ಕಾಲೇಜು ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸಕ್ಕೆ ತೆರಳುವ ವೇಳೆ ಸಂಭವಿಸುವ ಅಪಘಾತಗಳನ್ನು ತಡೆಯುವ ಹಾಗೂ ಅವರ ಸುರಕ್ಷತೆಯನ್ನು ಖಚಿತಪಡಿಸುವ ಉದ್ದೇಶದಿಂದ ಶಿಕ್ಷಣ ಇಲಾಖೆ ಹೊಸ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ. ವಿದ್ಯಾರ್ಥಿಗಳ ಪ್ರವಾಸದ ವೇಳೆ ಮೊಬೈಲ್ ಬಳಕೆ ಹಾಗೂ ಅಪಾಯಕಾರಿ ಸ್ಥಳಗಳಲ್ಲಿ ಫೋಟೋ, ಸೆಲ್ಫಿ ಮತ್ತು ರೀಲ್ಸ್ ಮಾಡುವುದರಿಂದ ಎದುರಾಗಬಹುದಾದ ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು ಹಲವು ನಿಯಮಗಳನ್ನು ರೂಪಿಸಲಾಗಿದೆ.
ಹೊಸ ಮಾರ್ಗಸೂಚಿಯ ಪ್ರಮುಖ ಅಂಶವೆಂದರೆ, ಶೈಕ್ಷಣಿಕ ಪ್ರವಾಸದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸೆಲ್ಫಿ ಹಾಗೂ ಸಾಮಾಜಿಕ ಜಾಲತಾಣಗಳಿಗಾಗಿ ರೀಲ್ಸ್ ಚಿತ್ರೀಕರಿಸುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ವಿಶೇಷವಾಗಿ ನದಿಗಳು, ಜಲಪಾತಗಳು, ಬೆಟ್ಟ-ಗುಡ್ಡಗಳು ಹಾಗೂ ಇತರ ಅಪಾಯಕಾರಿ ಪ್ರವಾಸಿ ತಾಣಗಳಲ್ಲಿ ಮೊಬೈಲ್ ಹಿಡಿದು ಫೋಟೋ ಅಥವಾ ವಿಡಿಯೋ ಮಾಡುವಾಗ ವಿದ್ಯಾರ್ಥಿಗಳು ಅಪಾಯಕ್ಕೆ ಸಿಲುಕುತ್ತಿರುವ ಘಟನೆಗಳನ್ನು ಪರಿಗಣಿಸಿ ಈ ಕ್ರಮ ಕೈಗೊಳ್ಳಲಾಗಿದೆ.
ಪ್ರವಾಸಕ್ಕೂ ಮುನ್ನ ವಿದ್ಯಾರ್ಥಿಗಳಿಗೆ ಸೂಚನೆ
ಪ್ರವಾಸ ಆರಂಭಿಸುವ ಮೊದಲು ಕಾಲೇಜಿನ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಸುರಕ್ಷತಾ ನಿಯಮಗಳ ಕುರಿತು ಸ್ಪಷ್ಟ ಮಾಹಿತಿ ನೀಡಬೇಕು. ಪ್ರವಾಸದ ವೇಳೆ ನಿಯಮ ಉಲ್ಲಂಘನೆಯಾಗದಂತೆ ಜೊತೆಯಲ್ಲಿ ತೆರಳುವ ಬೋಧಕ ಸಿಬ್ಬಂದಿ ವಿದ್ಯಾರ್ಥಿಗಳ ಮೇಲೆ ನಿರಂತರ ನಿಗಾ ವಹಿಸಬೇಕು ಎಂದು ಇಲಾಖೆ ಸೂಚಿಸಿದೆ.
ವಿದ್ಯಾರ್ಥಿಗಳು ಅನುಮೋದಿತ ಪ್ರವಾಸಿ ಸ್ಥಳಗಳಲ್ಲಿಯೇ ಭೇಟಿ ನೀಡಬೇಕು. ಅಪಾಯಕಾರಿ ಪ್ರದೇಶಗಳು, ನಿಷೇಧಿತ ಸ್ಥಳಗಳು ಅಥವಾ ಅನುಮತಿ ಇಲ್ಲದ ಪ್ರದೇಶಗಳಿಗೆ ತೆರಳುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಪೂರ್ವಾನುಮತಿ, ಪೋಷಕರ ಸಮ್ಮತಿ ಕಡ್ಡಾಯ
ಯಾವುದೇ ಸರ್ಕಾರಿ ಅಥವಾ ಖಾಸಗಿ ಕಾಲೇಜು ಶೈಕ್ಷಣಿಕ ಪ್ರವಾಸ ಆಯೋಜಿಸುವ ಮೊದಲು ಶಿಕ್ಷಣ ಇಲಾಖೆಯಿಂದ ಅಗತ್ಯ ಪೂರ್ವಾನುಮತಿ ಪಡೆಯಬೇಕು. ಪ್ರವಾಸಕ್ಕೆ ತೆರಳುವ ಪ್ರತಿಯೊಬ್ಬ ವಿದ್ಯಾರ್ಥಿಯಿಂದ ಮುಚ್ಚಳಿಕೆ ಪತ್ರ ಪಡೆಯುವುದರ ಜೊತೆಗೆ, ಅವರ ಪೋಷಕರ ಲಿಖಿತ ಸಮ್ಮತಿಯನ್ನೂ ಕಡ್ಡಾಯವಾಗಿ ಪಡೆದುಕೊಳ್ಳಬೇಕು.
