ಅಂಬಾಲಾ (ಹರಿಯಾಣ) (ಜೂನ್ 30): ಹರಿಯಾಣದ ಅಂಬಾಲಾ ಜಿಲ್ಲೆಯ ಧನೌರಾ ಗ್ರಾಮದಲ್ಲಿ ನಾಲ್ಕು ವರ್ಷದ ಬಾಲಕನೊಬ್ಬ ಸುಮಾರು 220 ಅಡಿ ಆಳದ ತೆರೆದ ಕೊಳವೆಬಾವಿಗೆ ಆಕಸ್ಮಿಕವಾಗಿ ಬಿದ್ದಿರುವ ಘಟನೆ ಇಂದು ಮಂಗಳವಾರ ನಡೆದಿದೆ. ನಿರ್ಭಯ್ ಸಿಂಗ್ ಎಂಬ ಬಾಲಕನನ್ನು ರಕ್ಷಿಸಲು ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF), ಪೊಲೀಸರು, ಭಾರತೀಯ ಸೇನೆ ಹಾಗೂ ಸ್ಥಳೀಯ ಆಡಳಿತ ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ.
ಮಾಹಿತಿಯ ಪ್ರಕಾರ, ನಿರ್ಭಯ್ ಸಿಂಗ್ ತನ್ನ ತಂದೆ ಮಂಜಿತ್ ಅವರೊಂದಿಗೆ ಕೃಷಿ ಜಮೀನಿಗೆ ತೆರಳಿದ್ದ. ಈ ವೇಳೆ ತಂದೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ ತನ್ನ ತಂದೆಗೆ ಊಟ ನೀಡಲು ತೆರಳಿದ್ದರು. ಅವರ ಹಿಂದೆಯೇ ಆಟವಾಡುತ್ತಾ ಬಂದಿದ್ದ ನಿರ್ಭಯ್, ಹೊಲದಲ್ಲಿ ಮುಚ್ಚದೆ ಬಿಟ್ಟಿದ್ದ ಕೊಳವೆಬಾವಿಯ ಸಮೀಪಕ್ಕೆ ಹೋಗಿದ್ದಾನೆ. ಇದೇ ವೇಳೆ ಕಾಲು ಜಾರಿ ಸುಮಾರು 220 ಅಡಿ ಆಳದ ಕೊಳವೆಬಾವಿಗೆ ಬಿದ್ದಿದ್ದಾನೆ.
ಬಾಲಕನ ಚೀರಾಟ ಕೇಳಿದ ತಂದೆ ಮತ್ತು ತಾತ ತಕ್ಷಣ ಸ್ಥಳಕ್ಕೆ ಧಾವಿಸಿ ನೋಡಿದಾಗ, ಆತ ಕೊಳವೆ ಬಾವಿಯೊಳಗೆ ಬಿದ್ದಿರುವುದು ಗೊತ್ತಾಗಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಅಧಿಕಾರಿಗಳು ತುರ್ತಾಗಿ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.
ಪ್ರಸ್ತುತ ರಾಜ್ಯ ವಿಪತ್ತು ನಿರ್ವಹಣಾ ಪಡೆ, ಭಾರತೀಯ ಸೇನೆ ಹಾಗೂ ಸ್ಥಳೀಯ ಆಡಳಿತದ ತಂಡಗಳು ವಿಶೇಷ ಯಂತ್ರೋಪಕರಣಗಳನ್ನು ಬಳಸಿಕೊಂಡು ಬಾಲಕನನ್ನು ಸುರಕ್ಷಿತವಾಗಿ ಹೊರತೆಗೆಯಲು ಶ್ರಮಿಸುತ್ತಿವೆ. ಅಗತ್ಯವಿದ್ದಲ್ಲಿ ಕೊಳವೆಬಾವಿಯ ಪಕ್ಕದಲ್ಲಿ ಸಮಾನಾಂತರವಾಗಿ ಗುಂಡಿ ತೋಡಿ ಬಾಲಕನನ್ನು ರಕ್ಷಿಸುವ ಆಯ್ಕೆಯನ್ನೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಘಟನಾ ಸ್ಥಳದಲ್ಲಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದು, ಬಾಲಕ ಸುರಕ್ಷಿತವಾಗಿ ಹೊರಬರಲೆಂದು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಿರಂತರವಾಗಿ ಮುಂದುವರಿದಿದ್ದು, ಬಾಲಕನ ಆರೋಗ್ಯ ಸ್ಥಿತಿ ಅಥವಾ ರಕ್ಷಣೆಯ ಕುರಿತು ಅಧಿಕಾರಿಗಳು ಇನ್ನೂ ಯಾವುದೇ ಅಧಿಕೃತ ಮಾಹಿತಿ ಪ್ರಕಟಿಸಿಲ್ಲ.
ಈ ಘಟನೆ ಮತ್ತೆ ತೆರೆದ ಕೊಳವೆಬಾವಿಗಳ ಸುರಕ್ಷತೆ ಕುರಿತು ಪ್ರಶ್ನೆಗಳನ್ನು ಎಬ್ಬಿಸಿದ್ದು, ಇಂತಹ ಅಪಘಾತಗಳನ್ನು ತಡೆಯಲು ಬಳಕೆಯಲ್ಲಿಲ್ಲದ ಕೊಳವೆಬಾವಿಗಳನ್ನು ಕಡ್ಡಾಯವಾಗಿ ಮುಚ್ಚುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.




