ಚಿತ್ರದುರ್ಗ, ಜುಲೈ 18: ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಮಳೆ ಕೈಕೊಟ್ಟ ಪರಿಣಾಮ ಬರದ ಛಾಯೆ ಆವರಿಸಿದ್ದು, ರೈತರಷ್ಟೇ ಅಲ್ಲದೆ ಪಶುಪಾಲಕರಿಗೂ ಸಂಕಷ್ಟ ಎದುರಾಗಿದೆ. ಚಿತ್ರದುರ್ಗ ತಾಲೂಕಿನ ಬಚ್ಚಬೋರನಹಟ್ಟಿ ಗ್ರಾಮದಲ್ಲಿ ಸುಮಾರು 150 ದೇವರ ಎತ್ತುಗಳ ಆರೈಕೆ ಮಾಡುತ್ತಿರುವ ಪಶುಪಾಲಕ ಸಣ್ಣ ಬೋರಯ್ಯ ಇದೀಗ ಮೇವು ಮತ್ತು ಕುಡಿಯುವ ನೀರಿನ ಕೊರತೆಯಿಂದ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.
ನಾಯಕ ಸಮುದಾಯದ ಆರಾಧ್ಯ ದೈವ ಗಾದ್ರಿಪಾಲ ನಾಯಕರು ಅವರಿಗೆ ಸೇರಿದ ದೇವರ ಎತ್ತುಗಳನ್ನು ಹಲವು ವರ್ಷಗಳಿಂದ ಸಂಪ್ರದಾಯದಂತೆ ಸಣ್ಣ ಬೋರಯ್ಯ ನೋಡಿಕೊಳ್ಳುತ್ತಿದ್ದಾರೆ. ಆದರೆ ಈ ಬಾರಿ ಮಳೆ ಕೊರತೆಯಿಂದ ಗೋಮಾಳ ಪ್ರದೇಶಗಳಲ್ಲಿ ಹುಲ್ಲೇ ಬೆಳೆಯದಿರುವುದರಿಂದ ಜಾನುವಾರುಗಳಿಗೆ ಮೇವು ಒದಗಿಸುವುದೇ ದೊಡ್ಡ ಸವಾಲಾಗಿದೆ.
ದನಗಳನ್ನು ಬೆಟ್ಟ-ಗುಡ್ಡ ಪ್ರದೇಶಗಳಿಗೆ ಮೇಯಿಸಲು ಕರೆದೊಯ್ದರೂ ಎಲ್ಲಿಯೂ ಹಸಿರು ಹುಲ್ಲು ಸಿಗುತ್ತಿಲ್ಲ. ಕೆರೆ-ಕಟ್ಟೆಗಳು ಒಣಗುತ್ತಿರುವುದರಿಂದ ಕುಡಿಯುವ ನೀರಿಗೂ ಪರದಾಟ ಆರಂಭವಾಗಿದೆ. ಪ್ರತಿದಿನ ನೂರಾರು ಜಾನುವಾರುಗಳಿಗೆ ಮೇವು ಮತ್ತು ನೀರು ಒದಗಿಸುವುದು ದುಸ್ತರವಾಗಿದ್ದು, ಪಶುಪಾಲಕ ಆರ್ಥಿಕ ಹಾಗೂ ಮಾನಸಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇನ್ನೊಂದು ಸಮಸ್ಯೆಯೆಂದರೆ, ಗ್ರಾಮದ ಗೋಮಾಳ ಭೂಮಿಯೂ ಅತಿಕ್ರಮಣಕ್ಕೆ ಒಳಗಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಜಾನುವಾರುಗಳಿಗೆ ಮೀಸಲಾದ ಗೋಮಾಳ ಪ್ರದೇಶಗಳು ಕಡಿಮೆಯಾಗುತ್ತಿರುವುದರಿಂದ ಮೇಯಿಸಲು ಸೂಕ್ತ ಜಾಗವೇ ಉಳಿದಿಲ್ಲ. ಈ ಕುರಿತು ಹಲವು ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ ಎಂದು ಪಶುಪಾಲಕ ಬೇಸರ ವ್ಯಕ್ತಪಡಿಸಿದ್ದಾರೆ.
ಬರದ ಪರಿಸ್ಥಿತಿ ಮುಂದುವರಿದರೆ ಜಾನುವಾರುಗಳಲ್ಲಿ ಅಪೌಷ್ಟಿಕತೆ, ರೋಗ-ರುಜಿನಗಳು ಹಾಗೂ ಸಾವಿನ ಪ್ರಮಾಣ ಹೆಚ್ಚುವ ಸಾಧ್ಯತೆ ಇದೆ ಎಂಬ ಆತಂಕವೂ ವ್ಯಕ್ತವಾಗಿದೆ. ವಿಶೇಷವಾಗಿ ದೇವರ ಎತ್ತುಗಳ ಆರೋಗ್ಯ ಕಾಪಾಡುವುದು ದೊಡ್ಡ ಸವಾಲಾಗಿದ್ದು, ತಕ್ಷಣ ಸರ್ಕಾರ ಮಧ್ಯಪ್ರವೇಶಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಪಶುಸಂಗೋಪನಾ ಇಲಾಖೆ ಹಾಗೂ ಜಿಲ್ಲಾಡಳಿತ ತುರ್ತಾಗಿ ಮೇವು ಬ್ಯಾಂಕ್ಗಳನ್ನು ಆರಂಭಿಸಬೇಕು, ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಹಾಗೂ ಅಗತ್ಯ ಔಷಧಿಗಳನ್ನು ಒದಗಿಸಬೇಕು ಎಂದು ಸಣ್ಣ ಬೋರಯ್ಯ ಮನವಿ ಮಾಡಿದ್ದಾರೆ. ಅಲ್ಲದೆ ಗೋಮಾಳ ಭೂಮಿಯ ಅತಿಕ್ರಮಣ ತೆರವುಗೊಳಿಸಿ ಜಾನುವಾರುಗಳಿಗೆ ಮೇಯಲು ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ.
ಮಳೆಗಾಗಿ ಕಾಯುತ್ತಿರುವ ರೈತರಷ್ಟೇ ಅಲ್ಲ, ಮೂಕಪ್ರಾಣಿಗಳ ಬದುಕೂ ಈಗ ಪ್ರಕೃತಿಯ ಮೇಲೆ ಅವಲಂಬಿತವಾಗಿದೆ. ದೇವರ ಎತ್ತುಗಳ ಸಂರಕ್ಷಣೆಗಾಗಿ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದೆ.





