್ದ ಶ್ರೀಧರ್ಗೆ ಆರೋಗ್ಯ ಕೈಕೊಟ್ಟು ಬಾರದೂರಿಗೆ ಪಯಣ ಬೆಳೆಸಿದ್ದಾರೆ. ಇವರ ಅಗಲಿಕೆ ನಿಜಕ್ಕೂ ಕಿರುತೆರೆ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಇಂತಹ ಮಾರಣಾಂತಿಕ ಕಾಯಿಲೆ ಬೇರೆ ಯಾವ ಕಲಾವಿದನಿಗೂ ಬಾರದಿರಲಿ. ಶ್ರೀಧರ್ ಅಗಲಿಕೆ ನೋವನ್ನು ಭರಿಸೋ ಶಕ್ತಿ ಭಗವಂತ ಅವರ ಕುಟುಂಬಕ್ಕೆ ನೀಡಲಿ ಅಂತ ಪ್ರಾರ್ಥಿಸೋಣ.