ಬೆಂಗಳೂರು (ಜುಲೈ 18): ಕಳೆದ ಕೆಲವು ದಿನಗಳಿಂದ ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಹಲವೆಡೆ ಬೇಸಿಗೆಯಂತಹ ವಾತಾವರಣ ನಿರ್ಮಾಣವಾಗಿದೆ. ಮೋಡ ಕವಿದ ವಾತಾವರಣದ ನಡುವೆಯೂ ಮಳೆ ಕೈಕೊಟ್ಟಿರುವುದರಿಂದ ಜನರು ಬಿಸಿಲಿನ ತಾಪವನ್ನು ಅನುಭವಿಸುತ್ತಿದ್ದಾರೆ. ಇದೇ ವೇಳೆ ರಾಜ್ಯದ ಕೆಲವು ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ (IMD) ಶುಭಸುದ್ದಿ ನೀಡಿದ್ದು, ಇಂದು ಜುಲೈ 18 ಮತ್ತು ನಾಳೆ 19ರಂದು ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ.
ಹವಾಮಾನ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗುಡುಗು-ಮಿಂಚು ಸಹಿತ ಸಾಧಾರಣದಿಂದ ಮಧ್ಯಮ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಇಂದು ಗರಿಷ್ಠ 27 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಸಾಧ್ಯತೆ ಇದೆ. ಮಳೆ ಸಾಧ್ಯತೆ ಇದ್ದರೂ ದಿನದ ವೇಳೆ ಮೋಡ ಕವಿದ ವಾತಾವರಣ ಮುಂದುವರಿಯುವ ನಿರೀಕ್ಷೆಯಿದೆ.
ಮಲೆನಾಡಿನ ಮಡಿಕೇರಿಯಲ್ಲಿ ಗರಿಷ್ಠ 22 ಡಿಗ್ರಿ ಹಾಗೂ ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಸಾಧ್ಯತೆ ಇದೆ. ಕರಾವಳಿ ಭಾಗಗಳಾದ ಮಂಗಳೂರು, ಉಡುಪಿ ಮತ್ತು ಕಾರವಾರದಲ್ಲೂ ತೇವಾಂಶ ಹೆಚ್ಚಿದ್ದು, ಸಾಧಾರಣ ಮಳೆಯ ಮುನ್ಸೂಚನೆ ನೀಡಲಾಗಿದೆ.
ಇನ್ನು ಪ್ರಮುಖ ನಗರಗಳ ನಿರೀಕ್ಷಿತ ತಾಪಮಾನ ಹೀಗಿದೆ:
ಬೆಂಗಳೂರು 27-21, ಮಂಗಳೂರು 28-25, ಶಿವಮೊಗ್ಗ 26-22, ಬೆಳಗಾವಿ 25-22, ಮೈಸೂರು 28-22, ಮಂಡ್ಯ 28-22, ಮಡಿಕೇರಿ 22-20, ರಾಮನಗರ 28-22, ಹಾಸನ 24-21, ಚಾಮರಾಜನಗರ 28-22, ಚಿಕ್ಕಬಳ್ಳಾಪುರ 27-21, ಕೋಲಾರ 27-22, ತುಮಕೂರು 27-21, ಉಡುಪಿ 28-24, ಕಾರವಾರ 28-27, ಚಿಕ್ಕಮಗಳೂರು 22-19, ದಾವಣಗೆರೆ 27-23, ಹುಬ್ಬಳ್ಳಿ 26-22, ಚಿತ್ರದುರ್ಗ 27-22, ಹಾವೇರಿ 27-23, ಬಳ್ಳಾರಿ 30-24, ಗದಗ 26-22, ಕೊಪ್ಪಳ 29-23, ರಾಯಚೂರು 31-24, ಯಾದಗಿರಿ 30-24, ವಿಜಯಪುರ 29-24, ಕಲಬುರಗಿ 29-23 ಹಾಗೂ ಬಾಗಲಕೋಟೆ 28-23 ಡಿಗ್ರಿ ಸೆಲ್ಸಿಯಸ್.
ಹವಾಮಾನ ಇಲಾಖೆ ನೀಡಿರುವ ಎಚ್ಚರಿಕೆಯನ್ನು ಗಮನದಲ್ಲಿಟ್ಟುಕೊಂಡು ಮಳೆ ಪೀಡಿತ ಪ್ರದೇಶಗಳ ಜನರು ಮುನ್ನೆಚ್ಚರಿಕೆ ವಹಿಸುವಂತೆ ಹಾಗೂ ಅಗತ್ಯವಿದ್ದಲ್ಲಿ ಮಾತ್ರ ಪ್ರಯಾಣ ಕೈಗೊಳ್ಳುವಂತೆ ಸೂಚಿಸಲಾಗಿದೆ





