ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತನ್ನ ಚಿನ್ನಸ್ವಾಮಿ ಕೋಟೆಯಲ್ಲಿ ಮೊದಲ ಗೆಲುವಿನ ಕನಸಿನಲ್ಲಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧ ಜಯ ಗಳಿಸಿ ಚೇತರಿಸಿಕೊಂಡ ಆರ್ಸಿಬಿ, ಈಗ ಐಪಿಎಲ್ 2025ರಲ್ಲಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ವಿರುದ್ಧ ಸೆಣಸಾಡಲು ಸಜ್ಜಾಗಿದೆ. ಆದರೆ, ಚಿನ್ನಸ್ವಾಮಿಯ ಚಿಕ್ಕ ಮೈದಾನದಲ್ಲಿ ಪಂಜಾಬ್ನ ಬ್ಯಾಟಿಂಗ್ ಶಕ್ತಿಯನ್ನು ಕಟ್ಟಿಹಾಕದಿದ್ದರೆ ಆರ್ಸಿಬಿಗೆ ಗೆಲುವು ಕಷ್ಟವಾಗಲಿದೆ. ಪಂಜಾಬ್ನ ಮೂವರು ಪ್ರಮುಖ ಆಟಗಾರರಾದ ಪ್ರಿಯಾಂಶ್ ಆರ್ಯ, ಪ್ರಭುಸಿಮ್ರನ್ ಸಿಂಗ್, ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಆರಂಭದಲ್ಲೇ ತಟಸ್ಥಗೊಳಿಸುವುದು ಆರ್ಸಿಬಿಯ ಗೆಲುವಿನ ಕೀಲಿಯಾಗಿದೆ.
ಯುವ ಎಡಗೈ ಬ್ಯಾಟ್ಸ್ಮನ್ ಪ್ರಿಯಾಂಶ್ ಆರ್ಯ ಪಂಜಾಬ್ ಕಿಂಗ್ಸ್ನ ಆರಂಭಿಕ ಶಕ್ತಿಯಾಗಿದ್ದಾರೆ. ಮೊದಲ ಚೆಂಡಿನಿಂದಲೇ ಬೌಲರ್ಗಳ ಮೇಲೆ ದಾಳಿ ನಡೆಸುವ ಈ ಡೆಲ್ಲಿ ಆಟಗಾರ, 6 ಪಂದ್ಯಗಳಲ್ಲಿ 216ರ ಸ್ಟ್ರೈಕ್ ರೇಟ್ನಲ್ಲಿ 216 ರನ್ಗಳನ್ನು ಕಲೆಹಾಕಿದ್ದಾರೆ. ಚಿನ್ನಸ್ವಾಮಿಯ ಚಿಕ್ಕ ಗಡಿರೇಖೆಗಳು ಈತನ ಆಕ್ರಮಣಕಾರಿ ಬ್ಯಾಟಿಂಗ್ಗೆ ಒಡ್ಡಿಕೊಂಡಂತಿವೆ. ಪ್ರಿಯಾಂಶ್ ಒಮ್ಮೆ ಕ್ರೀಸ್ನಲ್ಲಿ ಕಾಲಿಟ್ಟರೆ, ಆರ್ಸಿಬಿಯ ಬೌಲಿಂಗ್ಗೆ ದೊಡ್ಡ ಸಂಕಷ್ಟ ಎದುರಾಗಬಹುದು. ಆದ್ದರಿಂದ, ಆರ್ಸಿಬಿಯ ಫಾಸ್ಟ್ ಬೌಲರ್ಗಳು ಆರಂಭಿಕ ಓವರ್ಗಳಲ್ಲೇ ಈತನ ವಿಕೆಟ್ ಬೇಟೆಯಾಡಿ ಒತ್ತಡ ಹೆಚ್ಚಿಸಬೇಕಿದೆ.
ಪಂಜಾಬ್ನ ಆರಂಭಿಕ ಬ್ಯಾಟ್ಸ್ಮನ್ ಪ್ರಭುಸಿಮ್ರನ್ ಸಿಂಗ್ ಪವರ್ ಪ್ಲೇನಲ್ಲಿ ಅಪಾಯಕಾರಿ ಆಟಗಾರ. 30 ಯಾರ್ಡ್ ವೃತ್ತದೊಳಗಿರುವ ಫೀಲ್ಡರ್ಗಳಿರುವಾಗ ಈತ ಬೌಂಡರಿ ಮತ್ತು ಸಿಕ್ಸರ್ಗಳನ್ನು ಸುಲಭವಾಗಿ ಬಾರಿಸುತ್ತಾನೆ. ಈ ಟೂರ್ನಿಯಲ್ಲಿ 166ರ ಸ್ಟ್ರೈಕ್ ರೇಟ್ನಲ್ಲಿ ರನ್ಗಳನ್ನು ಗಳಿಸಿರುವ ಪ್ರಭುಸಿಮ್ರನ್, ಕ್ರೀಸ್ನಲ್ಲಿ ಸ್ಥಿರವಾಗಿ ನಿಂತರೆ ಬೌಲರ್ಗಳಿಗೆ ಕಾಟ ಕೊಡುವ ಸಾಮರ್ಥ್ಯ ಹೊಂದಿದ್ದಾನೆ.
ಪಂಜಾಬ್ ಕಿಂಗ್ಸ್ನ ನಾಯಕ ಶ್ರೇಯಸ್ ಅಯ್ಯರ್ ತಂಡದ ಮಿಡಲ್ ಆರ್ಡರ್ನ ಬೆನ್ನೆಲುಬಾಗಿದ್ದಾರೆ. ಆರಂಭಿಕರಾದ ಪ್ರಿಯಾಂಶ್ ಅಥವಾ ಪ್ರಭುಸಿಮ್ರನ್ ವಿಫಲವಾದರೂ, 3ನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಶ್ರೇಯಸ್ ತಂಡವನ್ನು ಸ್ಥಿರಗೊಳಿಸುತ್ತಾರೆ. 204ರ ಸ್ಟ್ರೈಕ್ ರೇಟ್ನಲ್ಲಿ 250 ರನ್ಗಳನ್ನು ಕಲೆಹಾಕಿರುವ ಈತ, ಸ್ಪಿನ್ ಮತ್ತು ಫಾಸ್ಟ್ ಬೌಲಿಂಗ್ ಎರಡನ್ನೂ ಸಮರ್ಥವಾಗಿ ಎದುರಿಸುತ್ತಾನೆ. ಉತ್ತಮ ಫಾರ್ಮ್ನಲ್ಲಿರುವ ಶ್ರೇಯಸ್ನ ರನ್ಗಳಿಗೆ ಬ್ರೇಕ್ ಹಾಕಿದರೆ, ಆರ್ಸಿಬಿಗೆ ಪಂದ್ಯದ ಅರ್ಧದಷ್ಟು ಗೆಲುವು ಖಚಿತವಾಗುತ್ತದೆ.





