ವಯನಾಡು: ಕೇರಳದ ವಯನಾಡು ಜಿಲ್ಲೆಯ ಮೆಪ್ಪಾಡಿ ತಾಲೂಕಿನ ಕಲ್ಲಾಡಿ ಪ್ರದೇಶದಲ್ಲಿ ಸುರಂಗ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ವೇಳೆ ಸಂಭವಿಸಿದ ಭೀಕರ ಗುಡ್ಡಕುಸಿತ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ನಿರಂತರ ಮಳೆಯ ನಡುವೆ ಸಂಭವಿಸಿದ ಈ ದುರಂತದಲ್ಲಿ ಮೃತಪಟ್ಟ ಮೂವರು ಕಾರ್ಮಿಕರ ಮೃತದೇಹಗಳನ್ನು ರಕ್ಷಣಾ ಸಿಬ್ಬಂದಿ ಹೊರತೆಗೆದಿದ್ದು, ಇನ್ನೂ ಐವರು ಕಾರ್ಮಿಕರಿಗಾಗಿ ತೀವ್ರ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಮೃತಪಟ್ಟವರನ್ನು ಮಧ್ಯಪ್ರದೇಶ ಮೂಲದ ಜೆಸಿಬಿ ಆಪರೇಟರ್ ಚಂದ್ರಬಾನ್, ಬಿಹಾರದ ಬಿಕಾಶ್ ಕುಮಾರ್ ಹಾಗೂ ಜಾರ್ಖಂಡ್ನ ಅನ್ನೋಲ್ ಎಂದು ಗುರುತಿಸಲಾಗಿದೆ. ಭೂಕುಸಿತ ಸಂಭವಿಸಿದ ಕ್ಷಣದಲ್ಲೇ ಭಾರೀ ಪ್ರಮಾಣದ ಮಣ್ಣು ಮತ್ತು ಕಲ್ಲುಗಳು ಕಾಮಗಾರಿ ನಡೆಯುತ್ತಿದ್ದ ಸ್ಥಳದ ಮೇಲೆ ಕುಸಿದ ಪರಿಣಾಮ ಹಲವರು ಮಣ್ಣಿನಡಿ ಸಿಲುಕಿದ್ದರು. ತಕ್ಷಣ ಸ್ಥಳೀಯರು ಹಾಗೂ ರಕ್ಷಣಾ ತಂಡಗಳು ಕಾರ್ಯಾಚರಣೆ ಆರಂಭಿಸಿದ್ದರು. ನಿರಂತರ ಮಳೆ ಮತ್ತು ಕೆಸರಿನ ಪರಿಸ್ಥಿತಿಯಿಂದ ಕಾರ್ಯಾಚರಣೆಗೆ ತೀವ್ರ ಅಡಚಣೆ ಉಂಟಾಗಿದೆ.
ಇನ್ನೂ ಹಿಮಾಚಲ ಪ್ರದೇಶದ ಕನ್ಸ್ಟ್ರಕ್ಷನ್ ಮ್ಯಾನೇಜರ್ ವಿಕ್ರಮ್ ರಾಣಾ, ಇಂಜಿನಿಯರ್ ರಾಹುಲ್, ಬಿಹಾರದ ಇಟಾಚಿ ಆಪರೇಟರ್ ಮೊಹಮ್ಮದ್ ಇಮ್ರಾನ್, ಪಶ್ಚಿಮ ಬಂಗಾಳದ ಸರ್ವೇಯರ್ ರಾಕೇಶ್ ಗುಚೈತ್ ಹಾಗೂ ಉತ್ತರ ಪ್ರದೇಶದ ಸರ್ವೇಯರ್ ಅಜರುದ್ದೀನ್ ಅನ್ಸಾರಿ ನಾಪತ್ತೆಯಾಗಿದ್ದು, ಅವರನ್ನು ಪತ್ತೆಹಚ್ಚಲು ಹಗಲಿರುಳು ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದು, ದುರಂತದ ನಿಖರ ಕಾರಣದ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಸುರಂಗ ಕಾಮಗಾರಿಗಾಗಿ ತೆಗೆಯಲಾಗಿದ್ದ ಅಪಾರ ಪ್ರಮಾಣದ ಮಣ್ಣಿನ ರಾಶಿ ನಿರಂತರ ಮಳೆಯಿಂದ ಏಕಾಏಕಿ ಕುಸಿದಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಭೂಕುಸಿತದ ನಂತರ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF), ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಆಡಳಿತ ಸೇರಿ 200ಕ್ಕೂ ಹೆಚ್ಚು ಸಿಬ್ಬಂದಿಯನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ಭಾರೀ ಮಳೆ, ಕೆಸರು ಹಾಗೂ ನಿರಂತರ ಭೂಕುಸಿತದ ಆತಂಕದ ನಡುವೆಯೂ ಸಿಬ್ಬಂದಿ ಜೀವದ ಹಂಗು ತೊರೆದು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ರಕ್ಷಣಾ ತಂಡಗಳು ಎಕ್ಸ್ಕವೇಟರ್ಗಳು, ಜೆಸಿಬಿ ಯಂತ್ರಗಳು ಹಾಗೂ ವಿಶೇಷ ಉಪಕರಣಗಳ ನೆರವಿನಿಂದ ಮಣ್ಣಿನಡಿ ಸಿಲುಕಿರುವವರನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿವೆ. ಆದರೆ ಸ್ಥಳದಲ್ಲಿ ಮಣ್ಣು ನಿರಂತರವಾಗಿ ಜಾರುತ್ತಿರುವ ಕಾರಣ ಕಾರ್ಯಾಚರಣೆಯ ವೇಗ ಕುಂಠಿತವಾಗಿದೆ. ಕಳೆದ ಹಲವು ಗಂಟೆಗಳ ಶೋಧದ ಬಳಿಕವೂ ನಾಪತ್ತೆಯಾದ ಐವರ ಬಗ್ಗೆ ಯಾವುದೇ ಸ್ಪಷ್ಟ ಸುಳಿವು ಸಿಕ್ಕಿಲ್ಲ.
ಇನ್ನೊಂದೆಡೆ, ಮೆಪ್ಪಾಡಿ ಹಾಗೂ ಕಲ್ಲಾಡಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮತ್ತೆ ಭೂಕುಸಿತ ಸಂಭವಿಸುವ ಸಾಧ್ಯತೆ ಇರುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಕಲ್ಲಾಡಿ ಗ್ರಾಮ ಹಾಗೂ ಸುತ್ತಮುತ್ತಲಿನ 23 ಕುಟುಂಬಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದ್ದು, ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಸ್ಥಳೀಯ ಆಡಳಿತ ಜನರು ಅನಗತ್ಯವಾಗಿ ಅಪಾಯದ ಪ್ರದೇಶಗಳಿಗೆ ತೆರಳದಂತೆ ಮನವಿ ಮಾಡಿದೆ.





