ಗ್ಲ್ಯಾಸ್ಗೋ, ಜುಲೈ 30: ಕಠಿಣ ಪರಿಶ್ರಮ ಮತ್ತು ಛಲವೊಂದಿದ್ದರೆ ಜಗತ್ತನ್ನೇ ಗೆಲ್ಲಬಹುದು ಎಂಬುದನ್ನು ಭಾರತದ ಅಥ್ಲೀಟ್ಗಳು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. 2026ರ ಕಾಮನ್ವೆಲ್ತ್ ಗೇಮ್ಸ್ ನ (CWG 2026) 6ನೇ ದಿನವು ಭಾರತದ ಪಾಲಿಗೆ ಮೂರು ಪದಕಗಳನ್ನು ತಂದಿದೆ. ಈ ಮೂರು ಪದಕಗಳಲ್ಲಿ ಎರಡು ಗೆದ್ದುಕೊಟ್ಟಿರುವುದು ಪ್ಯಾರಾ ಅಥ್ಲೆಟಿಕ್ಸ್ ವಿಭಾಗವಾಗಿದ್ದು, ಭಾರತದ ಕ್ರೀಡಾಪಟುಗಳ ಪ್ರತಿಭೆಗೆ ಇದು ಸಾಕ್ಷಿಯಾಗಿದೆ.
ಭಾರತದ ಪರ ಪುರುಷರ 100 ಮೀಟರ್ T47 ವಿಭಾಗದಲ್ಲಿ ಸ್ಪರ್ಧಿಸಿದ ಪ್ಯಾರಾ ಅಥ್ಲೀಟ್ ದಿಲೀಪ್ ಮಹಾದು ಗಾವಿತ್ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಅವರು ಕೇವಲ 10.71 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಗೆದ್ದಿರುವುದಷ್ಟೇ ಅಲ್ಲದೆ, ಕಾಮನ್ವೆಲ್ತ್ ಗೇಮ್ಸ್ನ ಈ ವಿಭಾಗದಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಇದುವರೆಗೆ ಈ ವಿಭಾಗದಲ್ಲಿ ಯಾರೂ ಇಷ್ಟು ಕಡಿಮೆ ಸಮಯದಲ್ಲಿ ಓಟವನ್ನು ಪೂರ್ಣಗೊಳಿಸಿರಲಿಲ್ಲ. ಗಾವಿತ್ ಅವರ ಈ ಸಾಧನೆ ಭಾರತೀಯ ಪ್ಯಾರಾ ಕ್ರೀಡಾ ಇತಿಹಾಸದಲ್ಲಿ ಮತ್ತೊಂದು ಸುವರ್ಣ ಅಧ್ಯಾಯವಾಗಿ ದಾಖಲಾಗಿದೆ.
ಇದೇ ಸ್ಪರ್ಧೆಯಲ್ಲಿ ಭಾರತದ ಮತ್ತೊಬ್ಬ ಪ್ರತಿಭಾವಂತ ಅಥ್ಲೀಟ್ ಮೊಹಮ್ಮದ್ ಬಾಸಿಲ್ ಕೂಡ ಅದ್ಭುತ ಪ್ರದರ್ಶನ ನೀಡಿದರು. ಅವರು 10.83 ಸೆಕೆಂಡುಗಳಲ್ಲಿ ಗುರಿ ತಲುಪಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಒಂದೇ ಸ್ಪರ್ಧೆಯಲ್ಲಿ ಭಾರತ ಚಿನ್ನ ಮತ್ತು ಬೆಳ್ಳಿ ಎರಡನ್ನೂ ಗೆದ್ದಿರುವುದು ದೇಶದ ಪ್ಯಾರಾ ಅಥ್ಲೆಟಿಕ್ಸ್ ಗೆ ಸಾಕ್ಷಿಯಾಗಿದೆ. ಇಬ್ಬರು ಭಾರತೀಯ ಅಥ್ಲೀಟ್ಗಳು ವೇದಿಕೆಯ ಮೊದಲ ಎರಡು ಸ್ಥಾನಗಳನ್ನು ಅಲಂಕರಿಸಿದ್ದು ಭಾರತೀಯ ಅಭಿಮಾನಿಗಳಿಗೆ ಸಂತಸ ತಂದಿದೆ.