ಇದರೊಂದಿಗೆ ಪ್ರವಾಸದ ಸಂಪೂರ್ಣ ವಿವರ, ಪ್ರಯಾಣಿಸುವ ಮಾರ್ಗ ಹಾಗೂ ಭೇಟಿ ನೀಡಲಿರುವ ಸ್ಥಳಗಳ ಮಾಹಿತಿಯನ್ನು ಸಂಬಂಧಪಟ್ಟ ವ್ಯಾಪ್ತಿಯ ಪೊಲೀಸ್ ಠಾಣೆಗೆ ಮುಂಚಿತವಾಗಿ ನೀಡಬೇಕು. ಇದರಿಂದ ಪ್ರವಾಸದ ಸಂದರ್ಭದಲ್ಲಿ ತುರ್ತು ಪರಿಸ್ಥಿತಿ ಎದುರಾದರೆ ಅಗತ್ಯ ಸಹಾಯ ಒದಗಿಸಲು ಸಾಧ್ಯವಾಗಲಿದೆ.
ಶಿಕ್ಷಕರ ಮೇಲೂ ಹೆಚ್ಚಿದ ಜವಾಬ್ದಾರಿ
ವಿದ್ಯಾರ್ಥಿಗಳನ್ನು ಕೇವಲ ಅತಿಥಿ ಉಪನ್ಯಾಸಕರ ಜವಾಬ್ದಾರಿಯಲ್ಲಿ ಪ್ರವಾಸಕ್ಕೆ ಕಳುಹಿಸುವಂತಿಲ್ಲ. ಪ್ರವಾಸದ ತಂಡದಲ್ಲಿ ಕನಿಷ್ಠ ಒಬ್ಬ ಖಾಯಂ ಅಧ್ಯಾಪಕರು ಕಡ್ಡಾಯವಾಗಿ ಇರಬೇಕು. ಪ್ರವಾಸಕ್ಕೆ ನಿಯೋಜಿಸುವ ಬೋಧಕ ಸಿಬ್ಬಂದಿಯ ಸಂಖ್ಯೆ ನಾಲ್ಕನ್ನು ಮೀರಬಾರದು ಎಂದು ಇಲಾಖೆ ಸೂಚಿಸಿದೆ.
ವಿದ್ಯಾರ್ಥಿನಿಯರ ಸುರಕ್ಷತೆಯ ದೃಷ್ಟಿಯಿಂದ ಕನಿಷ್ಠ ಇಬ್ಬರು ಮಹಿಳಾ ಅಧ್ಯಾಪಕಿಯರು ಪ್ರವಾಸ ತಂಡದಲ್ಲಿರಬೇಕು. ವಿದ್ಯಾರ್ಥಿಗಳ ಚಲನವಲನ, ಸುರಕ್ಷತೆ ಹಾಗೂ ನಿಯಮ ಪಾಲನೆಯ ಬಗ್ಗೆ ಶಿಕ್ಷಕರು ನಿರಂತರವಾಗಿ ಗಮನಹರಿಸಬೇಕು.
ಶೈಕ್ಷಣಿಕ ಪ್ರವಾಸದ ಉದ್ದೇಶ ವಿದ್ಯಾರ್ಥಿಗಳಿಗೆ ಹೊಸ ಅನುಭವ ಹಾಗೂ ಜ್ಞಾನ ನೀಡುವುದಾಗಿದ್ದು, ಯಾವುದೇ ಕಾರಣಕ್ಕೂ ಅವರ ಸುರಕ್ಷತೆಗೆ ಧಕ್ಕೆಯಾಗಬಾರದು. ಹೀಗಾಗಿ ಹೊಸ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಶಿಕ್ಷಣ ಇಲಾಖೆ ಕಾಲೇಜು ಆಡಳಿತ ಮಂಡಳಿಗಳು, ಪ್ರಾಂಶುಪಾಲರು ಹಾಗೂ ಬೋಧಕ ಸಿಬ್ಬಂದಿಗೆ ಸೂಚಿಸಿದೆ.





