ಬೆಂಗಳೂರಿನ ಆಸ್ತಿದಾರರು ಮತ್ತು ಅಕ್ರಮ ಕಟ್ಟಡಗಳನ್ನು ನಿರ್ಮಿಸಿರುವವರಿಗೆ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಅವರು ಬಿಗ್ ಶಾಕ್ ಕೊಟ್ಟಿದ್ದಾರೆ. ಬೆಂಗಳೂರಿನ ಕೆಲವು ಆಸ್ತಿದಾರರಿಗೆ ಶಾಕ್ ನೀಡಲಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಹಿಂದಿನ ವರ್ಷಗಳಿಂದ (ಬಿಬಿಎಂಪಿ) ಈ ಬಾರಿ ಆಸ್ತಿ ತೆರಿಗೆ ಸಂಗ್ರಹವನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ಮುಂದಾಗಿದೆ. ಇದಕ್ಕಾಗಿ ಇ-ಖಾತಾ ಮತ್ತು ಒಟಿಎಸ್ ನಂತಹ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಆದರೆ, ಈ ಯೋಜನೆಗಳ ಮೂಲಕ ಆಸ್ತಿದಾರರಿಗೆ ಅನುಕೂಲ ಮಾಡಿಕೊಟ್ಟರೂ, ಕೆಲವರು ಆಸ್ತಿ ತೆರಿಗೆ ಪಾವತಿಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಡಿ.ಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಈ ಹಿಂದೆ ಸುಮಾರು 7 ಲಕ್ಷ ಮನೆಗಳು ಮತ್ತು ಆಸ್ತಿದಾರರು ಆಸ್ತಿ ತೆರಿಗೆ ಪಾವತಿಸಿರಲಿಲ್ಲ. ಇ-ಖಾತಾ ಮತ್ತು ಒಟಿಎಸ್ ಯೋಜನೆಗಳ ಜಾರಿ ಮಾಡಿದ ನಂತರ 1 ಲಕ್ಷ ಆಸ್ತಿದಾರರು ತೆರಿಗೆ ವ್ಯಾಪ್ತಿಗೆ ಸೇರ್ಪಡೆಯಾಗಿದ್ದಾರೆ. ಆದರೆ ಇನ್ನೂ 6 ಲಕ್ಷ ಮನೆಗಳು ತೆರಿಗೆ ವ್ಯಾಪ್ತಿಗೆ ಬರಬೇಕಿದೆ. ಈ ಉದ್ದೇಶಕ್ಕಾಗಿ ಒಟಿಎಸ್ ಯೋಜನೆಯಡಿ ಒಂದೇ ಬಾರಿಗೆ ತೆರಿಗೆ ಪಾವತಿಸುವ ಅವಕಾಶ ಕಲ್ಪಿಸಲಾಗಿತ್ತು. ಇದರ ಜೊತೆಗೆ, ಅಕ್ರಮ ಕಟ್ಟಡಗಳನ್ನು ನಿಯಂತ್ರಿಸಲು ಹೊಸ ಕಾನೂನು ವಿಧೇಯಕವನ್ನು ಸದನದಲ್ಲಿ ಅಂಗೀಕರಿಸಲಾಗಿದೆ. ಅಲ್ಲದೆ, ಕಂದಾಯ ಬಡಾವಣೆಗಳಲ್ಲಿರುವ ಖಾಸಗಿ ರಸ್ತೆಗಳನ್ನೂ ಸಹ ಸರ್ಕಾರಿ ರಸ್ತೆಗಳೆಂದು ಘೋಷಣೆಯನ್ನೂ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಅಕ್ರಮ ಕಟ್ಟಡಗಳ ಮೇಲೆ ಕಣ್ಣು
ಬೆಂಗಳೂರಿನಲ್ಲಿ ಅಕ್ರಮವಾಗಿ ನಿರ್ಮಿಸಲಾದ ಕಟ್ಟಡಗಳಿಗೆ ಇದೀಗ ದೊಡ್ಡ ಸಂಕಷ್ಟ ಎದುರಾಗಿದೆ. ಬಿಬಿಎಂಪಿ ಅನುಮತಿಗಿಂತ ಹೆಚ್ಚು ವಿಸ್ತೀರ್ಣ ಮತ್ತು ಮಹಡಿಗಳನ್ನು ಕಟ್ಟಿರುವ ಆಸ್ತಿದಾರರನ್ನು ಗುರುತಿಸಲು ಎ.ಐ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನವನ್ನು ಬಳಸುವ ಯೋಜನೆ ಜಾರಿಗೆ ಬರಲಿದೆ. ಇದರಿಂದ ಕಟ್ಟಡಗಳ ಎತ್ತರ, ವಿಸ್ತೀರ್ಣ ಮತ್ತು ದಾಖಲೆಗಳನ್ನು ಸುಲಭವಾಗಿ ಪತ್ತೆ ಮಾಡಬಹುದು ಎಂದು ಶಿವಕುಮಾರ್ ತಿಳಿಸಿದ್ದಾರೆ.
“ನಗರದಲ್ಲಿ ನೀರು ಹಾಗೂ ರಸ್ತೆ ಸೇರಿದಂತೆ ಮೂಲಸೌಕರ್ಯಗಳನ್ನು ಒದಗಿಸಿದ್ದೇವೆ. ಆದರೆ ಕೆಲವರು ಆಸ್ತಿ ತೆರಿಗೆ ಪಾವತಿಸದೇ ತಪ್ಪಿಸಿಕೊಳ್ಳುತ್ತಿದ್ದಾರೆ,” ಎಂದು ಅವರು ಆರೋಪಿಸಿದ್ದಾರೆ.
ಇ-ಖಾತಾ ಮತ್ತು ಆದಾಯದ ನಿರೀಕ್ಷೆ
ಇ-ಖಾತಾ ಜಾರಿಯ ನಂತರ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದಿದ್ದ ಆಸ್ತಿದಾರರು ಖಾತಾ ಮಾಡಿಸಿಕೊಳ್ಳುತ್ತಿದ್ದಾರೆ. ಬಿಬಿಎಂಪಿ ಕಂದಾಯ ವಿಭಾಗದ ಅಂದಾಜಿನ ಪ್ರಕಾರ, 7 ರಿಂದ 8 ಲಕ್ಷ ಆಸ್ತಿಗಳು ತೆರಿಗೆ ವ್ಯಾಪ್ತಿಯಿಂದ ಹೊರಗಿದ್ದವು. ಈಗಾಗಲೇ 1 ಲಕ್ಷ ಆಸ್ತಿದಾರರು ಸೇರ್ಪಡೆಯಾಗಿರುವುದರಿಂದ, ಬಿಬಿಎಂಪಿಗೆ ವಾರ್ಷಿಕವಾಗಿ 1 ಕೋಟಿ ರೂಪಾಯಿಗಿಂತ ಹೆಚ್ಚು ಹೆಚ್ಚುವರಿ ಆದಾಯ ಸಂಗ್ರಹವಾಗುವ ನಿರೀಕ್ಷೆ ಇದೆ.