ಇನ್ನೊಂದೆಡೆ, ಭಾರತದ ಸ್ಟಾರ್ ಲಾಂಗ್ ಜಂಪರ್ ಮುರಳಿ ಶ್ರೀಶಂಕರ್ ಕೂಡ ದೇಶಕ್ಕೆ ಮತ್ತೊಂದು ಪದಕ ತಂದುಕೊಟ್ಟಿದ್ದಾರೆ. ಪುರುಷರ ಲಾಂಗ್ ಜಂಪ್ ಫೈನಲ್ನಲ್ಲಿ ಅವರು 8.09 ಮೀಟರ್ ದೂರ ಜಿಗಿದು ಜಂಟಿಯಾಗಿ ಬೆಳ್ಳಿ ಪದಕ ಗೆದ್ದರು. ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ಮತ್ತೆ ಟ್ರ್ಯಾಕ್ಗೆ ಮರಳಿದ ಬಳಿಕ ಶ್ರೀಶಂಕರ್ ನೀಡಿರುವ ಈ ಪ್ರದರ್ಶನ ಅವರ ಆತ್ಮವಿಶ್ವಾಸ ಮತ್ತು ಕಠಿಣ ಅಭ್ಯಾಸದ ಪ್ರತೀಕವಾಗಿದೆ. ವಿ
ಈ ಮೂರು ಪದಕಗಳೊಂದಿಗೆ ಭಾರತ ಒಟ್ಟು 15 ಪದಕಗಳನ್ನು ಗೆದ್ದಿದ್ದು, ಅವುಗಳಲ್ಲಿ 3 ಚಿನ್ನ, 9 ಬೆಳ್ಳಿ ಮತ್ತು 3 ಕಂಚಿನ ಪದಕಗಳು ಸೇರಿವೆ. ಪದಕ ಪಟ್ಟಿಯಲ್ಲಿ ಭಾರತ ಪ್ರಸ್ತುತ 8ನೇ ಸ್ಥಾನ ಕಾಯ್ದುಕೊಂಡಿದೆ. ಮುಂದಿನ ದಿನಗಳಲ್ಲಿ ಅಥ್ಲೆಟಿಕ್ಸ್, ಕುಸ್ತಿ, ಬ್ಯಾಡ್ಮಿಂಟನ್ ಹಾಗೂ ಬಾಕ್ಸಿಂಗ್ ಸೇರಿದಂತೆ ಹಲವು ವಿಭಾಗಗಳಲ್ಲಿ ಭಾರತೀಯ ಕ್ರೀಡಾಪಟುಗಳು ಇನ್ನಷ್ಟು ಪದಕಗಳನ್ನು ಗೆಲ್ಲುವ ನಿರೀಕ್ಷೆ ಹೆಚ್ಚಿದೆ.
ಇದುವರೆಗೆ ಭಾರತದ ಪರ ಚಿನ್ನದ ಪದಕಗಳನ್ನು ಮೀರಾಬಾಯಿ ಚಾನು, ಶರ್ಮಿಳಾ ಧಂಕರ್ ಹಾಗೂ ದಿಲೀಪ್ ಮಹಾದು ಗಾವಿತ್ ಗೆದ್ದಿದ್ದಾರೆ. ಬೆಳ್ಳಿ ಪದಕ ವಿಜೇತರ ಪಟ್ಟಿಯಲ್ಲಿ ಮುರಳಿ ಶ್ರೀಶಂಕರ್, ಗುಲ್ವೀರ್ ಸಿಂಗ್, ಮೊಹಮ್ಮದ್ ಬಾಸಿಲ್, ಸಂಕೇತ್ ಸರ್ಗರ್, ಬಿಂದ್ಯಾರಾಣಿ ದೇವಿ, ಸುಶೀಲಾ ದೇವಿ ಲಿಕ್ಮಾಬಾಮ್, ವಿಕಾಸ್ ಠಾಕೂರ್, ತುಲಿಕಾ ಮಾನ್ ಹಾಗೂ ಅಂಶು ಮಲಿಕ್ ಸ್ಥಾನ ಪಡೆದಿದ್ದಾರೆ. ಕಂಚಿನ ಪದಕಗಳನ್ನು ಗುರುರಾಜ ಪೂಜಾರಿ, ವಿಜಯ್ ಕುಮಾರ್ ಯಾದವ್ ಮತ್ತು ಹರ್ಜಿಂದರ್ ಕೌರ್ ಗೆದ್ದಿದ್ದಾರೆ.





