ಸಿಲಿಕಾನ್ ಸಿಟಿ ಬೆಂಗಳೂರು ನಗರದ ಹೆಚ್ಚುತ್ತಿರುವ ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರ ನೀಡುವ ಉದ್ದೇಶ ಹೊಂದಿರುವ ಬಹುನಿರೀಕ್ಷಿತ ಸರ್ಜಾಪುರ-ಹೆಬ್ಬಾಳ ಮೆಟ್ರೋ ‘ರೆಡ್ ಲೈನ್’ ಯೋಜನೆ ಈಗ ಮತ್ತೊಂದು ಮಹತ್ವದ ಹಂತಕ್ಕೆ ತಲುಪಿದೆ. ‘ರೆಡ್ ಲೈನ್’ ಯೋಜನೆಗೆ ಕೇಂದ್ರ ಸರ್ಕಾರದ ಅನುಮೋದನೆ ಪಡೆಯಲು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ವೆಚ್ಚ ಕಡಿತದ ಮಹತ್ವದ ನಿರ್ಧಾರ ಕೈಗೊಂಡಿದೆ.
ಈ ಕಾರಿಡಾರ್ನ ವಿಸ್ತೃತ ಯೋಜನಾ ವರದಿ (DPR) ವೆಚ್ಚದ ಬಗ್ಗೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಎರಡು ಬಾರಿ ಆಕ್ಷೇಪ ವ್ಯಕ್ತಪಡಿಸಿತ್ತು. ಇದರಿಂದ ಯೋಜನೆಗೆ ಅನುಮೋದನೆ ವಿಳಂಬವಾಗುವ ಸಾಧ್ಯತೆ ಎದುರಾಗಿತ್ತು. ಇದೀಗ ಕೇಂದ್ರ ಸರ್ಕಾರದ ನಿಯಮಗಳಿಗೆ ಅನುಗುಣವಾಗಿ ಯೋಜನೆಯನ್ನು ಮುಂದುವರಿಸಲು ಬಿಎಂಆರ್ಸಿಎಲ್ ಸುಮಾರು ₹2,920 ಕೋಟಿ ರೂ. ವೆಚ್ಚ ಕಡಿತಗೊಳಿಸಲು ಮುಂದಾಗಿದೆ.
ಈ ವೆಚ್ಚ ಕಡಿತದ ಭಾಗವಾಗಿ ಮೇಖ್ರಿ ಸರ್ಕಲ್ ಮತ್ತು ಗಂಗಾನಗರ ನಡುವಿನ ‘ಪಶು ವೈದ್ಯಕೀಯ ಕಾಲೇಜು’ ಅಂಡರ್ಗ್ರೌಂಡ್ ಮೆಟ್ರೋ ನಿಲ್ದಾಣವನ್ನು ಕೈಬಿಡುವ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೇಂದ್ರದ ಸಲಹೆಯ ಮೇರೆಗೆ ರಚಿಸಲಾದ ಸ್ವತಂತ್ರ ಸಮಿತಿಯ ಶಿಫಾರಸಿನ ಆಧಾರದ ಮೇಲೆ ಈ ಬದಲಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಒಟ್ಟು 37 ಕಿಲೋ ಮೀಟರ್ ಉದ್ದದ ಸರ್ಜಾಪುರ-ಹೆಬ್ಬಾಳ ಮೆಟ್ರೋ ಮಾರ್ಗಕ್ಕೆ 2024ರಲ್ಲಿ ರಾಜ್ಯ ಸರ್ಕಾರ 28,405 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಅನುಮೋದನೆ ನೀಡಿತ್ತು. ಈ ಯೋಜನೆಯಲ್ಲಿ 17 ಎಲಿವೇಟೆಡ್ ಹಾಗೂ 11 ಭೂಗತ ನಿಲ್ದಾಣಗಳನ್ನು ನಿರ್ಮಿಸುವ ಯೋಜನೆಯನ್ನು ಸರ್ಕಾರ ರೂಪಿಸಿತ್ತು.
ಭೂಸ್ವಾಧೀನ, ಸುರಂಗ ಕಾಮಗಾರಿ, ಹಳಿ ನಿರ್ಮಾಣ, ಸಿಗ್ನಲಿಂಗ್, ವಿದ್ಯುತ್ ವ್ಯವಸ್ಥೆ ಹಾಗೂ ರೈಲು ಕೋಚ್ಗಳ ಪೂರೈಕೆ ಸೇರಿದಂತೆ ಹಲವು ಪ್ರಮುಖ ಅಂಶಗಳನ್ನು ಪರಿಗಣಿಸಿ ಈ ವೆಚ್ಚ ನಿಗದಿಪಡಿಸಲಾಗಿತ್ತು. ಆದರೆ ಯೋಜನೆಯ ವೇಗ ಹೆಚ್ಚಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ಪರಿಷ್ಕೃತ ಕಾರಿಡಾರ್ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿದೆ.
ಈ ಹೊಸ ವರದಿಯನ್ನು ಮತ್ತೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುತ್ತಿದ್ದು, ಕಡಿಮೆಯಾದ ವೆಚ್ಚದ ಹಿನ್ನೆಲೆಯಲ್ಲಿ ಈ ಬಾರಿ ಅನುಮೋದನೆ ದೊರೆಯುವ ಸಾಧ್ಯತೆ ಹೆಚ್ಚಾಗಿದೆ. ರೆಡ್ ಲೈನ್ ಮೆಟ್ರೋ ಆರಂಭವಾದರೆ ಸರ್ಜಾಪುರ, ಹೆಬ್ಬಾಳ ಸೇರಿದಂತೆ ಹಲವು ಪ್ರಮುಖ ಪ್ರದೇಶಗಳ ಸಂಪರ್ಕ ಸುಧಾರಿಸಿ, ಬೆಂಗಳೂರು ಜನತೆಯ ಸಂಚಾರ ಸಮಸ್ಯೆಗೆ ದೊಡ್ಡ ಮಟ್ಟದ ಪರಿಹಾರ ಸಿಗುವ ನಿರೀಕ್ಷೆಯಿದೆ.





